ಕಲೆಗಾರರ ಜನಪದ ಕೌದಿಯ ಚಿತ್ತಾರ

ಕಲೆಗಾರರ ಜನಪದ ಕೌದಿಯ ಚಿತ್ತಾರ
ನಮ್ಮ ಜನಪದರ ಬದುಕೇ ಒಂದು ಕಲಾತ್ಮಕ ಉಡುಗೊರೆ. ತಮ್ಮ ಬದುಕಿನುದ್ದಕ್ಕೂ ಕಲೆಯ ಹೊರಹುಗಳನ್ನು ಆಗಾಗ ಅಭಿವ್ಯಕ್ತಿಪಡಿಸುತ್ತ ಸಂಭ್ರಮಿಸುವಲ್ಲಿ ಯಶಸ್ಸು ಕಂಡವರು.ಶಿಷ್ಟ ಸಾಂಪ್ರದಾಯ ಎಷ್ಟೇ ಪ್ರಭುತ್ವ ಸಾಧಿಸಿದರೂ ಜನಪದ ಕಲಾ ಬದುಕನ್ನು ಬಿಟ್ಟು ಬದುಕದಂತಾಗಿದೆ ಎಂಬ ಅರಿವು ಆಗಾಗ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಕೌದಿ ಕಲೆಯು ನಮ್ಮ ಜನಪದರ ಬಹು ಆಸಕ್ತಿದಾಯಕ ಕಲಾ ಮಾಧ್ಯಮ ಇದಾಗಿದೆ. ವಿಶೇಷವಾಗಿ ಮಹಿಳಾ ಪ್ರಧಾನ ಕಲೆ ಎಂದೇ ಗುರುತಿಸಿಕೊಂಡಿದೆ.ಬದುಕಿನ ಬೆಚ್ಚನೆಯ, ತಣ್ಣನೆಯ ಭಾವಗಳು ತನ್ನೊಡಲಲ್ಲಿಟ್ಟುಕೊಂಡು ಸಾಂಸ್ಕೃತಿಕ ಲೋಕದಲ್ಲಿ ಸುಂದರ ಚಿತ್ತಾರದ ಕೌದಿ ಎಂದೇ ಪ್ರಸಿದ್ದಿ. ಇಂತಹ ಕೌದಿಯ ಕುರಿತು ಅಧ್ಯಯನ ಮಾಡುವ ಬಹು ಆಸಕ್ತಿಯ ಗ್ರಂಥ ಈ ಜನಪದ ಕೌದಿಯ ಚಿತ್ತಾರ.
ಕೌದಿ ಭಾರತೀಯ ಜ್ಞಾನ ಪರಂಪರೆಯಲ್ಲಿ ಜನಪದರ ಶೀಲ ಚೈತನ್ಯದ ತಾಳ್ಮೆಯ ಸಂಕೇತವಾಗಿ ಒಡಮೂಡಿ ಬಂದಿದೆ. ಭಾರತೀಯ ಮಹಾ ಕಾವ್ಯಗಳಲ್ಲಿ ಒಂದಾದ ರಾಮಾಯಣದ ಅನೇಕ ಕತೆಗಳ ಚಿತ್ರ ವಿಚಿತ್ರಗಳನ್ನು ಕೌದಿ ಬಿಂಬಿಸುತ್ತಲೇ ಬಂದಿದೆ. ಚಿಕ್ಕ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ಹಾಸಿಕೊಳ್ಳುವ ಕೌದಿ ಅಮ್ಮನ ಮಡಿಲಿನ ಬೆಚ್ಚನೆಯ ಸುಖವನ್ನು ಕೊಡುವ, ನಿದ್ರೆಗೆ ಜಾರಿಸುವ ಸುಖದ ಕನಸು ಕಾಣುವ ರಂಗು ರಂಗಿನ ತೊಟ್ಟಿಲಾಗಿದೆ.
ಮುಂದುವರೆದು ಶಾಸ್ತ್ರ ಹೇಳುವ ಅಜ್ಜಿಯ ನೆನಪುಗಳನ್ನು ಮರುಕಳಿಸುವ ನಂಬಿಕೆ ಸಂಪ್ರದಾಯಗಳನ್ನು ಪಾಲಿಸುವಂತೆ ಮಾಡುವ ಸಂಸ್ಕೃತಿ ಸಂವೇದನೆಗಳನ್ನು ಕಾಪಿಟ್ಟುಕೊಂಡು ಒಂದು ಕುಟುಂಬದಿಂದ ಇನ್ನೊಂದು ಕುಟುಂಬಕ್ಕೆ ಪೂರಕವಾಗುವ ರೀತಿಯಲ್ಲಿ ಶತಮಾನಗಳ ಇತಿಹಾಸ ಮತ್ತು ಚರಿತ್ರೆಯನ್ನು ಹೊಂದಿರುವ ಬಡವರು ಮತ್ತು ಮಧ್ಯಮ ವರ್ಗದವರ ರೇಷ್ಮೆಯ ಬ್ಲಾಂಕೇಟ್ ಎಂದೇ ಕರೆಸಿಕೊಳ್ಳುವ ಕೌದಿ ಜನಪದರ ಚರಾಸ್ತಿಗಳಲ್ಲಿ ಒಂದಾಗಿದೆ.
ಶ್ರದ್ಧೆ, ನಂಬಿಕೆ, ವಿಶ್ವಾಸ, ಒಳ್ಳೆಯ ಮುಹೂರ್ತ ಇವೆಲ್ಲವುಗಳನ್ನು ಗಮನಿಸಿ ಕೌದಿ ಉತ್ತಮ ಮನಸ್ಸಿನ ಹಿನ್ನೆಲೆಯಲ್ಲಿ ಸಂರಚನೆಗೊಂಡಿರುತ್ತದೆ. ಒಂದು ಮಾಸಿದ ಕೌದಿ, ಎರಡು ಮಾಸಿದ ಕೌದಿ ಹೀಗೆ ಹತ್ತಾರು ಕೌದಿ ರಚಿಸುವುದು ಕೌಶಲ್ಯಯುತವಾಗಿ ಹೊಲಿಯುವುದು ನೇಯ್ದೆ ಮಾಡುವುದು ಅವರವರ ವಿಶಾಲ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನಾವು ನಾಗರೀಕತೆಯಿಂದ ಎಷ್ಟೇ ಮುಂದುವರೆದರೂ ಕೂಡ ನಮ್ಮ ಮನೆಯಲ್ಲಿ ಇರುವ ಮಗುವಿನ ಆರೈಕೆಯಲ್ಲಿ ಜೋಪಾನ ಮಾಡುತ್ತ ಬಂದಿರುವ ಅಮ್ಮನ ಕೌದಿ ಚಿನ್ಮಯಿಯಾಗಿ ಇರುತ್ತದೆ.
ಈ ಕೃತಿಯ ಒಳ ಹೊಕ್ಕರೆ ಹಲವು ಅಧ್ಯಾಯಗಳಿಂದ ರೂಪ ಪಡೆದದ್ದು ಕಂಡುಬರುತ್ತದೆ. ಚಿತ್ರಕಲೆ ಅರ್ಥ, ವಿವರ, ಕೌದಿಯ ಪ್ರಾಚೀನತೆಯ ನೋಟ, ವಿಕಾಸ, ಕೌದಿ ರೂಪಗೊಳ್ಳುವ ವಿಧಾನ, ನಂಬಿಕೆ, ಕೌದಿ ಪೂಜೆ, ಸಾಹಿತ್ಯ, ಚಲನಚಿತ್ರ ಸೇರಿದಂತೆ ಇತ್ಯಾದಿ ಕ್ಷೇತ್ರಗಳಲ್ಲಿ ಕೌದಿಯ ಮಹತ್ವ ಪ್ರಸಾರಗೊಂಡ ಬಗೆ, ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ಅವರಿಗೆ ಉಡುಗೊರೆಯಾದ ಕೌದಿ, ಸಾವಿರ ದೇವದಾಸಿಯರು ಒಂದೊಂದು ಹೊಲಿಗೆಯ ಮೂಲಕ ಕೌದಿ ರೂಪಿಸಿದ ಚಿಂತನೆ, ಕೌದಿಯನ್ನೇ ಹೊಲಿಯುತ್ತ ಬದುಕು ಸಂಭ್ರಮಿಸಿದ ಸಾಧಕರ ವಿವರ, ಪ್ರಸ್ತುತ ಕೌದಿ ಸಮಕಾಲೀನ ಸಂದರ್ಭಗಳಿಗೆ ಪೂರಕವಾಗಿ ಚಿತ್ರಕಲಾವಿದರ, ಶಿಲ್ಪಕಲಾವಿದರ ಕೈಯಲ್ಲಿ ಅರಳಿದ್ದು, ಸದ್ಯದ ಸ್ಥಿತಿಗತಿ, ಕೌದಿ ಕಲೆಯ ಕುರಿತಾದ ಅಧ್ಯಯನ, ಅಧ್ಯಯನಕ್ಕೆ ಉಪಕರಿಸಿದ ಆಕರ ಸಾಮಾಗ್ರಿಗಳು ಇತ್ಯಾದಿ ಸಂಗತಿಗಳಿಂದ ಕೃತಿ ಓದುಗರ ಕೈ ಸೇರುತ್ತಿದೆ.
ಪುಸ್ತಕ ಮುದ್ರಣ ಅಂದವಾಗಿದ್ದು ಮುಖಪುಟ ಅತ್ಯಾಕರ್ಷಣಿಯವಾಗಿದೆ. ಶಿವಮೊಗ್ಗದ ಗೀತಾಂಜಲಿ ಪ್ರಕಾಶನದಿಂದ 2024 ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 128 ಪುಟಗಳಿದ್ದು 150 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಡಾ.ಶರಣಬಸಪ್ಪ ವಡ್ಡನಕೇರಿ ,ಕಲಬುರಗಿ