ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಷರತ್ತುಗಳನ್ನು ಸರಳೀಕರಣ ಮಾಡಿ ಆದೇಶ: ಕೆಯುಡಬ್ಲ್ಯೂಜೆ ಸ್ವಾಗತ

.ಗ್ರಾಮೀಣ ಪತ್ರಕರ್ತರ ಬಸ್ ಪಾಸ್

ಷರತ್ತುಗಳನ್ನು ಸರಳೀಕರಣ ಮಾಡಿ 

ಆದೇಶ: ಕೆಯುಡಬ್ಲ್ಯೂಜೆ ಸ್ವಾಗತ

ಕಲಬುರಗಿ : ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ಅಡ್ಡಿಯಾಗಿದ್ದ ಕಠಿಣ ಷರತ್ತುಗಳನ್ನು ತೆಗೆದು, ನಿಯಮಾವಳಿ ಸರಳೀಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬೀದರನಲ್ಲಿ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಒತ್ತಾಯಕ್ಕೆ ಸ್ಪಂಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ವೇದಿಕೆಯಲ್ಲಿ ಕಠಿಣ ಷರತ್ತುಗಳನ್ನು ಕೈಬಿಡುವುದಾಗಿ ಭರವಸೆ ನೀಡಿದ್ದರು. 

ಸರ್ಕಾರಕ್ಕೆ ಮೂರು ವರ್ಷ ತುಂಬಿದಾಗ ಕೆಯುಡಬ್ಲ್ಯೂಜೆ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಈ ಬಗ್ಗೆ ವಾರದೊಳಗೆ ಕ್ರಮ ವಹಿಸುವುದಾಗಿ ತಿಳಿಸಿದ್ದರು. ಸಿಎಂ ಸೂಚನೆ ಮೇರೆಗೆ ಹೊಸ ಆದೇಶ ಹೊರಬಿದ್ದಿದೆ.

ಪೂರ್ಣಾವಧಿಗೆ ಸೀಮಿತವಾಗಿದ್ದನ್ನು ಬದಲಿಸಿ, ಅರೆಕಾಲಿಕ ವರದಿಗಾರರಿಗೂ ಯೋಜನೆ ವಿಸ್ತರಿಸಲಾಗಿದೆ. 

ಸೌಲಭ್ಯ ಪಡೆಯಲು 11 ತಿಂಗಳ ಲೈನೇಜ್ ಪಡೆದಿರುವ ಬ್ಯಾಂಕ್ ಸ್ಟೇಟ್ ಮೆಂಟ್ ಕಡ್ಡಾಯವಾಗಿದ್ದನ್ನು ಷರತ್ತಿನಲ್ಲಿ ಕೈಬಿಡಲಾಗಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸತತ ಹೋರಾಟಕ್ಕೆ ಸ್ಪಂಧಿಸಿ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ (ಭಾವಿ ಸಿಎಂ) ಡಿ.ಕೆ.ಶಿವಕುಮಾರ್ ಅವರು ಈ ನಿಟ್ಟಿನಲ್ಲಿ ಸತತವಾಗಿ ಸ್ಪಂಧಿಸಿದ ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರಿಗೆ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮತ್ತು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.