ಭಕ್ತಿ ಪುಷ್ಪಾಂಜಲಿ ಸಮೂಹದ 7ನೇ ವಾರ್ಷಿಕೋತ್ಸವ
ಭಕ್ತಿ ಪುಷ್ಪಾಂಜಲಿ ಸಮೂಹದ 7ನೇ ವಾರ್ಷಿಕೋತ್ಸವ
ಬೆಂಗಳೂರು: ಭಕ್ತಿ ಪುಷ್ಪಾಂಜಲಿ ಮುಖಪುಟ ಸಮೂಹದ 7ನೇ ವಾರ್ಷಿಕೋತ್ಸವವು ನಗರದ ಕತ್ರಿಗುಪ್ಪೆಯ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿಜೃಂಭಣೆಯಿಂದ ನಡೆಯಿತು.
ಹರಿದಾಸರತ್ನ ಶ್ರೀ ವರಾಹಹರಿವಿಠಲದಾಸರಿಂದ ದೀಪಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಕು. ಸಾನ್ವಿ ಜೋಯಿಸ್ ಹಾಗೂ ಕು. ಐಕ್ಯ ಕುಲಕರ್ಣಿ ಅವರಿಂದ ಗಣಪತಿ ಸ್ತುತಿ ನೆರವೇರಿತು.
ಸಮೂಹದ ಸಂಸ್ಥಾಪಕಿ ಶ್ರೀಮತಿ ವಿಜಯಲಕ್ಷ್ಮಿ ಮಯ್ಯ ಅವರು ವರದಿ ವಾಚಿಸಿದರು. ಬಳಿಕ ಸದಸ್ಯರಿಂದ ಗುಂಪುಗಾಯನ, ಕೋಲಾಟ, ಸಮೂಹ ಗೀತೆ, ಮಕ್ಕಳಿಂದ ಶ್ಲೋಕ ಪಠಣ ಹಾಗೂ ನೃತ್ಯ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.
ಭಂಡಾರಕೇರಿ ಮಠದ ಪೀಠಾಧೀಶರಾದ ಶ್ರೀ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿಯವರಿಂದ ಹರಿದಾಸಿನಿ ಡಾ. ಎನ್. ಜಿ. ವಿಜಯಲಕ್ಷ್ಮಿ ಅವರ 27ನೇ ಕೃತಿ “ಅಯೋಧ್ಯ ಕ್ಷೇತ್ರ ಪ್ರವಾಸ ಕಥನ ಮತ್ತು ಶ್ರೀರಾಮ ಭಜನಾಮೃತ” ಬಿಡುಗಡೆಯಾಯಿತು.
ಈ ವೇಳೆ ಸ್ವಾಮೀಜಿಯವರು ಸಮೂಹದ ಹಿರಿಯ ಸದಸ್ಯರನ್ನು ಸನ್ಮಾನಿಸಿ, ವಿವಿಧ ಥೀಮ್ಗಳಲ್ಲಿ ಭಾಗವಹಿಸಿದ ಸದಸ್ಯರಿಗೆ ಅಭಿನಂದನಾ ಪತ್ರಗಳನ್ನು ವಿತರಿಸಿದರು. ತಮ್ಮ ಆಶೀರ್ವಚನದಲ್ಲಿ ಸಮೂಹವು ದಾಸಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಹರಿದಾಸಿನಿ ಬಿ. ಕೆ. ಶ್ರೀಮತಿರಾವ್ ಅವರ ಕೃತಿಗಳನ್ನು ಪ್ರಶಂಸಿಸಿದರು. ಸಮೂಹದ ನಿರ್ವಾಹಕಿ ಶ್ರೀಮತಿ ಸುಮನ ಪ್ರಭಾಕರ್ ವಂದನಾರ್ಪಣೆ ಸಲ್ಲಿಸಿದರು.
