ಉದ್ಯೋಗ ಪಡೆಯಲು ವಿಶೇಷ ಕೌಶಲ ಅವಶ್ಯಕ ಮೌಲ್ಯ ಹಾಗೂ ಕೌಶಲವಿದ್ದರೆ ಕ್ಯಾಂಪಸ್ ಆಗಲಿದೆ : ಫಹೀಮ್ ಸಲಹೆ

ಉದ್ಯೋಗ ಪಡೆಯಲು ವಿಶೇಷ ಕೌಶಲ ಅವಶ್ಯಕ
ಮೌಲ್ಯ ಹಾಗೂ ಕೌಶಲವಿದ್ದರೆ ಕ್ಯಾಂಪಸ್ ಆಗಲಿದೆ : ಫಹೀಮ್ ಸಲಹೆ
ನರೇಗಲ್: ವಿದ್ಯಾರ್ಥಿಗಳ ಕೌಶಲಕ್ಕೆ ತಕ್ಕಂತೆ ವಿವಿಧ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳು ಸೃಷ್ಟಿಯಾಗುತ್ತಿವೆ. ಅದಕ್ಕಾಗಿ ತಂತ್ರಜ್ಞಾನದಲ್ಲಿ ಹಾಗೂ ಮಾತನಾಡುವ ವಿಧಾನದಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಕೌಶಲ ಹೊಂದುವುದು ಅನಿವಾರ್ಯವಾಗಿದೆ ಎಂದು ಬೆಂಗಳೂರಿನ ಗಣಿತ್ ಸ್ಕೂಲ್ ಸಂಸ್ಥೆಯ ಸ್ಥಾಪಕ ಫಹೀಮ್ ಮಕಾಂದಾರ್ ಹೇಳಿದರು.
ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಐಕ್ಯೂಎಸಿ ವಿಭಾಗದ ವತಿಯಿಂದ ಬಿಸಿಎ ಹಾಗೂ ಬಿಎಸ್ಸಿ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜನೆ ಮಾಡಲಾಗಿದ್ದ ‘ಕೌಶಲಾಭಿವೃದ್ದಿ ಹಾಗೂ ವೃತ್ತಿ ಮಾರ್ಗದರ್ಶನʼದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವು ಕ್ರಾಂತಿಕಾರಿ ಬದಲಾವಣೆಗಳನ್ನು ದಿನವೂ ತರುತ್ತಿದೆ. ಇದರ ನಡುವೆಯೂ ಜೀವನದಲ್ಲಿ ಕಲಿಕೆ ಹಾಗೂ ಭವಿಷ್ಯದ ಭಾಗವಾಗಿ ಸವಾಲುಗಳನ್ನು ಸ್ವೀಕರಿಸಲು ಗಟ್ಟಿಯಾಗಿರಬೇಕು. ಕೋಡಿಂಗ್ ಜೊತೆಗೆ ಎಐ, ಎಐಎಂಎಲ್, ರೋಬೋಟಿಕ್ಸ್ ನಾನಾ ಬಗೆಯ ಕೌಶಲಗಳ ಅಗತ್ಯವಿದೆ. ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಹೊಸ ಕೌಶಲ ಕಲಿತಿದ್ದರೆ ಮಾತ್ರ ವೃತ್ತಿಯಲ್ಲಿ ನೆರವು ದೊರೆಯುತ್ತದೆ ಎಂದರು. ಪದವಿ ತರಗತಿಗೆ ಪ್ರವೇಶ ಪಡೆದ ಮೊದಲ ದಿನದಿಂದಲೇ ಮೌಲ್ಯ ಹಾಗೂ ಕೌಶಲಕ್ಕೆ ಮಹತ್ವ ನೀಡಿ ಕಲಿಯಬೇಕು. ಸಮಯ ಪಾಲನೆ ಮಾಡಿಕೊಳ್ಳದೆ ವ್ಯರ್ಥ ಮಾಡಿದರೆ ಮುಂದೊಂದು ದಿನ ದುಡ್ಡು ಖರ್ಚು ಮಾಡಿ ಕಾಂಪಸ್ ಸಂದರ್ಶನಕ್ಕೆ ಹಾಗೂ ವೃತ್ತಿ ತರಬೇತಿಗೆ ಅಲೆಯುವ ದಿನಗಳು ಬರುತ್ತವೆ. ಅದಕ್ಕಾಗಿ ಈಗಲೇ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಎಸ್. ಎಲ್. ಗುಳೇದಗುಡ್ಡ ಮಾತನಾಡಿ, ನಾವು ಕಲಿಯುವಾಗ ಸೌಲಭ್ಯಗಳ ಕೊರತೆ ಬಹಳವಿತ್ತು. ಆದರೆ ಈಗ ಅನೇಕ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ನಿಮ್ಮ ಮನೆ ಬಾಗಿಲಿಗೆ ಬರುತ್ತಿವೆ. ಎಐ ತಂತ್ರಜ್ಞಾನದ ಮೂಲಕ ಕಡಿಮೆ ಅವಧಿಯಲ್ಲಿ ಅನೇಕ ಮಾಹಿತಿ ಸಿಗುತ್ತಿದೆ. ವಿಶೇಷ ತರಬೇತಿಯ ಉಪನ್ಯಾಸಕರ ಸಹಾಯದಿಂದ ದೊರೆಯುವ ಜ್ಞಾನದ ಸದುಪಯೋಗ ಪಡಿದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.
ಈ ವೇಳೆ ಐಕ್ಯೂಎಸಿ ಸಂಚಾಲಕಿ ಜಯಶ್ರೀ ಮುತಗಾರ, ಬಿಸಿಎ ಮುಖ್ಯಸ್ಥೆ ಶಶಿಕಲಾ ವಿ. ಎಸ್ ಇದ್ದರು.