ಭದ್ರಾವತಿ ಶಾಸಕರ ಪುತ್ರನ ವಿರುದ್ಧ ಕಠಿಣ ಕ್ರಮಕ್ಕೆ ಡಾ. ಪ್ರಣವಾನಂದ ಶ್ರೀ ಆಗ್ರಹ

ಗಣಿ ಇಲಾಖೆಯ ಶ್ರೀಮತಿ ಜ್ಯೋತಿ ನಿಂದನೆ ಪ್ರಕರಣ ಸ್ವಾಮೀಜಿ ಸಾಂತ್ವನ:
ಭದ್ರಾವತಿ ಶಾಸಕರ ಪುತ್ರನ ವಿರುದ್ಧ ಕಠಿಣ ಕ್ರಮಕ್ಕೆ ಡಾ. ಪ್ರಣವಾನಂದ ಶ್ರೀ ಆಗ್ರಹ
ಕಲಬುರಗಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಶ್ರೀಮತಿ ಜ್ಯೋತಿ ಅವರನ್ನು ಭದ್ರಾವತಿ ಶಾಸಕರ ಮಗ ಬಸವೇಶ್ ಅವರು ಅವಾಚ್ಯವಾಗಿ ಬೈದು ನಿಂದಿಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ತಾಪುರ ತಾಲ್ಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಶ್ರೀ ಡಾ. ಪ್ರಣವಾನಂದ ಶ್ರೀಗಳು ಶ್ರೀಮತಿ ಜ್ಯೋತಿಯವರ ಶಿವಮೊಗ್ಗ ನಗರದಲ್ಲಿರುವ ಮನೆಗೆ ಫೆ .13ರಂದು ಭೇಟಿ ನೀಡಿ ಸಾಂತ್ವನ ಹೇಳಿದರು. ತಪ್ಪಿತಸ್ಥ ಶಾಸಕರ ಪುತ್ರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ರಾಜ್ಯದ ಹಿಂದುಳಿದ ಈಡಿಗ ಸಮಾಜದ ಹೆಣ್ಣು ಮಗಳಿಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಒಡ್ಡಿರುವುದು ತೀವ್ರ ಖಂಡನೀಯವಾಗಿದೆ. ಶಾಸಕರ ಪುತ್ರನ ಈ ಅಸಭ್ಯ ವರ್ತನೆ ಯು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಹಾಗೂ ಮಹಿಳೆಯರಿಗೆ ಅಗೌರವ ತೋರಿ ಜೀವಕ್ಕೆ ಬೆದರಿಕೆ ಹಾಕಿರುವುದು ಅವರ ದಾರ್ಷ್ಠ್ಯತನಕ್ಕೆ ಸಾಕ್ಷಿಯಾಗಿದೆ. ಇಂತಹ ಘಟನೆಗಳು ಮತ್ತೆ ಮರು ಕಳಿಸದಂತೆ ಹಾಗೂ ಹಿಂದುಳಿದ ಸಮಾಜದ ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಗಬೇಕಾದರೆ ತಕ್ಷಣದಲ್ಲಿ ಶಾಸಕರ ಪುತ್ರ ಬಸವೇಶ್ ಅವರನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಆ ಮೂಲಕ ಸರಕಾರವು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು. ನೊಂದ ಈಡಿಗ ಸಮುದಾಯದ ಮಹಿಳೆ ಜ್ಯೋತಿಯವರ ಜೊತೆ ರಾಜ್ಯದ ಇಡೀ ಸಮುದಾಯವು ಬೆನ್ನ ಹಿಂದೆ ನಿಂತು ಬೆಂಬಲಿಸುವುದಾಗಿ ಶ್ರೀಗಳು ತಿಳಿಸಿದರು. ಮನೆಗೆ ಭೇಟಿ ನೀಡಿದ ಸ್ವಾಮೀಜಿಯವರಿಗೆ ತನಗಾದ ನೋವನ್ನು ಶ್ರೀಮತಿ ಜ್ಯೋತಿಯವರು ಸಂಪೂರ್ಣವಾಗಿ ವಿವರಿಸಿದರು.
ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಸ್ವಾಮೀಜಿಯವರು ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಈಡಿಗ
ಮಹಾ ಮಂಡಳಿಯ ಜಿಲ್ಲಾಧ್ಯಕ್ಷ ವೆಂಕಟೇಶಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸಪ್ಪ ಮಾಸ್ತಿಕಟ್ಟೆ,
ರಾಜ್ಯ ಯುವ ಘಟಕದ ಅಧ್ಯಕ್ಷರಾದ ಸಚಿನ್ ನಾಯ್ಕ್ , ಹೊನ್ನಾವರ ತಾಲೂಕ ಸಂಘಟನಾ ಕಾರ್ಯದರ್ಶಿ ರಾಜೇಶ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಬೆಂಬಲ
ಶಾಸಕರ ಪುತ್ರರ ದುರ್ವರ್ತನೆಯ ವಿರುದ್ಧ ಕಠಿಣ ಕ್ರಮ ಕೈಗೊಂಡು ನ್ಯಾಯ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ಒತ್ತಾಯಿಸಿದೆ.
ರಾಜ್ಯದಲ್ಲಿ ಹಿಂದುಳಿದ ವರ್ಗದ ಹೆಣ್ಣು ಮಕ್ಕಳಿಗೆ ಕೆಲಸ ನಿರ್ವಹಿಸಲು ಅಡ್ಡಿಪಡಿಸಿದ ಈ ಪ್ರಕರಣ ನಾಚಿಕೆಗೇಡಿನದು ಹಾಗೂ ಇಂತಹ ಪ್ರಕರಣಗಳಿಗೆ ನ್ಯಾಯ ಸಿಗದಿದ್ದರೆ ತೀವ್ರ ಹೋರಾಟಕ್ಕೂ ಮುನ್ನುಗ್ಗ ಬೇಕಾಗಿತ್ತದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ .ಗುತ್ತೇದಾರ್ ಹಾಗೂ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ತಿಳಿಸಿದ್ದಾರೆ.
ಸಮುದಾಯದ ಹಿತ ರಕ್ಷಣೆಗಾಗಿ ಸತತ ಹೋರಾಟ ನಡೆಸುತ್ತಿರುವ ಪೂಜ್ಯ ಡಾ. ಪ್ರಣವಾನಂದ ಶ್ರೀಗಳು ಈ ಘಟನೆಗೆ ಸಂಬಂಧಿಸಿದ ಯಾವುದೇ ನಿರ್ಧಾರ ಕೈಗೊಂಡರೂ ಅವರ ಬೆನ್ನ ಹಿಂದೆ ಇರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.