ಭಾರತದ ಗಾಥೆ

ಭಾರತದ ಗಾಥೆ

ಭಾರತದ ಗಾಥೆ 

ಹೇಳುವೆ ಕೇಳಿ ಜಗದಲಿ ಜ್ಞಾನದ ಬೀಡೆಂದು 

ಹೆಸರಾದ ಭಾರತದ ಕಥೆಯನ್ನ

ಸಿಂಧೂ ನದಿ ದಡದಿ ನಾಗರಿಕತೆ ಕಟ್ಟಿ 

ಬೆಳೆಯುತ ಹೆಸರಾದ ಮಣ್ಣಿನ ಕಥೆಯನ್ನ //

ಪರಕೀಯರ ಕೈಗೆ ಸಿಕ್ಕಿ ನರಳಿ ನೊಂದ 

ಜನರ ಕಥೆಯನ್ನ

ಗುಂಡಿಗೆ ಎದೆಯೊಡ್ಡಿ ನಿಂತ ಶೂರ ಧೀರ 

ಸ್ವಾಭಿಮಾನಿ ಭಾರತೀಯರ ಕಥೆಯನ್ನ//

ಮುತ್ತು ರತ್ನ ರಾಶಿ ರಾಶಿ ಗಿರಿ ಶಿಖರ 

ಅಘನಾಶಿನಿ ನೋಡು ನನ್ನ ಭಾರತ 

ಬಾನಿನೆತ್ತರ ಭಾರತದ ಕೀರುತಿ

ರಾಜ ಮಹಾರಾಜರ ಶೂರತ್ವದ ಆರತಿ/ 

ಕಂಡುಹಿಡಿದರಂದು ಭೂಪ್ರದೇಶಗಳ 

ದಂಡಾಗಿ ಬಂದರಂದೇ ವ್ಯಾಪಾರಕ

ಸಂಪದ್ಭರಿತ ಮಸಾಲೆ ಪದಾರ್ಥಗಳ 

ಬೆಳೆಯುವ ತಾಯ್ನಾಡಾದ ಭಾರತಕ//

ವಸಾಹತುಗಳ ಸ್ಥಾಪನೆ ವ್ಯಾಪಾರ 

ಕೇಂದ್ರಗಳ ಕಟ್ಟಿ ನೆಲೆಯೂರಿದರು

ಹಣದ ಆಸೆ ತೋರಿಸುತ ಎಲ್ಲ 

ಸಂಪತ್ತು ಕೊಳ್ಳೆ ಹೊಡೆದರು //

ದುಡ್ಡಿನ ಆಸೆಗೆ ಏರಿತು ನಶೆ 

ತುಂಬಿದವು ದಲ್ಲಾಳಿಗಳಾ ಕಿಸೆ

ಹೆಚ್ಚಾಯಿತು ದುಷ್ಟರ ತೃಷೆ 

ಅವರಿವರಿಗೆ ಭಾರತ ಆಯಿತು ಎಲ್ಲಾ ಹಿಸೆ//

ಅಲ್ಲಲ್ಲಿ ಒಳ ಜಗಳಗಳು ಬ್ರಿಟಿಷರ 

ಪಿತೂರಿಗೆ ಜನ ಬಲಿಯು 

ಅಲ್ಪಮತಿಗಳು ನಯವಂಚಕ ನರಿಗಳು 

ಜೊಲ್ಲು ಸೋರಿಸುತ ಮೋಸ ಮಾಡಿದರು//

ಮರುಳ ಭಾರತೀಯರ ಕೊರಳ ಮೋಸದಿ 

ಕೊಯ್ದರು ಕೂದಲೆಳೆಯಿಂದ 

ಅವರಿವರಿಗೆ ಒಳ ಜಗಳಗಳ ಹಚ್ಚಿ 

ಮೋಜ ನೋಡಿದರು ತಾವು ಹೆಚ್ಚಿ //

ಮಸೆದರು ಹಲ್ಲು ಬೀಸಿದರೂ ಕತ್ತಿ 

ಆಯಿತು ಭಾರತ ಕೆಂಪು ಕೋತಿಗಳಿಗಾಹುತಿ 

ನಮ್ಮ ನೆಲದಲೇ ನಮಗೆ ದಾಸ್ಯ 

ಧರಿಸಿದರವರು ನಾನಾವಾವೇಶ //

ಎಲ್ಲೆಲ್ಲೂ ಅವರದೇ ಆಟಾಟೋಪ 

ಗುಡಿ ಗುಂಡಾರಗಳೆಲ್ಲ ನಾಶ 

ಮೊದಮೊದಲು ತಿಳಿಯಲಿಲ್ಲಿವರಿಗೆ

ಹೊಳೆಯಿತು ಸುಮ್ಮನಿದ್ದರೆ ಎಲ್ಲಾ ವಿನಾಶ //

ಬುದ್ಧಿಜೀವಿಗಳ ಮತಿಗೆ ಹೊಳೆಯಿತು 

ಸುಮ್ಮನಿದ್ದರೆ ಎಲ್ಲಾ ವಿನಾಶ 

ಗುಂಪು ಕಟ್ಟಿದರು ಕ್ರಾಂತಿ ಚಳುವಳಿ 

ಸತ್ಯಾಗ್ರಹ ಗೈದರು ಭಾರತೀಯರು //

ಬ್ರಿಟಿಷರ ಓಡಿಸುವುದೊಂದೆ ಗುರಿಯೆಂದು 

ತೊಡೆತಟ್ಟಿ ನಿಂತರು ಅಂದು 

ಹೋರಾಟಗಳು ಕ್ರಾಂತಿಗಳು ದೇಶದ 

ತುಂಬೆಲ್ಲ ಹೆಡೆಯೆತ್ತಿದವು //

ಗುಂಡಿಗೆ ಹೆದರಲಿಲ್ಲ ಧೀರತ್ವ ಬಿಡಲಿಲ್ಲ 

ಭಾರತಾಂಬೆಗೆ ಇಂದೇ ಸಾಯಲು ಸಿದ್ಧರಾದರೆಲ್ಲ 

ಭಾರತ ನಮ್ಮದು ತೊಲಗಿರಿ ನಾವು ಬಿಡುವವರಲ್ಲ 

ಹೆಮ್ಮೆಯ ಭಾರತ ಎಂದೆಂದಿಗೂ ನಮ್ಮದು //

ಎನ್ನುತ ಘೋಷಣೆ ಮೊಳಗಿಸಿದರು 

ಬ್ರಿಟಿಷರನ್ನು ಹಾಗೆ ಅಲ್ಲಾಡಿಸಿದರು 

ಮಧ್ಯರಾತ್ರಿಯಲಿ ಸತ್ಯ ತ್ಯಾಗ ಶಾಂತಿಗೆ ಮಣಿದ 

ಬ್ರಿಟಿಷರು ಭಾರತ ಬಿಟ್ಟು ತೊಲಗಿದರು //

ಕೆಂಪುಕೋಟೆಯ ಮೇಲೆ ಭಾರತೀಯರು 

ಕೇಸರಿ ಬಿಳಿ ಹಸಿರು ಧ್ವಜ ಹಾರಿಸಿದರು 

ದೇಶದ ಮುನ್ನಡೆಗೆ ಚಿಂತಿಸಿದರು 

ಅಂಬೇಡ್ಕರರ ನೇತೃತ್ವದಲ್ಲಿ ಸೂತ್ರ ಹೆಣೆದರು// 

ಹರಿದು ಹಂಚಿ ಹೋದ ಪ್ರದೇಶಗಳ 

ಭಾಷೆಯ ಆಧಾರದಿ ಒಟ್ಟುಗೂಡಿಸಿದರು

ಭಾಷಾವಾರು ಪ್ರಾಂತ್ಯಾಗಳು 

ಆಡಳಿತದ ಅನುಕೂಲಕ್ಕೆ ಆದವು ರಾಜ್ಯಗಳು ,//

ಜನವರಿ ಇಪ್ಪತ್ತಾರರ ದಿನವು

ನಮ್ಮೆಲ್ಲರಿಗೆ ಸಂಭ್ರಮದ ದಿನವು 

ಗಣರಾಜ್ಯದ ದಿನವು

ನಾವೆಲ್ಲ ಭಾರತೀಯರು ಒಂದೇ 

ಒಂದೇ ತಾಯಿಯ ಮಕ್ಕಳು//

ಅರಳಲಿ ಸುಂದರ ಕುಸುಮಗಳು

ಬೀರಲಿ ಮನುಜ ಮತ ವಿಶ್ವಪಥ 

ದೇಶಕ್ಕಾಗಿ ದುಡಿಯಲಿ ತನು 

ಮಿಡಿಯಲಿ ಮನ ಸತ್ಯ ಶುದ್ಧತೆಗಾಗಿ //

ಸಂತಸದಿಂದಿರಲಿ ನನ್ನೆಲ್ಲ ಜನ 

ನಲಿಯುತ ಹಸಿರಾಗಲಿ ಭಾರತದ ನಂದನ 

ಸ್ವಾಭಿಮಾನದ ಸುಮವರಳಲಿ 

ಒಗ್ಗಟ್ಟೇ ಮಂತ್ರವಾಗಲಿ //

ನಾವೆಲ್ಲ ಭಾರತೀಯರು ಒಂದೇ 

ಜಗ ಗೆದ್ದು ನಿಲ್ಲುವೆವು 

ಭ್ರಾತೃತ್ವ ಮೆರೆವೆವು ನಾವೆಲ್ಲ 

ಒಂದೇ ಎನ್ನುವ ಪಣ ತೋಡುವೆವು 

ವಂದೇ ಮಾತರಂ ಜಯಕಾರ ಹಾಕುವೆವು//

ಸಾಗಿರಿ ನಿಲ್ಲದೆ ಮುಂದೆ ಮುಂದೆ 

ಮನುಜ ಮತ ವಿಶ್ವಪಥ ಇರಲಿ ನಮ್ಮೊಂದಿಗೆ 

ಎಲ್ಲರೊಂದೇ ಎಂಬ ಮಂತ್ರ ಮೊಳಗಲಿಂದೆ 

ದ್ವೇಷಾಸೂಯೆ ಮತ್ಸರ ಕೊಂದೆ //

ಡಾ ಅನ್ನಪೂರ್ಣ ಹಿರೇಮಠ