ಜಾಗತಿಕ ಯುಗದಲ್ಲಿ ಮಾನವೀಯ ಜ್ಞಾನದ ಅಗತ್ಯತೆ: ಡಾ.ಬಲಿರಾಮ ಚಡೀ

ಜಾಗತಿಕ ಯುಗದಲ್ಲಿ ಮಾನವೀಯ ಜ್ಞಾನದ ಅಗತ್ಯತೆ: ಡಾ.ಬಲಿರಾಮ ಚಡೀ

ಇಂದಿನ ಬಹು ಸಾಂಸ್ಕೃತಿಕ ಜಗತ್ತಿನಲ್ಲಿ ಮಾನವೀಯ ಜ್ಞಾನವನ್ನು ಬೆಳೆಸುವ ಮತ್ತು ಜಾಗತಿಕವಾಗಿ ಭಾರತೀಯರ ವಲಸೆಯನ್ನು ಅರ್ಥಮಾಡಿಕೊಳ್ಳುವ ಮಹತ್ವದ ಕೆಲಸಗಳಾಗಬೇಕಿದೆ” –ಡಾ.ಬಲಿರಾಮ ಚಡೀ

ಬೆಂಗಳೂರು, ನವೆಂಬರ್ 24, 2025: ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ)ಯ ಭಾಷಾ ವಿಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮಾನವತಾವಾದಿ ಕೆನಡಾದ ಅನಿವಾಸಿ ಭಾರತೀಯ ಹನುಮಾನ್ ಮಿಷನ್‌ನ ಸಂಸ್ಥಾಪಕರಾದ ಡಿ.ಲಿಟ್. ಪದವಿ ಪುರಸ್ಕೃತ ಡಾ. ಬಲಿರಾಮ್ ಚಡೀ ಅವರು,ಭಾರತೀಯ ಡಯಾಸ್ಪೊರಾ ಕುರಿತು ತಮ್ಮ ವೈಚಾರಿಕತೆಯಿಂದ ಕೂಡಿದ ಉಪನ್ಯಾಸ ನೀಡಿದರು.ಭಾಷಾವಿಭಾಗದ ಜ್ಞಾನಗೋಷ್ಠಿಯ ಭಾಗವಾಗಿ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮವು ಅಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜೀವನದ ಶಿಕ್ಷಣ ಮತ್ತು ಬೌದ್ಧಿಕ ಸಮೃದ್ಧಿಯನ್ನು ಬೆಳೆಸುವ ಉದ್ದೇಶದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾಷಾವಿಭಾಗದ ಮುಖ್ಯಸ್ಥರಾದ ಡಾ. ಎಂ.ಕೆ. ಶ್ರೀಧರ್ ಎಲ್ಲರನ್ನೂ ಸ್ವಾಗತಿಸುತ್ತ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವಿಶೇಷ ಉಪನ್ಯಾಸವನ್ನು ನೀಡಿದ ಡಾ. ಬಲಿರಾಮ ಚಡೀಯವರು ಇಂದಿನ ಬಹು ಸಾಂಸ್ಕೃತಿಕ ಜಗತ್ತಿನಲ್ಲಿ ಮಾನವೀಯ ಜ್ಞಾನವನ್ನು ಬೆಳೆಸುವ ಮತ್ತು ಜಾಗತಿಕವಾಗಿ ಭಾರತೀಯರ ವಲಸೆಯನ್ನು ಅರ್ಥಮಾಡಿಕೊಳ್ಳುವ ಮಹತ್ವದ ಕೆಲಸಗಳಾಗಬೇಕಿದೆ, ಟ್ರಿನಿಡಾಡ್ ಮತ್ತು ಟೊಬಾಗೊ, ಕೆನಡಾದಲ್ಲಿನ ತಮ್ಮ ವಾಸ್ತವ್ಯದ ಅನುಭವಗಳನ್ನು ಆಧರಿಸಿ ಭಾರತೀಯ ಡಯಾಸ್ಪೊರಾದ ಐತಿಹಾಸಿಕ ರಚನೆಯ ಕುರಿತು ಆಳವಾಗಿ ಅವಲೋಕಿಸಿದರು.1845ರಲ್ಲಿ ಫತೇಲ್ ರಜಾಕ್ ಹಡಗಿನಲ್ಲಿ ಆಗಮಿಸಿದ ಗಿರಮಿಟ್ ಕಾರ್ಮಿಕರ ಕುರುತು ಹೇಳುತ್ತ ,ಕಾಲಕ್ರಮೇಣ ಸಾಂಸ್ಕೃತಿಕ ಆಚರಣೆಗಳು ಹೇಗೆ ಬದಲಾವಣೆಗೊಂಡವು, ಇದರ ಪರಿಣಾಮ ಹೇಗಾಯಿತು, ಕೆಲವೊಂದಿಷ್ಟು ನಿಯಂತ್ರಣಗಳಿದ್ದರೂ ದೃಢವಾಗಿ ಇಂಡೋ-ಟ್ರಿನಿಡಾಡನ ಗುರುತುಗಳು ರೂಪುಗೊಂಡ ರೀತಿ ಒಂದೊಂದು ಅವಿಸ್ಮರಣೀಯ ಎಂದು ನುಡಿದರು. ಕೆರಿಬಿಯನ್ ಪ್ರದೇಶದಲ್ಲಿ ಹಬ್ಬ-ಹರಿದಿನಗಳ ಸಂಪ್ರದಾಯಗಳು,ರಾಮಾಯಣದ ಮೇಲಿನ ನಿರಂತರ ಗೌರವ ಹಾಗೂ 20ನೇ ಶತಮಾನದ ಆರಂಭದಲ್ಲಿ ಭಾರತೀಯ ಸಮುದಾಯಗಳ ಸಂಘಟನೆಗಳ ಉದಯದ ಕುರಿತು ಹೃದಯ ಸ್ಪರ್ಶಿ ನುಡಿಗಳನ್ನಾಡಿದರು.ಹೊರದೇಶದಲ್ಲಿ ಅವರು ಸ್ಥಾಪಿಸಿದ ಹನುಮಾನ್ ಮಿಷನ್‌ ಅದರೊಂದಿಗೆ ಭಾರತೀಯ ಪರಂಪರೆಯನ್ನು ಉಳಿಸಿ-ಬೆಳೆಸುವಲ್ಲಿ ಮತ್ತು ಡಯಾಸ್ಪೊರಾ ಸಮುದಾಯದ ಮಾನವೀಯ ಸೇವಾ ಕಾರ್ಯಗಳಲ್ಲಿ ಮಿಷನ್ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಹಾಗೂ

ತಮ್ಮ ಇಪ್ಪತ್ಮೂರು ವರ್ಷಗಳ ಪಯಣದ ಕೆಲವು ಅನುಭವಗಳನ್ನು ಹಂಚಿಕೊಂಡರು. ಉಪನ್ಯಾಸ ಕಾರ್ಯಕ್ರಮದ ಅದ್ಯಕ್ಷತೆಯನ್ನು ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ 

ಮುಖ್ಯ ಶಿಕ್ಷಣಾಧಿಕಾರಿಗಳಾದ ಡಾ. ಶ್ರದ್ಧಾ ಕನವರ್ ವಹಿಸಿ ಮಾತನಾಡುತ್ತ ,ಶೈಕ್ಷಣಿಕ ಸಮುದಾಯದಲ್ಲಿ ಸಾಂಸ್ಕೃತಿಕ ತಿಳುವಳಿಕೆಯನ್ನು ವಿಸ್ತರಿಸುವಲ್ಲಿ ಇಂತಹ ಅಪರೂಪದ ಗೋಷ್ಠಿಗಳ ಮೌಲ್ಯ ಅನನ್ಯವೆನಿಸುತ್ತದೆ ಎಂದರು. ಡಾ.ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.ಡಾ.ಮೀರಾ ಮೆನನ್ ವಂದಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರು, ಸಂಯೋಜಕರು,ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.