ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಕನ್ನಡ ತಾಂತ್ರಿಕ ಪದಪ್ರಯೋಗದ ಅಗತ್ಯತೆ – ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ

ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಕನ್ನಡ ತಾಂತ್ರಿಕ ಪದಪ್ರಯೋಗದ ಅಗತ್ಯತೆ – ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ

'ಕನ್ನಡ ಭಾಷೆಯಲ್ಲಿ ಸಮಾಜ ವಿಜ್ಞಾನಗಳ ತಾಂತ್ರಿಕ ಪದಪ್ರಯೋಗದ ವಿಕಾಸ, ಬಳಕೆ ಮತ್ತು ಸಮಸ್ಯೆಗಳು' ವಿಚಾರ ಸಂಕಿರಣದಲ್ಲಿ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಅಭಿಪ್ರಾಯ

ಕನ್ನಡ ಪರಿಭಾಷಾ ಕೋಶದಿಂದ ವಿಭಿನ್ನ ಜ್ಞಾನ ವಿಸ್ತರಣೆ

ಕಲಬುರಗಿ: ಸಮಾಜ ವಿಜ್ಞಾನ ವಿಷಯ ಒಳಗೊಂಡ ಕನ್ನಡ ಪರಿಭಾಷೆ ಪದಕೋಶ ಪ್ರಕಟಣೆ ಮಹತ್ವದ ವಿಷಯ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕನ್ನಡ ಪರಿಭಾಷಾ ಕೋಶದಿಂದ ವಿಭಿನ್ನ ಜ್ಞಾನ ಪಡೆಯಬಹುದು. ತಾಂತ್ರಿಕ ಪರಿಭಾಷಾ ಪದಕೋಶ ಅಧ್ಯಯನದಿಂದ ವಿಷಯಾಸಕ್ತಿ, ಜ್ಞಾನ ಮತ್ತು ಗುಣಮಟ್ಟದ ಬೋದನೆಗೆ ಮೌಲ್ಯ ಬರಲಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಹೇಳಿದರು. 

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆಯ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗದ ಪ್ರಾಯೋಜಕತ್ವದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಮಂಥನ ಸಭಾಂಗಣದಲ್ಲಿ ಆಯೋಜಿಸಿದ 'ಕನ್ನಡ ಭಾಷೆಯಲ್ಲಿ ಸಮಾಜ ವಿಜ್ಞಾನಗಳ ತಾಂತ್ರಿಕ ಪದಪ್ರಯೋಗದ ವಿಕಾಸ, ಬಳಕೆ ಮತ್ತು ಸಮಸ್ಯೆಗಳು' ರಾಷ್ಟ್ರೀಯ ವಿಚಾರ ಸಂಕಿರಣವನ್ನು ಡಿಜಿಟಲ್ ಲ್ಯಾಂಪ್ ಬಟನ್ ಕ್ಲಿಕ್ ಮಾಡಿ ನಂತರ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಮಾತೃ ಭಾಷೆಗೆ ಅಗಾಧ ಶಕ್ತಿಯಿದೆ. ಕನ್ನಡ ತಾಂತ್ರಿಕ ಪದಗಳ ಬಳಕೆ ಮತ್ತು ಪೋಷಣೆಯಿಂದ ಕನ್ನಡ ಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ಜೊತೆಗೆ ಸಂಶೋಧನಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಬಹುದು. ಕನ್ನಡ ಪದಕೋಶ ಬಳಕೆಯಿಂದ ಜಗತ್ತಿನ ವಿವಿಧ ಕ್ಷೇತ್ರ ಮತ್ತು ವಿಷಯಗಳ ವೈಜ್ಞಾನಿಕ ಸಂಶೋಧನೆಗಳ ಮೇಲೆ ಬೆಳಕು ಚೆಲ್ಲಬಹುದು. ಜಗತ್ತಿನ ಪ್ರತಿಷ್ಠಿತ ನಿಯತಕಾಲಿಕೆಗಳು, ಪೀರ್ ರೀವಿವ್ಡ್ ಜರ್ನಲ್, ಇಂಪ್ಯಾಕ್ಟ ಪ್ಯಾಕ್ರ‍್ಸ್ ಜರ್ನಲ್‌ಗಳಲ್ಲಿ ಗುಣಮಟ್ಟದ ಲೇಖನಗಳು ಪ್ರಕಟಣೆಗೆ ಒಳಪಡುತ್ತವೆ ಎಂದರು.  

ಭಾರತ ಸರ್ಕಾರದ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗದ ಸಹಾಯಕ ನಿರ್ದೇಶಕ ಡಾ. ಸಂತೋಷ್ ಕುಮಾರ್ ಮುಖ್ಯ ಭಾಷಣಕಾರರಾಗಿ ಮಾತನಾಡಿ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗ ಬೇರೆ ಭಾಷೆಯ ಪದಗಳನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡುವಾಗ ಈ ಮುಖ್ಯವಾದ 11 ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಅನುವಾದ ಮಾಡಿದರೆ ಭಾಷೆಯ ಗಟ್ಟಿತನ ಹೆಚ್ಚುತ್ತದೆ. ಅದರ ಹಿನ್ನೆಲೆಯಲ್ಲಿ ಸುಮಾರು 22 ಭಾಷೆಗಳಲ್ಲಿ ಈ ಪದಕೋಶ ಸಿದ್ಧವಾಗಿದೆ. ದೇಶದ ಶೇಕಡ 70 ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ. ಅವರಿಗೆ ದೇಶದ ವಿವಿಧ ಭಾಷೆಗಳಲ್ಲಿನ ಮಾಹಿತಿಯನ್ನು ಕನ್ನಡ ಭಾಷೆಯ ಪದಕೋಶದಿಂದ ನೀಡುವುದು ಅತಿ ಅವಶ್ಯಕ. ದೇಶದ ಬೇರೆ ರಾಜ್ಯಗಳ ಜನರಿಗೆ ಮಾತೃಭಾಷೆಯೊಂದಿಗೆ ಭಾವನಾತ್ಮಕ ಸಂಬAಧವಿದೆ. ಜೀವನದ ಹಾಸುಹೊಕ್ಕಾಗಿರುವ ಭಾಷೆ ಮೂಲಕ ಜಗತ್ತಿನ ಜ್ಞಾನ ಹಂಚಿಕೆ ಮತ್ತು ಬಳಕೆಗೆ ಅಕಾಡೆಮಿ ಒತ್ತು ನೀಡುತ್ತಿದೆ. ಅಕಾಡೆಮಿ ವಿವಿಧ ವಿಶ್ವವಿದ್ಯಾಲಯಗಳ ಭಾಷಾ ವಿದ್ವಾಂಸರು, ವಿಷಯ ತಜ್ಞರ ಸಭೆ ನಡೆಸಿ ಅವರ ಸಹಕಾರದಿಂದ ಈ ಕಾರ್ಯಕ್ರಮ ರಚನಾತ್ಮಕವಾಗಿ ಯಶಸ್ವಿಯಾಗಿ ನಡೆದಿದೆ ಎಂದರು.   

ವಿಶ್ವವಿದ್ಯಾಲಯದ ಗ್ರಂಥಪಾಲಕ ಹಾಗೂ ಐಕ್ಯೂಎಸಿ ನಿರ್ದೇಶಕ ಡಾ. ಸುರೇಶ್ ಜಂಗೆ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತ ಸರ್ಕಾರದ ಶಿಕ್ಷಣ ಇಲಾಖೆ ಮತ್ತು ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗ ಒದಗಿಸಿರುವ ಅವಕಾಶದಿಂದ ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಮಹತ್ವ ಬಂದAತಾಗಿದೆ. ನಮ್ಮ ವಿಶ್ವವಿದ್ಯಾಲಯದ ಉತ್ತಮ ಶೈಕ್ಷಣಿಕ ಪರಿಸರದಲ್ಲಿ ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಮತ್ತು ಸಕಾರಾತ್ಮಕ ಮನೋಭಾವದಿಂದ ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ರಾಜ್ಯದ 12 ಜನ ವಿದ್ವಾಂಸರನ್ನೊಳಗೊAಡ ತಂಡ ರಚಿಸಿರುವ ಪದಕೋಶದಲ್ಲಿ ಸುಮಾರು ಆರು ಸಾವಿರ ಕನ್ನಡ ಪದಗಳ ಅರ್ಥಗಳಿವೆ. ಇದರ ಸದುಪಯೋಗ ನಮ್ಮ ವಿದ್ಯಾರ್ಥಿಗಳಿಗೆ ಸಿಗಲಿದೆ ಎಂದರು. 

ಗ್ರಂಥಾಲಯದ ಗ್ರಂಥಪಾಲಕ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ಕೆ. ಪ್ರವೀಣ್ ಕುಮಾರ್ ಅತಿಥಿಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ವೈಜ್ಞಾನಿಕ ಸೌಲಭ್ಯಗಳಿವೆ. ಇ-ಸಂಪನ್ಮೂಲ, ಇ- ನಿಯತಕಾಲಿಕೆಗಳು, ಐಸಿಟಿ-ಇನ್ಫಾರ್ಮೇಸನ್, ವರ್ಚುವಲ್ ಇ ಲರ್ನಿಂಗ್ ಸೌಲಭ್ಯ, ಅಂತರ್ಜಾಲ ಪುಸ್ತಕ ಸೇವೆ ಕೂಡ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ಅಗತ್ಯವಿರುವ ನಿಯತಕಾಲಿಕೆಗಳು ಗ್ರಂಥಾಲಯ ಒದಗಿಸುತ್ತಿದೆ ಎಂದರು. ಹಣಕಾಸು ಅಧಿಕಾರಿ ಶ್ರೀಮತಿ ಜಯಂಬಿಕಾ ಉಪಸ್ಥಿತರಿದ್ದರು. ಉಪ ಗ್ರಂಥಪಾಲಕಿ ಡಾ. ಮಮತಾ ಮೇಸ್ತ್ರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕು. ಪವಿತ್ರ ಪ್ರಾರ್ಥಿಸಿದರು.

ಮಧ್ಯಾಹ್ನ ಜರುಗಿದ ಗೋಷ್ಠಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಪ್ರಾದ್ಯಾಪಕರಾದ ಪ್ರೊ. ತ್ರಿವೇಣಿ, ಪರಿಭಾಷಾಕೋಶ ರಚನೆ ಮತ್ತು ಭಾಷೆಯ ಅರ್ಥ’ ಹಾಗೂ ಗ್ರಂಥಪಾಲಕ ಡಾ. ಪ್ರವೀಣ್ ಕುಮಾರ್ ‘ಪರಿಭಾಷೆಯ ಸಮಸ್ಯೆ ಮತ್ತು ಸವಾಲುಗಳು’ ಕುರಿತು ವಿಷಯ ಮಂಡಿಸಿದರು. 

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿವಿಧ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು, ಗ್ರಂಥಪಾಲಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರದಂತೆ ಸುಮಾರು 100 ಪ್ರತಿನಿಧಿಗಳು ಭಾಗವಹಿಸಿದ್ದರು. 

ಎರಡನೇ ದಿನದ ವಿಚಾರ ಸಂಕಿರಣ ಗೋಷ್ಠಿಯಲ್ಲಿ ಕನ್ನಡ ಭಾಷೆ ಮತ್ತು ಪದಕೋಶ ಪರಿಭಾಷೆ ಕುರಿತು ಅಫಜಲಪುರ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕಿ ಡಾ ಸಾವಿತ್ರಿ ಕೃಷ್ಣ, ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್. ಟಿ. ಪೋತೆ, ಅರ್ಥಶಾಸ್ತ್ರ ,ವಿಭಾಗದ ಮುಖ್ಯಸ್ಥ ಪ್ರೊ. ದಶರಥ ನಾಯಕ್, ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕ ಡಾ. ಎಂ. ಬಿ. ಕಟ್ಟಿ ವಿಷಯ ಮಂಡಿಸುವರು.