.ಓ ಮಾತೃ ಭೂಮಿಯೇ

.ಓ ಮಾತೃ ಭೂಮಿಯೇ
ಓ ಮಾನವ ಜನ್ಮಗಳ ಜನ್ಮದಾತೆ
ನಿನ್ನಲ್ಲಿಯೂ ಮೇಲು-ಕೀಳು
ಶ್ರಿಮಂತ-ಬಡವ ಎನ್ನುತ್ತಿರುವಾಗ
ಓ ಮಾತೃ ಭೂಮಿಯೇ
ಇದಕೆ ನ್ಯಾಯ ಕೊಡುವೆಯಾ?
ಹುಟ್ಟುತ್ತಲೇ ಅಣ್ಣತಮ್ಮಂದಿರು
ಬೆಳೆಯುತ್ತಲೇ ದಾಯಾದಿಗಳನ್ನು
ಸೃಷ್ಠಿ ಮಾಡಿದ ಜನ್ಮದಾತೆ ನೀನು
ಎಲ್ಲರೊಂದಿಗೆ ದ್ವೇಷ- ಅಸೂಯೆ
ಹುಟ್ಟಿಕೊಳ್ಳುತ್ತಿದೆ ದಿನನಿತ್ಯ
ಓ ಮಾತೃ ಭೂಮಿಯೇ
ನೀನೇನು ಮಾಡುತ್ತಿರುವೆ ಹೇಳು?
ಮಹಾನ್ ವ್ಯಕ್ತಿಗಳ ಚರಿತ್ರೆಯಲ್ಲಿ
ನೋವು ನಲಿವಿನ ಆಟ ಆಡಿದೆ ನೀನು
ಬಟ್ಟ ಬಯಲಿನ ಶರಣರಿಗೂ ಬಿಟ್ಟಿಲ್ಲಾ ನೀನು
ಓ ಮಾತೃ ಭೂಮಿಯೇ
ಇದರಿಂದ ಮುಕ್ತಿ ನೀಡುವೆಯಾ?
ನನ್ನವರು ಅನ್ನುವವರು ನನಗಾಗಲಿಲ್ಲಾ
ನನ್ನವರು ಯಾರೆಂದು ನೀ ತಿಳಿಸಲಿಲ್ಲಾ
ನಿನ್ನ ಮಾಯೆಯನು ನಾ ಅರಿಯಲಿಲ್ಲ
ಓ ಮಾತೃ ಭೂಮಿಯೇ
ನೀ ಹೀಗೇಕೆ ಮಾಡಿದೆ?
ಹೆಣ್ಣು-ಹೊನ್ನು-ಮಣ್ಣು
ಸೃಷ್ಠಿಸಿದ ಈ ಜಗಕ್ಕೆ
ಜ್ವಾಲೆ ಹೊತ್ತಿ ಉರಿಯುತ್ತಿದೆ
ಹೀಗೇಕೆ ನಡೆಯುತ್ತಿದೆ ಈ ಜಗದಲ್ಲಿ
ಓ ಮಾತೃ ಭೂಮಿಯೇ
ಕಾರಣವಾದರೂ ಹೇಳುವೆಯಾ?
ಅಧಿಕಾರ-ಅಂತಸ್ಸು ಸ್ಥಿರವಿಲ್ಲದಿದ್ದರೂ
ಅಣ್ಣ-ತಮ್ಮ ಅಕ್ಕ-ತಂಗಿ ಬಂಧುಬಳಗ
ಹೊಡೆದಾಡುವುದು ದಿನನಿತ್ಯ ತಪ್ಪಿದ್ದಲ್ಲಾ
ಈ ಜಗದ ಆಟ ಏನೋ ಇದೆ
ಎಲ್ಲವನೂ ನೀ ಬಲ್ಲೆ
ಓ ಮಾತೃ ಭೂಮಿಯೇ
ಉತ್ತರ ನೀನೇ ಹೇಳುವೆಯಾ?
ಹಳ್ಳಿಯೇ ಇರಲಿ, ಪಟ್ಟಣವೇ ಇರಲಿ
ಶಾಂತಿಯೂ ಸಿಗದೇ ಈ ಜನರೆಲ್ಲಾ
ಒದ್ದಾಡಿ ಸಾಯುತ್ತಿದ್ದಾರಲ್ಲಾ
ಓ ಮಾತೃ ಭೂಮಿಯೇ
ಇದಕೆ ಪರಿಹಾರ ನೀಡುವೆಯಾ?
ಜಗಕ್ಕೆಲ್ಲಾ ಜನ್ಮಕೊಟ್ಟು ಸಾಕಿ-ಸಲಹಿ
ಸಾವು-ನೋವುಗಳ ಮಧ್ಯೆಯೆ ಆಟ
ಆಡುತ್ತಿರುವೆಯಲ್ಲ
ಓ ಮಾತೃ ಭೂಮಿಯೇ
ನಿನ್ನಾಟ ಬಯಲಾಟ
ಯಾರು ಬಲ್ಲರು ನೀನೇ ಹೇಳು?
ನಾವೆಲ್ಲರೂ ಒಂದೇ ತಾಯ ಮಕ್ಕಳೆಂದು
ಕೂಗಿದರೂ ಭೇದ-ಭಾವ ತಪ್ಪಲಿಲ್ಲ
ಏನು ತಾಯಿ ನಿನ್ನ ಮಹಿಮೆ
ಓ ಮಾತೃ ಭೂಮಿಯೇ
ನಾ ಹೇಗೆ ತಿಳಿಯಲಿ?
ನಿನ್ನ ಮಹಿಮೆಯ ಅರಿವು
ಜಗಕ್ಕೆಲ್ಲಾ ನೀಡು
ಜಗವೆಲ್ಲ ನಗುತ್ತಿರಲಿ ತಾಯೆ
ಓ ಮಾತೃ ಭೂಮಿಯೇ.
ಡಾ.ನಾಗಪ್ಪ ಟಿ ಗೋಗಿ
ಕಲಬುರ್ಗಿಯಲ್ಲಿ ನಡೆದಿರುವ ೮೫ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ ಮಾಡಲಾಗಿದೆ. ದಿನಾಂಕ ೦೭-೦೨-೨೦೨೦