ಅವಸರದ ರೇಕಣ್ಣ ಶರಣ

ಅವಸರದ ರೇಕಣ್ಣ ಶರಣ

ಅವಸರದ ರೇಕಣ್ಣ ಶರಣ 

ಸ್ಥಲವ ಮೆಟ್ಟಿ ನಡೆವಲ್ಲಿ ಪಕ್ವವಾದ ಹಣ್ಣಿನ ತೆರ,

ಹಿಪ್ಪೆ ಬೀಜದ ಮಧ್ಯದಲ್ಲಿ ಇಪ್ಪ ರಸದಂತೆ.

ಬೀಜ ಒಳಗು, ಹಿಪ್ಪೆ ಹೊರಗು ರಸ ಮಧ್ಯದಲ್ಲಿಪ್ಪ ಭೇದವ ನೋಡಾ. ಬೀಜದ ಬಲಿಕೆಯಿಂದ ಹಿಪ್ಪೆ ಬಲಿದು, ಹಿಪ್ಪೆಯ ಬಲಿಕೆಯಿಂದ ಬೀಜ ನಿಂದು,

ಉಭಯದ ಬಲಿಕೆಯಿಂದ ಮಧುರ ರಸ

ನಿಂದುದ ಕಂಡು,

ಹಿಪ್ಪೆ ಬೀಜ ಹೊರಗಾದುದನರಿತು ಆ ರಸಪಾನವ ಸ್ವೀಕರಿಸುವಲ್ಲಿ ಜ್ಞಾನದಿಂದ ಒದಗಿದ ಕ್ರೀ ಕ್ರೀಯಿಂದ ಒದಗಿದ ಜ್ಞಾನ.

ಇಂತೀ ಭೇದವಲ್ಲದೆ ಮಾತಿಗೆ ಮಾತ ಗಂಟನಿಕ್ಕಿ

ನಿಹಿತ ವರ್ತನವಿಲ್ಲದೆ ಸರ್ವತೂತಾಲಂಬರ

ಮಾತು ಸಾಕಂತಿರಲಿ. ಕ್ರೀಯಲ್ಲಿ ಮಾರ್ಗ, ಭಾವದಲ್ಲಿ ನೆಮ್ಮುಗೆ, ದಿವ್ಯ ಜ್ಞಾನದಲ್ಲಿ ಕೂಟ. ಇದು ಸದ್ಯೋಜಾತ ಲಿಂಗದ ಷಟ್‍ಸ್ಥಲ ಲೇಪದಾಟ.

      *ಅವಸರದ ರೇಕಣ್ಣ ಶರಣ*

          ವಚನ ಅನುಸಂಧಾನ*

ಅಪ್ಪ ಬಸವಾದಿ ಶರಣರು ಲಿಂಗಾಯತ ಧರ್ಮ ಕಟ್ಟಿ; ಅಷ್ಟಾವರಣ, ಷಟಸ್ಥಲ, ಪಂಚಾಚಾರ, ಕಾಯಕ, ದಾಸೋಹಗಳಂಥ ಅತ್ಯಮೂಲ್ಯವಾದ ತತ್ವ ಸಿದ್ಧಾಂತಗಳ ಮೂಲಕ ಅವುಗಳನ್ನು ಸ್ವತಃ ಸಾಕ್ಷಾತ್ ತಮ್ಮ ಅರಿವು ಆಚರಣೆಗಳ ಸಾಧನೆ ಮಾಡಿ ತಮ್ಮ ನಿತ್ಯದ ಬದುಕಿನಲ್ಲಿ ನಡೆ ನುಡಿಯ ಸಾಂಗತ್ಯ ಸಾಮರಸ್ಯದ ಪರಿಣಾಮದಿಂದ ರೂಪ ಗೊಂಡು ಅನುಭವ ಮಂಟಪದ ನಿಕಷಕ್ಕೆ ಒಡ್ಡಿ ಕೊಂಡು 'ಅನುಭಾವ'ದ ನವನೀತವನ್ನು ವಚನ ಗಳಲ್ಲಿಟ್ಟು ಶರಣ ಮಾರ್ಗವನ್ನು ರೂಪಿಸಿ, ಅದಕ್ಕೆ ಸರ್ವಸಮಾನತೆಯ ನಿಜಆಶಯದ ನೆಲೆಯಲ್ಲಿ ಮಾನವೀಯ ಮೌಲ್ಯಗಳನ್ನ ವಚನಗಳ ಆಧಾರ ದಲ್ಲಿ ಸಂವಿಧಾನ ರಚಿಸುವ ಮೂಲಕ, ಬಸವ/ವಚನ/ಶರಣ/ಲಿಂಗಾಯತ ಹೀಗೆ ಹಲ ಕೆಲವು ಹೆಸರಿನಲ್ಲಿ ಗುರುತಿಸಲ್ಪಡುವಂಥ ಪ್ರಕೃತಿ ಸಹಜ ಧರ್ಮವನ್ನು ಕಟ್ಟಿ ಕೊಟ್ಟು,ಅನನ್ಯ ಅನುಭಾವದ ವಚನ ಸಾಹಿತ್ಯ ಸಂಪತ್ತನ್ನು ತಮ್ಮ ಬಲಿದಾನದ ಮೂಲಕ ಉಳಿಸಿ, ಜಗದ ಜನಮಾನಸವು ಬೆಳಗ ಲೆಂದು ನಮಗೆಬಿಟ್ಟು ಹೋಗಿದ್ದಾರೆ. ಹಾಗಾಗಿ, ಶರಣರ ತ್ಯಾಗ ಬಲಿದಾನದ ನಿಟ್ಟಿನಲ್ಲಿ ದೃಷ್ಟಿಯ ನ್ನಿಟ್ಟು ಶರಣರಾದ ಅವಸರದ ರೇಕಣ್ಣನವರ ಈ ಮೇಲಿನ ವಚನದ ಅನುಸಂಧಾನವನ್ನೀಗ ಇಲ್ಲಿ ಮಾಡೋಣ.

*ಸ್ಥಲವ ಮೆಟ್ಟಿ ನಡೆವಲ್ಲಿ ಪಕ್ವವಾದ ಹಣ್ಣಿನ ತೆರ,*

*ಹಿಪ್ಪೆ ಬೀಜದ ಮಧ್ಯದಲ್ಲಿ ಇಪ್ಪ ರಸದಂತೆ.* *ಬೀಜ ಒಳಗು,* *ಹಿಪ್ಪೆ ಹೊರಗು ರಸ ಮಧ್ಯದಲ್ಲಿಪ್ಪ ಭೇದವ #ನೋಡಾ.*

ಶರಣ ಧರ್ಮದ ಬಹು ಮಹತ್ವದ ತತ್ವ ಷಟಸ್ಥಲ ಸಿದ್ಧಾಂತ. ಇದರ ಕುರಿತು ಇಲ್ಲಿ ಅತ್ಯಂತ ಅರ್ಥ ಪೂರ್ಣವಾದ ಸುಂದರ ರೂಪಕದ ಮೂಲಕವೇ ಷಟಸ್ಥಲ ಸಾಧನಾ ಮಾರ್ಗದ ವಿವಿಧ ಹಂತಗಳ ಲ್ಲಿನ ಬೆಳವಣಿಗೆಯ ವಿಕಾಸದ ವಿಚಾರವನ್ನ ಇಲ್ಲಿ ವಚನದ ಈ ಪ್ರಾರಂಭಿಕ ಸಾಲುಗಳಲ್ಲಿ ಅವಸರ ದ ರೇಕಣ್ಣ ಶರಣರು ಆಕರ್ಷಕವಾಗಿ ಕಟ್ಟಿಕೊಟ್ಟಿ ದ್ದಾರೆ. ಅದು ಹೇಗೆಂದು ನೋಡುವ; ಷಟಸ್ಥಲ ಮೆಟ್ಟಿ (ಸಾಧನೆ ಮಾಡಿ) ನಡೆದಲ್ಲಿ ಅದು ಪಕ್ವವಾ ದ ಹಣ್ಣಿನ ಹಾಗೆ ಹಿಪ್ಪೆ ಬೀಜದ ಮಧ್ಯದಲ್ಲಿನ ರಸ ದಂತೆ. ಒಳಗೆ ಬೀಜ ಹೊರಗೆ ಹಿಪ್ಪೆಯೊಳಗೆ ರಸ ಮಧ್ಯದಲ್ಲಿರುವ ಬೆರಗಿನ ಬೇಧವು ನಿಸರ್ಗದ ಈ ಜೈವಿಕ ವ್ಯವಸ್ಥೆಯ ಅದ್ಭುತ ನೋಡಾ ಎನ್ನುವಲ್ಲಿ ರೇಕಣ್ಣಶರಣರು ತಮ್ಮ ವಚನಾಂಕಿತ ದೈವವಾದ ಇಷ್ಟಲಿಂಗದಲ್ಲಿ ನಿವೇದನೆ ಮಾಡುತ್ತಾರೆ. ವಚನ ಮುಂದುವರಿದು,

*#ಬೀಜದ ಬಲಿಕೆಯಿಂದ ಹಿಪ್ಪೆ ಬಲಿದು,* *ಹಿಪ್ಪೆಯ ಬಲಿಕೆಯಿಂದ ಬೀಜ ನಿಂದು,* *ಉಭಯದ ಬಲಿಕೆಯಿಂದ ಮಧುರ ರಸ ನಿಂದುದ #ಕಂಡು,*

ಹಿಪ್ಪೆ , ಬೀಜ ಮತ್ತು ರಸ ಇವು ಒಂದಕ್ಕೊಂದು ಪರಸ್ಪರ ಪೂರಕವಾಗಿ ಕಾಲಾನುಸರಿಸಿ ಬೆಳವಣಿ ಗೆ ಹೊಂದುತ್ತವೆ. ಸ್ಥೂಲ ಸೂಕ್ಷ್ಮ ಕಾರಣ ಶರೀರ ಗಳು ಒಂದರಿಂದ ಒಂದು ವಿಕಾಸ ಹೊಂದುತ್ತಾ ಬೆಳೆದು ಬೆಳಗುವವು. ಅದರಂತೆಯೇ ವ್ಯಕ್ತಿಯು ತನ್ನ ತನುವಿನಲ್ಲಿ ಕೂಡಾ ಷಟಸ್ಥಲ ಮೆಟ್ಟಿ ಸೂಕ್ಷ್ಮ ದಲ್ಲಿ ನಡೆಯುವ ಮೂಲಕ ಕಾರಣ ಶರೀರದಲ್ಲಿ ಆಂತರಿಕ ಬೆಳವಣಿಗೆ ಆಗುತ್ತದೆಂದು ನಾವಿಲ್ಲಿ ಪರಿಭಾವಿಸಿ ತಿಳಿದುಕೊಳ್ಳಬಹುದು. ಮುಂದುವರಿದ ವಚನದಲ್ಲಿ;

*#ಹಿಪ್ಪೆ ಬೀಜ ಹೊರಗಾದುದನರಿತು ಆ* *ರಸಪಾನವ ಸ್ವೀಕರಿಸುವಲ್ಲಿ* *ಜ್ಞಾನದಿಂದ ಒದಗಿದ ಕ್ರೀ ಕ್ರೀಯಿಂದ ಒದಗಿದ #ಜ್ಞಾನ.*

ಮಾಗಿದ ಹಣ್ಣಿನ ಸಿಪ್ಪೆ ಮತ್ತು ಬೀಜ ಹೊರಗಾದು ದನ್ನು ತಿಳಿದು ಆ ರಸವನ್ನು ಸ್ವೀಕರಿಸುವ ರೀತಿ ಯಲ್ಲಿ ಷಟಸ್ಥಲ ಸಾಧಕನ ಪರಿಯೂ ಇರುತ್ತದೆ ಎಂದು ತಿಳಿಯ ಬೇಕು. ಜ್ಞಾನದಿಂದ ಅಂದರೆ ಅರಿವಿನಿಂದ ದೊರೆಯುವ ಕ್ರಿಯೆ ಹಾಗೂ ಆ ಕ್ರಿಯೆಯಿಂದ ಸಿಗುವ ಜ್ಞಾನಕ್ಕೆ ಪರಸ್ಪರ ಪೂರಕ ಸಂಬಂಧ ಇರುತ್ತದೆ ಎನ್ನುವುದನ್ನು ವಚನದ ಈ ಸಾಲಿನಲ್ಲಿ ಹೇಳಿದ್ದಾರೆ. ವಚನದ ಮುಂದಿನ ಸಾಲಿನಲ್ಲಿ ಏನಿದೆ ನೋಡೋಣ,

*#ಇಂತೀ ಭೇದವಲ್ಲದೆ ಮಾತಿಗೆ ಮಾತ ಗಂಟನಿಕ್ಕಿ*

*ನಿಹಿತ ವರ್ತನವಿಲ್ಲದೆ *ಸರ್ವತೂತಾಲಂಬರ*

*ಮಾತು ಸಾಕಂತಿರಲಿ.* *ಕ್ರೀಯಲ್ಲಿ ಮಾರ್ಗ,*

*ಭಾವದಲ್ಲಿ ನೆಮ್ಮುಗೆ, ದಿವ್ಯ ಜ್ಞಾನದಲ್ಲಿ ಕೂಟ.*

*ಇದು ಸದ್ಯೋಜಾತ ಲಿಂಗದ ಷಟ್‍ಸ್ಥಲ #ಲೇಪದಾಟ.*

ಈ ರೀತಿಯಲ್ಲಿ ಷಟಸ್ಥಲ ಸಾಧನೆ ಇರುವಾಗ, ಅದನ್ನು ಕ್ರಿಯಾತ್ಮಕವಾಗಿ ಅನುಷ್ಠಾನಕ್ಕೆ ತಾರದೇ ಕೇವಲ ಒಣ ಮಾತಿಗೆ ಮಾತು ಪೋಣಿಸಿ ಮಾತ ನಾಡುವಂಥಾ ಉತ್ತರ ಕುಮಾರರ ಜಂಭದ ನುಡಿ ಸಾಕು. ಕ್ರಿಯಾ ಮಾರ್ಗ ಹಿಡಿದು, ಭಾವದಲ್ಲಿ ದೃಢತೆಯನ್ನು ಹೊಂದಿ, ದಿವ್ಯಜ್ಞಾನದಲ್ಲಿ ಬೆಳಗಿ "ಇಷ್ಟಲಿಂಗ"ದ ನಿಜವಾದ ಅನುಸಂಧಾನವನ್ನು ನೆರವೇರಿಸಿದರೆ ಮಾತ್ರ ಅದು ನಿಜವಾದ ಸದ್ಯೋ ಜಾತಲಿಂಗದ 'ಷಟಸ್ಥಳದ ಕೂಟ'ವಾಗಿರುತ್ತದೆ ಎಂದು ಪ್ರಸ್ತುತ ವಚನವು; "ಷಟಸ್ಥಳ" ದ ನಿಜ ಸಾಧನೆಯ ಕುರಿತಂತೆ ಹೇಳುವಲ್ಲಿ ಒಂದು ಪಕ್ವ ವಾದ ಹಣ್ಣಿನ ಸುಂದರ ರೂಪಕದ ಮಾದರಿಯ ದೃಷ್ಟಾಂತದ ಮೂಲಕ ಅತ್ಯಂತ ಸ್ಪಷ್ಟವಾಗಿ ಇಲ್ಲಿ ಹೇಳಲಾಗಿದೆ ಎನಿಸುತ್ತದೆ.

  *ಅಳಗುಂಡಿ ಅಂದಾನಯ್ಯ*