ಮಹಾಗಾಂವ ಕಳ್ಳಿಮಠದ ಕೀರ್ತಿ ಕಳಸ ಲಿಂ.ಶ್ರೀ ಗುರುಲಿಂ ಗ ಶಿವಾಚಾರ್ಯರು- ದಾಖಲೆಯ ಕೃತಿ

ಮಹಾಗಾಂವ ಕಳ್ಳಿಮಠದ ಕೀರ್ತಿ ಕಳಸ ಲಿಂ.ಶ್ರೀ ಗುರುಲಿಂ
ಗ ಶಿವಾಚಾರ್ಯರು- ದಾಖಲೆಯ ಕೃತಿ
ಕನ್ನಡ ನಾಡು ಅನೇಕ ಸಾಧುಸಂತರ, ಸತ್ಪುರುಷರ ಮಠಮಾನ್ಯಗಳ ನಡುವೆ ಬೆಳೆದು ಬಂದು ಸರ್ವಧರ್ಮ ಸಮನ್ವಯತೆಯನ್ನು ಎತ್ತಿ ಹಿಡಿದಿವೆ.ಇಂತಹ ಸಾಲಿನಲ್ಲಿ ಮಠಗಳ ಕೊಡುಗೆ ಅತ್ಯಮೂಲ್ಯವಾಗಿದೆ. ಏಕೆಂದರೆ ಮಠ ಗಳು ತಮ್ಮದೇ ಆದ ಕೇವಲ ಧಾರ್ಮಿಕ ಆಚರಣೆಯನ್ನು ಮಾಡದೆ ಅದರ ಜೊತೆಗೆ ಶೈಕ್ಷಣಿಕ ಕೇಂದ್ರವಾಗಿ ಅಯ್ಯನ ವರ ಶಾಲೆಗಳಾಗಿ, ಶಿಕ್ಷಣ ವ್ಯವಸ್ಥೆಯ ಜೊತೆಗೆ ಧಾರ್ಮಿಕ, ಸಾಮಾಜಿಕ ಮತ್ತು ಎಲ್ಲಾ ಶಾಸ್ತ್ರಗಳನ್ನು ಕಲಿಸುವ ಕೇಂದ್ರಗಳಾದವು .ನಂತರದಲ್ಲಿ ದಾಸೋಹ -ಶೈಕ್ಷಣಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳು ಕೂಡ ಅತ್ಯಂತ ಮಹತ್ವವಾಗಿದೆ. ಇಂತಹ ಮಠಗಳಲ್ಲಿ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವದ ಕಳ್ಳಿಮಠವು ಒಂದು. ಸಾಮಾಜಿಕ, ಧಾರ್ಮಿಕ ಕಾರ್ಯ ಕೈಕೊಂಡು ಬಂದಿರುವ ಜಾಗೃತ ಮಠಗಳಲ್ಲಿ ಕಳ್ಳಿ ಮಠವು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.
ಮಹಾಗಾಂವ ಕಳ್ಳಿಮಠ ಪರಂಪರೆ ಅತ್ಯಂತ ಪ್ರಾಚೀನವಾದದ್ದು. ಈ ಮಠಗಳಲ್ಲಿ ಪ್ರಥಮ ಪಟ್ಟಾಧಿಕಾರಿಗಳಾದ ಶ್ರೀ ಮಹಾಂತಯ್ಯ ಪೂಜ್ಯರು, ಶ್ರೀ ಬಸವಲಿಂಗಯ್ಯ ಶ್ರೀಗಳು, ಮರುಳಾದ್ಯ ಗುರುಗಳು, ಶ್ರೀ ಕರಬಸಯ್ಯನವರು, ಶ್ರೀ ಶಿವಶಂಕರಯ್ಯನವರು, ಆರನೆಯ ಮತ್ತು ಏಳನೆಯ ಪೀಠಾಧಿಪತಿ ಹೆಸರು ಕಂಡು ಬಂದಿಲ್ಲ. ಹಿತಿಯರಾದ ಮಹಾಂತಯ್ಯ ಸ್ವಾಮಿಗಳು, ಕಳ್ಖಿಮಠ ನೋಡಿಕೊಂಡವರು ನಂತರ ಇವರ ಮಗ ಶ್ರೀ ಚನ್ನಬಸವಯ್ಯ ಸ್ವಾಮಿಗಳನ್ನು ಎಂಟನರಯ ಪೀಠಾಧಿಪತಿ ಮಾಡಿದರು.ಮಹಾಂತಯ್ಯನವರ ಮೂರನೆಯ ಮಗ ಶ್ರೀ ವಿರೂಪಾಕ್ಷಯ್ಯನವರನ್ನು ಶ್ರೀಮಠದ ಒಂಬತ್ತನೇ ಪೀಠಾಧಿಪತಿಯಾಗಿ ಪಟ್ಟಾಧಿಕಾರ ಕಾರ್ಯನಿರ್ವಹಿಸಿದರು.ಇವರು ೦೧-೦೯-೧೯೬೨ ರಲ್ಲಿ ಜನಿಸಿದರು.೩೦-೧೨-೧೯೮೦ ರಂದು ಪಟ್ಟಾಧಿಕಾರಾ ಮಾಡಿ ದರು.ಇಂತಹ ಪರಂಪರೆಯಲ್ಲಿ ಬಂದಿರುವ ಶ್ರೀ ಗುರುಲಿಂಗಯ್ಯ ಶಿವಾಚಾರ್ಯರು ಕಳ್ಳಿ ಮಠದ ಹತ್ತನೇ ಪೀಠಾಧಿಪತಿಗಳಾಗಿ ಅವರು ಮಾಡಿದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ,ಸಾಹಿತ್ಯ,ಕೃಷಿ, ಮತ್ತು ಜನರಿಗೆ ಬೇಕಾಗಿರುವ ಅಮೂಲ್ಯವಾದ ನೈತಿಕತೆಯನ್ನು ಮತ್ತು ಜೀವನ ಮೌಲ್ಯಗಳನ್ನು ಬೋಧಿಸುವುದರ ಮೂಲಕ ಕಳ್ಳಿ ಮಠದ ಪರಂಪರೆಯನ್ನು ವಿಸ್ತರಿಸಿದವರು. ಇವರ ಕುರಿತು ಇಂದಿಗೂ ಅನೇಕರು ಒಳ್ಳೆಯ ಅಭಿಪ್ರಾಯಗಳನ್ನು ಹೊಂದಿದ್ದಾರೆ.ಧರ್ಮಗಳನ್ನು ಮೀರಿ ಜಾತಿ ಮತ ಮೀರಿ ಬೆಳವಣಿಗೆಯಾದ ಮಠ ಇದಾಗಿದೆ ಇಂತಹ ಮಠದ ಕುರಿತು ಮತ್ತು ಪೂಜ್ಯರ ಕುರಿತು ನಮ್ಮ ಹಿರಿಯ ಸಾಹಿತಿಗಳಾದ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಮಹಾಗಾಂವ್ ಕಳ್ಳಿಮಠದ ಕೀರ್ತಿ ಕಳಸ ಲಿಂಗೈಕ್ಯ ಶ್ರೀ ಗುರುಲಿಂಗ ಶಿವಾಚಾರ್ಯರು ಎಂಬ ಜೀವನ ಚರಿತ್ರೆಯನ್ನು ರಚಿಸಿದ್ದಾರೆ.
ಈ ಜೀವನ ಚರಿತ್ರೆಯಲ್ಲಿ ಮುಖ್ಯವಾಗಿ 11 ಭಾಗಗಳನ್ನು ಮಾಡಿಕೊಂಡಿದ್ದಾರೆ .ಇತಿಹಾಸ ಪರಂಪರೆಯನ್ನು ಹೇಳುವುದರ ಮುಖಾಂತರ ಆಯಾ ಸಂದರ್ಭದಲ್ಲಿ ಬಸವಣ್ಣನವರ, ಅಲ್ಲಮಪ್ರಭು ಹೀಗೆ ಹಲವರ ವಚನಗಳನ್ನ ಉಲ್ಲೇಖವನ್ನು ಮಾಡಿ ಈ ಪರಂಪರೆಗೆ ಹತ್ತು ಜನ ಪೀಠಾಧಿಪತಿಗಳಾದ ಬಗ್ಗೆ ಒಂದು ದಾಖಲೆಯನ್ನು ಕೊಟ್ಟಿದ್ದಾರೆ. ಇದು ಬಹಳಷ್ಟು ಮಹತ್ವಪೂರ್ಣವಾಗಿರುವ ಒಂದು ಇತಿಹಾಸ .ಈ ಕಳ್ಳಿ ಮಠದ ಚರಿತ್ರೆ ಇಲ್ಲಿಯ ಪುರಾತನವಾಗಿರುವ ಗ್ರಾಮ. ತರುಣ ಸಂಘಗಳು ,ಬಸವ ತೀರ್ಥ ,ಸಂಸ್ಕೃತ ವಿದ್ಯಾಪೀಠ, ಶ್ರೀ ರುದ್ರರಾಧ್ಯ ಶಾಸ್ತ್ರಿಗ ಳು ಮಹಾಗಾಂವದ ಪಂಚಾಂಗ ಕವಿರತ್ನ ಪಂಡಿತ ಹೀಗೆ ಹಲವಾರು ವಿಚಾರಗಳನ್ನು ಹೊಂದಿದ ಮಠದ ಪರಂಪರೆ ಇತಿಹಾಸ ಚರಿತ್ರೆಯನ್ನು ಮನಮುಟ್ಟುವ ಹಾಗೆ ದಾಖಲಿಸಿದ್ದಾರೆ .
ಎರಡನೇ ಭಾಗದಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯರ ಜನನ ಹಾಗೂ ಬಾಲ್ಯ ಜೀವನವನ್ನು ಅವರ ವಂಶಾವಳಿ ಯ ಮೂಲಕ ಇಲ್ಲಿ ದಾಖಲಿಸಿದ್ದಾರೆ. ಗುರುಲಿಂಗ ಶಿವಾಚಾರ್ಯರು ಎಂ.ಎ.ಥ್ವ ಶಾಸ್ತ್ರ ಪದವಿಯನ್ನು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ದಿಂದ ಕಲಿತ, ಜೀವನ ಇವರ ಸಾಧನೆ ಎಲ್ಲವುಗಳನ್ನು ಹೇಳುತ್ತಾ ಅವರ ಚರಿತ್ರೆಯನ್ನು ದಾಖಲಿಸಿದ್ದಾರೆ.ಚೆನ್ನಯ್ಯ ಮತ್ತು ಕಲ್ಯಾಣಮ್ಮ ದಂಪತಿಗಳಿಗೆ ಹುಟ್ಟಿದ ಮಗುವಿಗೆ ಗುರುಲಿಂಗಯ್ಯ ಎಂದು ನಾಮಕರಣ ಮಾಡಿದವರು. ಇವರು ಮಾಡಿದ ಕಾರ್ಯಗಳನ್ನು ಇವರು ಸಾಧಿಸಿದ ಚಿಂತನೆಗಳನ್ನು ತಮ್ಮ ದಾಖಲೆಯ ಮೂಲಕ ಅನೇಕ ಆಕರಗಳನ್ನು ಬಳಸಿಕೊಂಡು ಕಶೆಟ್ಟಿ ಅವರು ವಿವರಿಸುತ್ತಾರೆ. ಅಕಾಲಿಕವಾದ ಮರಣವನ್ನು ವಿರೂಪಾಕ್ಷಯ್ಯ ಶಿವಾಚಾರ್ಯರು ೨೫-೧೨-೨೯೮೦ ರಂದು ಶಿವಾಧೀನರಾದರು. ಅದರಂತೆ ಮೊದಲೇ ಹೇಳಿದಂತೆ ತಮ್ಮ ಚೆನ್ನಯ್ಯನವರ ಮಗನಾದ ಗುರುಲಿಂಗಯ್ಯನವರಿಗೆ ಪೀಠಾಧಿಕಾರ ಮಾಡಬೇಕೆಂದು ಬಯಸಿದರು ಆದರೆ ಇದನ್ನು ಕಣ್ತುಂಬಿ ನೋಡುವ ಅವಕಾಶ ಶ್ರೀಗಳಿಗೆ ಒದಗಲಿಲ್ಲ ಕೊನೆಗೆ ೩೦-೧೩-೧೯೮೦ ರಂದು ಪಟ್ಟಾಧಿಕಾರವನ್ನು ಮಾಡಿದರು. ಮಹಗಾವದ ಕಳ್ಳಿಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡು ಕಾರ್ಯವನ್ನು ನಿರ್ವಹಿಸಿದ ಅದರಂತೆ ಮುಂದೆ ಪಿಯುಸಿ ಯನ್ನ ಮಾತ್ರ ಓದಿರುವ ಗುರುಲಿಂಗ ಶಿವಾಚಾರ್ಯರು ಪೀಠಾರೋಣ ಆದ ನಂತರ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುವ ಸಲುವಾಗಿ ಧಾರವಾಡದ ಮುರುಘಾಮಠದಲ್ಲಿ ದ್ದು ,ಅಲ್ಲಿಯೇ ಬಿ.ಎ ಪದವಿಯನ್ನು ಪಡೆದುಕೊಂಡರು. ಎಂ.ಎ. ತತ್ವಶಾಸ್ತ್ರ ಪದವಿಯನ್ನು ಕೂಡ ಪಡೆದು ಒಳ್ಳೆಯ ಶಿಕ್ಷಣ , ಆಳವಾದ ಜ್ಞಾನವನ್ನು ಸಂಪಾದಿಸಿಕೊಂಡು ಮುರುಘಾಮಠದ ಮಹಾಂತಪ್ಪ ಶ್ರೀಗಳ ಆಶೀರ್ವಾದವನ್ನು ಪಡೆದುಕೊಂಡು ಬಂದರು.
ಶ್ರೀಗಳು ಯಾವಾಗಲೂ ರೈತ ಪರವಾದ ಚಿಂತನೆಯನ್ನು ಹೊಂದಿದವರು. ಹೀಗಾಗಿ ಕಾಯಕದಲ್ಲಿ ನಿರತರಾಗಿ ಕಾಯಕದಲ್ಲಿ ಕೈಲಾಸ ಕಂಡ ಶರಣರಂತೆ ಗುರುಲಿಂಗ ಶಿವಾಚಾರ್ಯರು ಸಹಿತ ಕೃಷಿಗೆ ಆದ್ಯತೆಯನ್ನು ಕೊಟ್ಟರು. ತಮ್ಮ ಹೊಲಗಳಲ್ಲಿ ಕೃಷಿ ಉದ್ಯೋಗವನ್ನು ಮಾಡುತ್ತಾರೆ. ಒಬ್ಬ ನಿಜವಾದ ರೈತರಾಗಿ ಬೆಳವಣಿಗೆಯನ್ನು ಹೊಂದಿದರು ೩೨ ವರ್ಷಗಳ ಸುದೀರ್ಘವಾದ ರೈತರ ಬದುಕಿಗೆ ಉಳ್ಳಾಗ ಡ್ಡಿ ಕಬ್ಬು, ಬಾಳೆ, ಕಲಂಡಿ ಹೀಗೆ ಹಲವಾರು ಬೆಳೆಗಳನ್ನು ಬೆಳೆದು ಭಕ್ತರ ಮನೆ ಮನೆಗೆ ಹೋಗಿ ಕೊಟ್ಟು ಬಂದ ಒಬ್ಬ ಅಪರೂಪದ ಸ್ವಾಮಿಗಳು.ಹೀಗಾಗಿ ಅವರನ್ನು ಕೃಷಿಕರಾಗಿ ಲೇಖಕರು ಕಂಡಿದ್ದಾರೆ.
ಶಿಕ್ಷಣ ಸಂಸ್ಥೆಯನ್ನು ತೆರೆಯುವುದರ ಮೂಲಕ ಈ ಪ್ರದೇಶ (ಭಾಗ) ದಲ್ಲಿ ಇರುವ ಅನೇಕ ಬಡ, ದೀನ, ದಲಿತ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣವನ್ನು ಕೊಡುವ ಉದ್ದೇಶದಿಂದ ೧೯೮೬ ರಲ್ಲಿ ಶ್ರೀ ಮಹಾಂತೇಶ್ವರ ಪೂರ್ವ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯನ್ನು ತೆರೆದರು. ವಿರುಪಾಕ್ಷೇಶ್ವರ ಶಿಕ್ಷಣ ಸಮಿತಿ ಕಳ್ಳಿಮಠ ಎಂಬ ಸಮಿತಿಯನ್ನು ರಚಿಸಿ ಅದರ ಅಡಿಯಲ್ಲಿ ಈ ಕಾರ್ಯವನ್ನು ಕೈಕೊಂಡ ಒಂದರಿಂದ ಏಳನೆಯ ತರಗತಿಯವರೆಗೆ ಎಂಟನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ನಿರಂತರವಾದ ಶಿಕ್ಷಣ ಸೌಲಭ್ಯವನ್ನು ಕೊಟ್ಟು ಅಲ್ಲಿ ಸೇರಿದ ೨೫ ಮಕ್ಕಳು ಪ್ರಾರಂಭದಲ್ಲಿ ಇದ್ದರೆ ,೮೦೦ ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಇಂದು ಅಧ್ಯಯನ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ಒಂದು ಶಾಲೆ ಮುಂದೆ ಸಂಸ್ಕೃತ ಪಾಠಶಾಲೆಯನ್ನು ಕೂಡ ತೆರೆಯಲಾಯಿತು ಅದನ್ನು ಶ್ರೀ ಸದ್ಗುರು ಸಿದ್ದಲಿಂಗೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ ಎಂಬ ಹೆಸರಲ್ಲಿ ಸಂಸ್ಕೃತ ವಿದ್ಯಾಭ್ಯಾಸಕ್ಕೆ ನಾಂದಿಯನ್ನು ಕೂಡ ಹಾಡಿರುವುದನ್ನು ಇಲ್ಲಿ ದಾಖಲಿಸಿದ್ದಾರೆ.
ಶ್ರೀಗಳಿಂದ ಧರ್ಮ ಕಾರ್ಯಗಳನ್ನು ಮಾಡಿದ ಅನೇಕ ಕಾರ್ಯಗಳನ್ನು ಅವರು ನಾಡಿನ ಸುತ್ತ ಓಡಾಡಿ ಧಾರ್ಮಿಕ ಕಾರ್ಯಗಳನ್ನು ಕೈಕೊಂಡ ಎಳೆ ಎಳೆಗಳನ್ನು ದಾಖಲಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಶ್ರೀ ಗುರುಲಿಂಗ ಶಿವಾಚಾರ್ಯರ ಕೊಡುಗೆ ಎಂಬ ಭಾಗದಲ್ಲಿ ಮುರುಘಾ ಮಠದ ಪೂಜ್ಯ ಮಾಹಂತಪ್ಪಗಳು, ಕರ್ನಾಟಕ ವಿಶ್ವವಿದ್ಯಾಲಯದ ಪರಿಸರ, ಇವರಿಗೆ ಸಾಕಷ್ಟು ಪ್ರೇರಣೆ ನೀಡಿವೆ.ಸಾವಧಾನ ಪತ್ರಿಕೆ ,ಪ್ರಪಂಚ ಪತ್ರಿಕೆ ಇವುಗಳಲ್ಕಿ ಇವರ ಬರಹಗಳನ್ನು ಪ್ರಕಟಿಸಿದ್ದಾರೆ.೧೨ ನೇ ಶತಮಾನದಲ್ಲಿನ ವಚನ ಸಾಹಿತ್ಯದ ಪ್ರೇರಣೆ ಪ್ರಭಾವದಿಂದಾಗಿ ಅವರು ಆಧುನಿಕ ವಚನಗಳನ್ನು ಬರೆಯ ಹತ್ತಿದರು. ಅದರಂತೆ ಶೂನ್ಯದ ಒಡಲು ಎಂಬ ಆಧುನಿಕ ವಚನಗಳ ಸಂಕಲನವನ್ನು ಪ್ರಕಟ ಮಾಡಿದರು. ೧೯೧ವಚನಗಳು ಇದರಲ್ಲಿ ಇರುವದು ಅವರು 'ಕಳ್ಳಿಮಠ ದ ವಿರುಪಾಕ್ಷ 'ಎನ್ನುವ ಅಂಕಿತದಲ್ಲಿ ಬರೆದಿರುವುದನ್ನು ಕಾಣುತ್ತೇವೆ .ಸೂಕ್ತಿ ಸುಧೆ- ನುಡಿಮುತ್ತುಗಳು, ದೇಗುಲ ಕವನ ಸಂಕಲನ, ಶ್ರೀ ಗುರು ವಿರುಪಾಕ್ಷ ಶಿವಾಚಾರ್ಯರ ೧೦೮ ನಾಮಾವಳಿ ಮತ್ತು ಮಂಗಳಾರತಿ ಹೀಗೆ ನಾಲ್ಕು ಮೌಲಿಕವಾದ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡುವುದರ ಮೂಲಕ ಸಾಹಿತ್ಯ ಸೇವೆಯನ್ನು ಮಾಡಿರುವುದನ್ನು ಲೇಖಕರು ವಿಶ್ಲೇಷಣೆ ಮಾಡಿದ್ದಾರೆ.
ಬಯಲಲ್ಲಿ ಬಯಲು ಎಂಬ ಶೀರ್ಷಿಕೆಯ ಅಡಿಯಲ್ಲಿ ಅವರು ೧೪-೦೧-೨೦೨೨ ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಪುಣ್ಯ ಸ್ನಾನಕ್ಕೆ ತಮ್ಮೊಂದಿಗೆ ಬರಲು ದೂರವಾಣಿಯ ಮೂಲಕ ಪರಮ ಭಕ್ತರಾಗಿರುವ ಶರಣಬಸಪ್ಪ ಕಲ್ಯಾಣ ಬಾಳಿಯವರು ಒತ್ತಾಯ ಮಾಡಿ ಕರೆದಾಗ ಪತ್ನಿಯ ಜೊತೆಗೂಡಿ ಪುಣ್ಯ ಸ್ಥಾನಕ್ಕೆ ಬಂದಿದ್ದಾರೆ. ಕಾಗಿಣಾ ನದಿ ನೀರಿನಲ್ಲಿ ಈಸುವಾಗಲೇ ಅವರು ಹೃದಯಘಾತದಿಂದ ಲಿಂಗೈಕರಾದರು. ಹೀಗಾಗಿ ಸಂಕ್ರಾಂತಿ ಶುಭದಿನ ಅವರಿಗೆ ಶುಭವಾಗಲಿಲ್ಲ. ಭಕ್ತ ಕೋಟಿ ಜನರೆಲ್ಲ ಸೇರಿ ಅವರಿಗೆ ಕಣ್ಣೀರ ಧಾರೆ ಹರಿಸಿದರು. ಅವರ ಸಂಸ್ಕಾರ ಕ್ರಿಯೆಗಳನ್ನು ಮುಗಿಸಿದ ಬಗ್ಗೆ ಇವರ ನೀಡಿದ್ದಾರೆ. ಶ್ರೀ ಮಠಕ್ಕೆ ಹತ್ತನೇ ಪೀಠಾಧಿಪತಿ ಯಾರು ಆಗಬೇಕೆಂದು ಕೊಂಡಾಗಲೇ ೧೧ ನೆಯ ಉತ್ತರಾಧಿಕಾರಿ ಯಾಗಿ ಡಾ. ಶಿವಲಿಂಗಯ್ಯನವರ ಮೊಮ್ಮಗ ಚಿರಂಜೀವಿ ಆದಿತ್ಯನಿಗೆ ವಿರುಪಾಕ್ಷ ದೇವರು ಎಂದು ಪುನರ್ ನಾಮಕರಣವನ್ನು ಮಾಡಿ ೧೫-೦೧-೨೦೨೨ ರಂದು ಕಳ್ಳಿ ಮಠದ ಉತ್ತರಾಧಿಕಾರಿಯರಂದು ನೇಮಿಸಿದರು.
ಅವರ ಜೀವನ ಸಾಧನೆ, ಸಾಹಿತ್ಯ, ಸಂಗೀತ ,ಕಲೆ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ,ಶೈಕ್ಷಣಿಕ, ಕೊಡುಗೆಗ ಳನ್ನು ಬಹು ವಿಸ್ತಾರವಾಗಿ ಹಿರಿಯ ಲೇಖಕರಾದ ಸುಭಾಶ್ಚಂದ್ರ ಅವರು ದಾಖಲಿಸಿ ಮುಂದಿನ ಕಳ್ಳಿ ಮಠದ ಪರಂಪರೆ ಅದಕ್ಕೆ ಕೀರ್ತಿ ಕಳಸ ವಾಗಿರುವ ಲಿಂಗೈಕ್ಯ ಪೂಜ್ಯ ಶ್ರೀ ಗುರುಲಿಂಗ ಶಿವಾಚಾರ್ಯರ ಜೀವನ ಸಾಧನೆ ಧಾರ್ಮಿಕ ವಿಚಾರಗಳ ಜೊತೆಗೆ ಮಠದ ಇತಿಹಾಸ ಪರಂಪರೆಯನ್ನು ದಾಖಲಿಸಿ ಭಕ್ತರಿಗೆ ಮತ್ತು ಇತಿಹಾಸಕ್ಕೆ ಒಂದು ಹೊಸ ಆಯಾಮವನ್ನು ಕೊಟ್ಟವರು.ಇದೊಂದು ಕಳ್ಳಿಮಠದ ದಾಖಲೆಯು ಕೃತಿ. ಆ ಕಾರಣಕ್ಕೆ ಅವರಿಗೆ ಅಭಿನಂದನೆಗಳು ಸಲ್ಲಬೇಕು
ಲೇಖಕರು: ಡಾ.ಗವಿಸಿದ್ಧಪ್ಪ ಪಾಟೀಲ