ನನ್ನ ಮತ ಮಾರಾಟಕ್ಕಿಲ್ಲ -ಮತದಾರ ಜಾಗೃತಿ ಆಂದೋಲನ

ನನ್ನ ಮತ ಮಾರಾಟಕ್ಕಿಲ್ಲ -ಮತದಾರ ಜಾಗೃತಿ ಆಂದೋಲನ
ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ, ಎಚ್. ಕೆ .ಇ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ *ನನ್ನ ಮತ ಮಾರಾಟಕ್ಕಿಲ್ಲ -ಮತದಾರ ಜಾಗೃತಿ ಆಂದೋಲನ* ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಿಶ್ವನಾಥ್ ರೆಡ್ಡಿ ಮುದ್ನಾಳ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಸವರಾಜ ಮಠಪತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇವತ್ತು ಬಹುತೇಕ ಎಲ್ಲಾ ರಾಜಕಾರಣಿಗಳು ಹಾಗೂ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮಿತಿಮೀರಿ ಹಣ ಹಂಚುತ್ತಿವೆ, ಮತದಾರರನ್ನು ದಾರಿ ತಪ್ಪಿಸುತ್ತಿವೆ.ಇದರಿಂದ ಮತದಾರರು ಜಾಗೃತರಾಗಬೇಕು.ನಮ್ಮ ಒಂದು ಮತಕ್ಕೆ ಬೆಲೆ ಕಟ್ಟಲಾಗದಷ್ಟು ಅಮೂಲ್ಯವಾದ ಮೌಲ್ಯವಿದ್ದು ನಮ್ಮ ಒಂದು ಮತ ನಮ್ಮ ದೇಶವನ್ನು ಸಮೃದ್ಧತೆಯಡೆಗೆ ಒಯ್ಯುವುದಲ್ಲದೆ ನಮ್ಮ ಜೀವನವನ್ನು ಸುಖಮಯವಾಗಿ ಮಾಡುವುದು.ಪ್ರತಿಯೊಬ್ಬ ಮತದಾರರು ಚುನಾವಣೆಯಲ್ಲಿ ಹಣ ಹಂಚಲು ಬಂದವರನ್ನು ಧಿಕ್ಕರಿಸಬೇಕು.ಚುನಾವಣೆಯಲ್ಲಿ ಹಣ ಹಂಚುತ್ತಿರುವುದೇ ದೇಶದಲ್ಲಿ ಹಾಗೂ ರಾಜ್ಯಗಳಲ್ಲಿ ಭ್ರಷ್ಟಾಚಾರ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ರಮೇಶ ಆರ್ ದುತ್ತರಗಿ ಮಾತನಾಡುತ್ತಾ ಇವತ್ತು ನಮ್ಮ ವಿದ್ಯಾರ್ಥಿಗಳು ಗಾಂಧಿ ಅಂಬೇಡ್ಕರ್ ಸುಭಾಷ್ ಚಂದ್ರ ಬೋಸ್ ಕಿತ್ತೂರಾಣಿ ಚೆನ್ನಮ್ಮ ಜಾನ್ಸಿ ರಾಣಿ ಲಕ್ಷ್ಮೀಬಾಯಿ ಮೌಲಾನ ಅಬ್ದುಲ್ ಕಲಾಂ ಆಜಾದ್ ರಂತಹ ಹೋರಾಟಗಾರರ ಜೀವನವನ್ನು ಅಧ್ಯಯನ ಮಾಡಬೇಕು.ಅಂತಹ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವವನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು.ಚುನಾವಣೆಗಳಲ್ಲಿ ಹಣ ಹಂಚಿ ಆಯ್ಕೆಯಾದ ಜನಪ್ರತಿನಿಧಿಗಳಿಂದ ಪಾರದರ್ಶಕವಾದ ಆಡಳಿತ ನಿರೀಕ್ಷಿಸುವುದು ಹೇಗೆ ಸಾಧ್ಯ ?ಇವತ್ತು ನಮ್ಮ ದೇಶದ ಚುನಾವಣೆಗಳಲ್ಲಿ ಹಣವಂತರೆ ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ. ಇವರು ಚುನಾವಣೆಯಲ್ಲಿ ಹಣ ಸುರಿದು ಆಯ್ಕೆಯಾದ ಮೇಲೆ ಹಣ ಮಾಡುವುದರಲ್ಲಿ ತೊಡಗುತ್ತಿದ್ದಾರೆ.ಇವತ್ತಿನ ನಮ್ಮ ಕೆಲವು ಜನ ಪ್ರತಿನಿಧಿಗಳಿಗೆ ಸಮಾಜದ ಹಾಗೂ ದೇಶದ ಕಾಳಜಿಗಿಂತ ತಮ್ಮ ವೈಯಕ್ತಿಕ ಕಾಳಜಿ ಹೆಚ್ಚಾಗಿದೆ .ಇವತ್ತು ರಾಜಕಾರಣ ಎನ್ನುವುದು ಒಂದು ವ್ಯಾಪಾರವಾಗಿ ಮಾರ್ಪಟ್ಟಾಗುತ್ತಿದೆ.ಇದರಿಂದ ದೇಶದ ಭವಿಷ್ಯಕ್ಕೆ ಮುಂದೆ ಗಂಡಾಂತರವಿದ್ದು ಪ್ರತಿಯೊಬ್ಬರು ಇಂದು ಎಚ್ಚೆತ್ತುಕೊಳ್ಳಬೇಕಾಗಿದೆ.ಈ ದೇಶದ ಭವಿಷ್ಯ ಯುವ ಜನಾಂಗದ ಕೈಯಲ್ಲಿದ್ದು ಇಂದಿನ ಯುವ ಜನಾಂಗ ಸಮಾಜದಲ್ಲಿ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ.ನಾವು ಯಾವುದೇ ಕ್ಷೇತ್ರದಲ್ಲಿ ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ನಾವು ಮೊದಲು ಮನುಷ್ಯರಾಗುವುದನ್ನು, ಮನುಷ್ಯತ್ವವನ್ನು ಮೈಗೂಡಿಸಿಕೊಳ್ಳಬೇಕು.ಇವತ್ತು ಸಮಾಜದಲ್ಲಿ ಒಳ್ಳೆಯದಕ್ಕೆ ಬೆಂಬಲಿಸುವುದು ಹಾಗೂ ಕೆಟ್ಟದ್ದಕ್ಕೆ ಖಂಡಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಬೇಕು. ಯುವತಿಯರು ಪ್ರತಿಯೊಬ್ಬರು ದಿನನಿತ್ಯ ತಪ್ಪದೇ ಪತ್ರಿಕೆಯನ್ನು ಓದುವ ಅಭ್ಯಾಸವನ್ನು ರೂಡಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅರಿವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಉಷಾದೇವಿ ಪಾಟೀಲ ಮಾತನಾಡುತ್ತಾ ವಿದ್ಯಾರ್ಥಿಗಳು ಪ್ರತಿಯೊಬ್ಬರು ತಪ್ಪದೆ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು. ಪ್ರತಿಯೊಬ್ಬರು ತಪ್ಪದೆ ಮತ ಚಲಾಯಿಸಬೇಕು .ಚುನಾವಣೆಯಲ್ಲಿ ಹಣ ಹಂಚಲು ಬಂದವರನ್ನು ತಿರಸ್ಕರಿಸಬೇಕು. ಕ್ರಿಮಿನಲ್ ಆರೋಪ ಹಿನ್ನೆಲೆ ಉಳ್ಳವರಿಗೆ ಮತ ಹಾಕಬಾರದು. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ನಮಗೆ ಸರಿ ಎನಿಸದೆ ಇದ್ದ ಪಕ್ಷದಲ್ಲಿ ಕೊನೆಗೆ ನೋಟಾ(NOTA) ಕ್ಕಾದರೂ ಮತ ಹಾಕುವ ಮುಖಾಂತರ ನಾವು ಮತದಾನದಲ್ಲಿ ಭಾಗಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅನುಸೂಯಾ ಜಿ .ಜೈಬಾ ಅಕ್ತರ್, ಶಿಲ್ಪಕಲಾ. ಬಿ, ರಾಜಶ್ರೀ, ಶುಭಾ ,ಉಪಸ್ಥಿತರಿದ್ದರು.
ಪಿಯುಸಿ ದ್ವಿತೀಯ ವಿಜ್ಞಾನ ವಿದ್ಯಾರ್ಥಿನೀಯರಾದ ಕುಮಾರಿ ಸಿದ್ದಮ್ಮ ಕಾರ್ಯಕ್ರಮ ನಿರೂಪಣೆ ಮಾಡಿದರು. ಕುಮಾರಿ ಅಕ್ಷತಾ ಪ್ರಾರ್ಥನೆ ಗೀತೆ ಹಾಡಿದರು. ಕುಮಾರಿ ನಾಜಿಯಾ ಸ್ವಾಗತಿಸಿದರು. ಕುಮಾರಿ ಸಮಿನಾ ವಂದನಾರ್ಪಣೆ ಮಾಡಿದರು .ಕೊನೆಯಲ್ಲಿ ವಿದ್ಯಾರ್ಥಿನಿಯರಿಗೆ ನನ್ನ ಮತ ಮಾರಾಟಕ್ಕಿಲ್ಲ .ನಾನು ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುತ್ತೇನೆ ಹಾಗೂ ಕ್ರಿಮಿನಲ್ ಅಪರಾಧ ಹಿನ್ನೆಲೆ ಉಳ್ಳವರಿಗೆ ನಾನು ಮತ ಹಾಕುವುದಿಲ್ಲ, ಎಂದು ಪ್ರತಿಜ್ಞಾವಿಧಿ ಬೋಧಿಸಲಾಯಿತು.