ಗಿರಿ ಜಿಲ್ಲೆಗೆ ಗರಿ ಮೂಡಿಸಿದ ಯುಪಿಎಸ್ಸಿ ಸಾಧಕರು - ವೆಂಕಟೇಶ್ ಕಡೇಚೂರ್ ಅಭಿನಂದನೆ
ಗಿರಿ ಜಿಲ್ಲೆಗೆ ಗರಿ ಮೂಡಿಸಿದ ಯುಪಿಎಸ್ಸಿ ಸಾಧಕರು - ವೆಂಕಟೇಶ್ ಕಡೇಚೂರ್ ಅಭಿನಂದನೆ
ಕಲಬುರಗಿ : ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶದ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಗಿರಿ ಜಿಲ್ಲೆ ಎಂದೇ ಖ್ಯಾತಿ ಪಡೆದ ಯಾದಗಿರಿ ಜಿಲ್ಲೆಯ ನಾಲ್ವರು ಇದೀಗ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ. ಅಂತಹ ಸಾಧಕರಿಗೆ ಕಲಬುರಗಿ ಬ್ರಹ್ಮಶ್ರೀ ನಾರಾಯಣ ಗುರು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಉದ್ಯಮಿಗಳಾದ ವೆಂಕಟೇಶ ಎಂ ಕಡೇಚೂರ್ ಅಭಿನಂದನೆ ಸಲ್ಲಿಸಿದ್ದಾರೆ.
ಯಾದಗಿರಿಯ ಸಂದೀಪ್ ಬಾಡದ್ ರಾಜ್ಯದಲ್ಲಿ ಎರಡನೇ ಹಾಗೂ ಅಖಿಲ ಭಾರತ ಮಟ್ಟದಲ್ಲಿ 82 ನೇ ಸ್ಥಾನ , ಡಾ.ನಿವೇದಿತಾ ಬಾವಿಮನಿ ರಾಷ್ಟ್ರೀಯ ಮಟ್ಟದಲ್ಲಿ 469ನೇ ಸ್ಥಾನ, ಬಸವರಾಜ್ ಜವಳಿ ರಾಷ್ಟ್ರೀಯ ಮಟ್ಟದಲ್ಲಿ 664ನೇ ಸ್ಥಾನ ಹಾಗೂ ಚಂದ್ರಶೇಖರ್ 880ನೇ ಸ್ಥಾನ ಪಡೆದು ಕಲ್ಯಾಣ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ತನ್ನ ತವರು ಜಿಲ್ಲೆಯಾದ ಯಾದಗಿರಿಯ ಈ ಹೆಮ್ಮೆಯ ಸಾಧಕರು ಆಡಳಿತ ಕ್ಷೇತ್ರದಲ್ಲಿ ಕೀರ್ತಿ ಪಡೆದು ನಾಡಿನ ಹಾಗೂ ರಾಷ್ಟ್ರದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿ.
ಈ ಸಾಧಕರ ಸಾಧನೆಯು ಇತರರಿಗೆ ಪ್ರೇರಣೆಯಾಗಲಿ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಐಎಎಸ್ ಐಪಿಎಸ್, ಐಆರ್ ಎಸ್ ಮುಂತಾದ ಹುದ್ದೆ ಅಲಂಕರಿಸಲಿ ಎಂದು ವೆಂಕಟೇಶ ಕಡೇಚೂರ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
