ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ - ಆನೆಗುಂದಿ

ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ - ಆನೆಗುಂದಿ
ಶಹಪುರ : ಮುಂದಿನ ಪೀಳಿಗೆಗಾಗಿ ಪರಿಸರವನ್ನು ಕಾಪಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ,ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ ಎಂದು ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ಧಲಿಂಗಣ್ಣ ಆನೆಗುಂದಿ ಹೇಳಿದರು.
ನಗರದ ದೇಶಮುಖ ಬಡಾವಣೆಯ ತಾಲೂಕು ಕಸಾಪ ಆವರಣದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿನೂತನ ಶೈಲಿಯಲ್ಲಿ ಗಿಡಮರಗಳನ್ನು ನೆಟ್ಟು,ಗಿಡ ಮರಗಳು ಪೋಷಣೆ ಮಾಡುವು ಜವಾಬ್ದಾರಿಯ ಕುರಿತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವಿನೂತನ ಶೈಲಿಯಲ್ಲಿ ಗಿಡಮರಗಳು ನೆಡುವುದರಿಂದ ಸಸಿಗಳ ಬೇರುಗಳಿಗೆ ನೇರವಾಗಿ ನೀರು ತಲುಪುವುದಲ್ಲದೆ ನೀರನ್ನು ಪೋಲಾಗುವುದನ್ನು ತಡೆಗಟ್ಟಬಹುದು, ಇದಕ್ಕಾಗಿ 3 ಇಂಚಿನ ಪೈಪು ಹಾಗೂ ಕಂಕರ್ ಬಳಕೆ ಮಾಡಲಾಗಿದೆ ಎಂದು ತಿಳಿಸಿದರು.
ಜಾಗತಿಕ ತಾಪಮಾನ ಏರಿಕೆಯೂ ಒಂದು ಗಂಭೀರ ಸಮಸ್ಯೆಯಾಗಿ ಉದ್ಭವಿಸಿದೆ ಆದ್ದರಿಂದ ಒಬ್ಬ ನಾಗರಿಕನಲ್ಲಿಯೂ ಹಾಗೂ ಶಾಲಾ-ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಪರಿಸರ ಅರಿವು ಮೂಡಿಸಿ ಜಾಗೃತಿಗೊಳಿಸುವ ಕೆಲಸ ಸಂಘ-ಸಂಸ್ಥೆಗಳಿಂದ ಆಗಬೇಕಾಗಿದೆ ಅಲ್ಲದೆ ಮಾನವನ ಚಟುವಟಿಕೆಗಳಿಂದ ಪರಿಸರಕ್ಕೆ ಆಗುವ ಹಾನಿಯನ್ನು ತಡೆಗಟ್ಟುವ ಕುರಿತು ತಿಳುವಳಿಕೆ ಮೂಡಿಸಬೇಕಾಗಿದೆ ಎಂದು ರವೀಂದ್ರನಾಥ್ ಹೊಸಮನಿ ಹೇಳಿದರು.
ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರ ಮಾತನಾಡಿ ಜಗತ್ತು ಹಸಿರು ಮತ್ತು ಸ್ವಚ್ಛ ಸ್ಥಳವನ್ನಾಗಿ ಮಾಡಲು ಸುಮಾರು 143 ದೇಶಗಳು ಭಾಗವಹಿಸುತ್ತಿವೆ,ಅದರ ಜೊತೆಗೂ ನಾವು ನೀವೆಲ್ಲರೂ ಕೈಜೋಡಿಸುವುದು ಅತ್ಯವಶ್ಯಕವಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಪರಿಸರ ಮಾಲಿನ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ವಿವಿಧ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಶಿವಣ್ಣ ಇಜೇರಿ,ನಿವೃತ್ತ ಬ್ಯಾಂಕ್ ಅಧಿಕಾರಿ ಗುರುಲಿಂಗಯ್ಯ ಸಾಲಿಮಠ,ಶರಣಬಸವ ಪೊಲೀಸ್ ಬಿರಾದರ್ ಉಪನ್ಯಾಸಕ ಸುರೇಶ್ ಅರುಣಿ ಜೊತೆಗಿದ್ದರು,