ಮಿರಿಯಾಣ: ಶಹಾಬಾದ ಕಲ್ಲು ಗಣಿಗಳ ಮೇಲೆ ಜೆಸ್ಕಾಂ ದಾಳಿ 13 ಟಿಸಿ ಜಪ್ತಿ

ಮಿರಿಯಾಣ: ಶಹಾಬಾದ ಕಲ್ಲು ಗಣಿಗಳ ಮೇಲೆ ಜೆಸ್ಕಾಂ ದಾಳಿ 13 ಟಿಸಿ ಜಪ್ತಿ
ಚಿಂಚೋಳಿ: ತಾಲ್ಲೂಕಿನ ಮಿರಿಯಾಣ ಮತ್ತು ಕಿಷ್ಟಾಪುರ ಗ್ರಾಮಗಳಲ್ಲಿ ನಡೆಯುತ್ತಿರುವ ಶಹಾಬಾದ ಕಲ್ಲು ಗಣಿಗಳ ಮೇಲೆ ಜೆಸ್ಕಾಂ ವಿಚಕ್ಷಣ ದಳ ಗುರುವಾರ ದಾಳಿ ಮಾಡಿದೆ. ಇನ್ಸಪೆಕ್ಟರ ದಿವ್ಯಾ, ಎಇಇ ಲತಾ, ಕಾಮಣ್ಣ ಇಂಜಳ್ಳಿ, ಬಾಬ್ರುದ್ದಿನ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ 13 ಟಿಸಿ, ಕಲ್ಲು ಕತ್ತರಿಸುವ 2 ಯಂತ್ರಗಳು ಮತ್ತು ವಿದ್ಯುತ್ ತಂತಿ ಜಪ್ತಿ ಮಾಡಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಗಣಿ ಮಾಲೀಕರು ರಸ್ತೆ ಬಂದ ಮಾಡಿ ಕುತಂತ್ರ ನಡೆಸಿದರೂ ಜಗ್ಗದೇ ದಾಳಿಮುಂದುವರಿಸುವ ಮೂಲಕ ಬದ್ದತೆ ಪ್ರದರ್ಶಿದ್ದಾರೆ.
ಮಾರ್ಚ ತಿಂಗಳಲ್ಲಿ ಮಾಡಿದ್ದ ಜೆಸ್ಕಾಂ ಈಗ ಎರಡನೇ ಬಾರಿಗೆ ದಾಳಿಮಾಡಿದ್ದು ಅಕ್ರಮ ಗಣಿಗಾರಿಕೆಗೆ ಪುಷ್ಟಿ ನೀಡಿದೆ. ಜೆಸ್ಕಾಂ ಅಧಿಕಾರಿಗಳ ನಡೆಗೆ ತಾಲ್ಲೂಕಿನಲ್ಲಿ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಹಲವು ಬಾರಿ ಗಣಿ ಕಾರ್ಯಪಡೆ ಸಭೆ ನಡೆಸಲಾಗಿದ್ದು ಅಧಿಕಾರಿಗಳು ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಮುಂದಾಗಿದ್ದರು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 24 ಅಕ್ರಮ ಗಣಿಗಳ ಪಟ್ಟಿ ಸಭೆಗೆ ನೀಡಿದ್ದರು. ಸಭೆಯಲ್ಲಿ ಸೇಡಂ ಎಸಿ ಪ್ರಭುರೆಡ್ಡಿ ಸೂಚನೆಯಂತೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದವರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗಿದ್ದು 15ಕ್ಕೂ ಹೆಚ್ಚು ಮಂದಿ ವಿರುದ್ದ ಚಿಂಚೋಳಿ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಿದ್ದಾರೆ. ಮಾರ್ಚ ದಾಳಿಯಲ್ಲಿ10ಕ್ಕೂ ಹೆಚ್ಚು ಟಿಸಿ ಜಪ್ತಿ ಮಾಡಲಾಗಿತ್ತು. ಈ ಸಂಬಂಧ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅಕ್ರಮ ಗಣಿಗಾರಿಕೆ ಮತ್ತು ವಿದ್ಯುತ್ ಕಳ್ಳತನ ಸವಾಲಾಗಿ ಸ್ವೀಕರಿಸಿದ ಅಧಿಕಾರಿಗಳು ಗಣಿ ಕುಳಗಳ ಹಿಂದೆ ಬಿದ್ದು ಶಾಕ್ ನೀಡಿದ್ದಾರೆ.