ದೇಶದ ಮಾತೃ ಶಕ್ತಿ ಶಾಪಕ್ಕೆ ಕಾಂಗ್ರೆಸ್ ಗುರಿಯಾಗಲಿದೆ : ಡಾ.ಉಮೇಶ್ ಜಾಧವ್
ದೇಶದ ಮಾತೃ ಶಕ್ತಿ ಶಾಪಕ್ಕೆ ಕಾಂಗ್ರೆಸ್ ಗುರಿಯಾಗಲಿದೆ : ಡಾ.ಉಮೇಶ್ ಜಾಧವ್
*ನಾರಿ ಶಕ್ತಿ ವಂದನ್ ಮೀಸಲಾತಿ ಮಸೂದೆ ವಿರೋಧಿಸಿದ್ದಕ್ಕೆ ತಕ್ಕ ಶಿಕ್ಷೆ ಖಚಿತ*
ಕಲಬುರಗಿ. : ದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೇಕಡ 33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಮಂಡಿಸಿದ ನಾರಿ ಶಕ್ತಿ ವಂದನಾ ಪ್ರಸ್ತಾಪವನ್ನು ಸೋಲಿಸಿ ದೇಶದ ಮಹಿಳಾ ಶಕ್ತಿಗೆ ಅವಮಾನ ಮಾಡಿದ ಕಾಂಗ್ರೆಸ್ಸಿಗೆ ಮಾತೃಶಕ್ತಿಯ ಶಾಪ ತಟ್ಟಲಿದೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಮಹಿಳಾ ಶಕ್ತಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಜನಸಂಖ್ಯೆ ಆಧಾರದ ಮೇಲೆ ಶೇಕಡ 33ರಷ್ಟು ಮೀಸಲಾತಿಯನ್ನು ನೀಡಿ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಅವಕಾಶ ನೀಡುವ ಹಾಗೂ ಶೇಕಡ 50ರಷ್ಟು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಕ್ಷೇತ್ರ ಪುನರ್ ವಿಂಗಡಣೆ ಪ್ರಸ್ತಾಪವನ್ನು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟವು ವಿರೋಧಿಸಿ ದೇಶದ ಮಹಿಳೆಯರಿಗೆ ಅನ್ಯಾಯವನ್ನು ಮಾಡಿದೆ. ದೇಶದ ಇತಿಹಾಸದಲ್ಲಿ ಮಹಿಳೆಯರಿಗೆ ಅವರ ಹಕ್ಕನ್ನು ಸಂವಿಧಾನದತ್ತವಾಗಿ ಕೊಡ ಮಾಡುವ ಪ್ರಧಾನಿ ಮೋದಿಯವರ ಕನಸಿಗೆ ಅಡ್ಡಿಯಾದ ಕಾಂಗ್ರೆಸ್ಸಿಗೆ ದೇಶದ ಮಾತೃ ಶಕ್ತಿ ಮುನಿಯಲಿದೆ.ಮಾತ್ರವಲ್ಲ ಮುಂದಿನ ಚುನಾವಣೆಗಳಲ್ಲಿ ಮಹಿಳೆಯರು ಕಾಂಗ್ರೆಸ್ಸಿಗೆ ಪಕ್ಕ ಪಾಠ ಕಲಿಸಲಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದು ಕೋಡ್ ಬಿಲ್ ಲೋಕಸಭೆಯಲ್ಲಿ ಮಂಡಿಸಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡುವಾಗಲು ಕಾಂಗ್ರೆಸ್ ವಿರೋಧಿಸಿದ ಇತಿಹಾಸವನ್ನು ಹೊಂದಿದೆ. ಈ ಹಿಂದೆ ಮಂಡಲ್ ಕಮಿಷನ್ ವಿರೋಧಿಸಿದಂತೆ ಇದೀಗ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮಹಿಳಾ ಮೀಸಲಾತಿಯನ್ನು ಕೂಡಾ ಧಿಕ್ಕರಿಸಿ ದೇಶದ ಮಾತೃ ಶಕ್ತಿಗೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ಧೂಳಿಪಟವಾಗುತ್ತಿದ್ದು ಕ್ಷೇತ್ರ ಪುನರ್ವಿಂಗಡನೆ ಮತ್ತು ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಿದ ಕಾಂಗ್ರೆಸ್ ಮುಂದೆ ನಾಮಾವಶೇಷವಾಗಲಿದೆ ಎಂದು ಜಾಧವ್ ತೀವ್ರವಾಗಿ ಟೀಕಿಸಿದ್ದಾರೆ. ಕ್ಷೇತ್ರ ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಅನುಷ್ಠಾನಗೊಂಡರೆ ಕಾಂಗ್ರೆಸ್ಸಿಗೆ ಮುಂದೆ ಅಪಾಯವಿದೆ ಎಂಬ ಭಯದಿಂದ ಮಸೂದೆಯ ವಿರುದ್ಧ ನಿಂತು ಲೋಕಸಭೆಯಲ್ಲಿ ಎರಡು ಮಸೂದೆಗಳಿಗೆ ಸೋಲುಂಟಾಯಿತು. ಇದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ದೇಶದ ಮಹಿಳೆಯರು ಎಂದಿಗೂ ಕ್ಷಮಿಸಲಾರರು.
ಈ ಹಿಂದೆ ಮುಸ್ಲಿಂ ಮಹಿಳೆಯರ ಹಿತಕ್ಕಾಗಿ ಜಾರಿಗೆ ತಂದ ತಲಾಖ್ ಹಾಗೂ ದೇಶದ ಸುರಕ್ಷತೆಯ ದೃಷ್ಟಿಯಿಂದ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ರದ್ದತಿ ಮಸೂದೆ ಜಾರಿ ಮಾಡಿದಾಗಲೂ ಹಾಗೂ ಸರ್ಜಿಕಲ್ ಸ್ಟ್ರೈಕ್ ಮಾಡಿದಾಗಲೂ ಕಾಂಗ್ರೆಸ್ ತನ್ನ ತೀವ್ರ ವಿರೋಧ ವ್ಯಕ್ತಪಡಿಸಿ ದೇಶದ ಹಿತದ ವಿರುದ್ಧ ನಡೆದುಕೊಂಡಿರುವುದು ಜಗಜ್ಜಾಹೀರಾಗಿದೆ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಪಾಲ್ಗೊಳ್ಳದಂತೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಪಡೆ ನಡೆದುಕೊಂಡು ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಅಭಿವೃದ್ಧಿ ವಿರೋಧಿ ಪಕ್ಷಗಳು ಎಂಬ ಹಣೆಪಟ್ಟಿಯನ್ನು ಈಗ ಕಟ್ಟಿಕೊಂಡಿದೆ. ಮುಂದಿನ ದಿನಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಈಡೇರಿಸಲು ದೇಶದ ಮಾತೃ ಶಕ್ತಿ ಒಂದಾಗಿ ಬೆಂಬಲಿಸುವುದು ಖಚಿತ. ಕ್ಷೇತ್ರ ಪುನರ್ ವಿಂಗಡನೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಸೋಲಿಸಿದ ಕಾಂಗ್ರೆಸ್ಸಿನ ಅತ್ಯಂತ ಕೆಟ್ಟ ನಿರ್ಧಾರಕ್ಕೆ ಮನಸ್ಸಿಗೆ ತೀವ್ರ ಬೇಸರವಾಗಿದೆ ಎಂದು ಡಾ. ಉಮೇಶ್ ಜಾಧವ್ ಪತ್ರಿಕಾ ಪ್ರಕಟಣೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
