ಪವರ್ ಗ್ರಿಡ್ ಉಪ ಕೇಂದ್ರಕ್ಕೆ ಶಾಸಕ ಪ್ರಭು ಚವ್ಹಾಣ್ ದಿಢೀರ್ ಭೇಟಿ: ಕಾಮಗಾರಿ ಪರಿಶೀಲನೆ

ಪವರ್ ಗ್ರಿಡ್ ಉಪ ಕೇಂದ್ರಕ್ಕೆ ಶಾಸಕ ಪ್ರಭು ಚವ್ಹಾಣ್ ದಿಢೀರ್ ಭೇಟಿ: ಕಾಮಗಾರಿ ಪರಿಶೀಲನೆ
ಕಮಲನಗರ:ಕಮಲನಗರ ತಾಲ್ಲೂಕಿನ ಚಿಮ್ಮೇಗಾಂವ-ಮಾಳೆಗಾಂವ ಗ್ರಾಮಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಪವರ್ ಗ್ರಿಡ್ ಉಪ ಕೇಂದ್ರಕ್ಕೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಮಾರ್ಚ್ 9ರಂದು ದಿಢೀರ್ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಕಾಮಗಾರಿ ಸ್ಥಳದಲ್ಲಿ ಸಂಚರಿಸಿ ಸ್ಥಳದಲ್ಲಿದ್ದ ಅಧಿಕಾರಿಗಳ ಮೂಲಕ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದರು. ನಂತರ ಟಾವರ್ಗಳ ನಿರ್ಮಾಣ, ಕಟ್ಟಡಗಳ ನಿರ್ಮಾಣ ಸ್ಥಳ ಮತ್ತು ಯಂತ್ರಗಳ ಬಳಿಗೆ ತೆರಳಿ ಗುಣಮಟ್ಟವನ್ನು ವೀಕ್ಷಿಸಿದರು. ಬುನಾದಿ ಕಾಮಗಾರಿಯಲ್ಲಿ ಸರಿಯಾಗಿ ಕ್ಯೂರಿಂಗ್ ಮಾಡದ ಕಾರಣ ಸಿಮೆಂಟ್ ಎದ್ದು ಕಾಣುತ್ತಿದೆ. ಬೇಸಿಗೆ ಆರಂಭವಾಗಿದ್ದು, ಬಿಸಿಲು ದಿನೇ ದಿನೇ ಹೆಚ್ಚುತ್ತಿದೆ. ಆದರೂ ಸಿಮೆಂಟ್ ಕೆಲಸಗಳಿಗೆ ನೀರಿನ ಬಳಕೆ ಏಕೆ ಮಾಡುತ್ತಿಲ್ಲವೆಂದು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ನಾನು ಸಾಕಷ್ಟು ಪ್ರಯತ್ನಪಟ್ಟು 2147 ಕೋಟಿ ಮೊತ್ತದ 675 ಕೆ.ವಿ ಪವರ್ ಟ್ರಾನ್ಸ್ಮಿಷನ್ ಸಾಮರ್ಥ್ಯದ ಕರ್ನಾಟಕ ಮೊದಲ ಪವರ್ ಗ್ರಿಡ್ ವಿದ್ಯುತ್ ಉಪ ಕೇಂದ್ರವನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಕೆಲಸ ಸರಿಯಾಗಿ ಮತ್ತು ಗುಣಮಟ್ಟದಿಂದ ಆಗಬೇಕು. ಶೀಘ್ರ ಪೂರ್ಣಗೊಳಿಸುವ ಭರದಲ್ಲಿ ಕೆಲಸ ಕಳಪೆ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಗುಣಮಟ್ಟದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲವೆಂದು ಎಚ್ಚರಿಸಿದರು.
ಪವರ್ ಗ್ರಿಡ್ ಉಪ ಕೇಂದ್ರದ ಸುತ್ತಲಿನ ರೈತರಿಗೆ ಓಡಾಡಲು ಹಿಂದಿನಿAದಲೂ ಬಳಕೆ ಮಾಡುತ್ತಿದ್ದ ಕಾಲುದಾರಿ ಮುಚ್ಚಿದ್ದರಿಂದ ರೈತರು ತಮ್ಮ ಕೃಷಿ ಜಮೀನಿಗೆ ಹೋಗಲು 7-8 ಕಿ.ಮೀ ಸುತ್ತಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನನ್ನ ಬಳಿಗೆ ಬರುತ್ತಿದ್ದಾರೆ. ಈ ಸಮಸ್ಯೆಗೆ ತಹಸೀಲ್ದಾರರ ಸಹಾಯ ಪಡೆದು ಪರಿಹಾರ ಕಂಡುಕೊಳ್ಳಬೇಕು. ರೈತರಿಗೆ ಯಾವುದೇ ರೀತಿಯ ಸಮಸ್ಯೆ ಮಾಡಬಾರದೆಂದು ಹೇಳಿದರು.
ಸ್ಥಳೀಯರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಸಾಕಷ್ಟು ಪ್ರಯತ್ನಪಟ್ಟು ಯೋಜನೆಯನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಆದರೆ ಕೆಲಸಗಾರರನ್ನು ಬೇರೆಡೆಯಿಂದ ತರುತ್ತಿರುವ ಬಗ್ಗೆ ಜನತೆ ಹೇಳುತ್ತಿದ್ದಾರೆ. ಕೆಲಸಗಾರರ ನೇಮಕಾತಿಯಲ್ಲಿ ಕಮಲನಗರ ಮತ್ತು ಔರಾದ(ಬಿ) ತಾಲ್ಲೂಕಿನವರಿಗೆ ಮೊದಲ ಆದ್ಯತೆ ನೀಡಬೇಕು.
ತಾಂತ್ರಿಕ ಸಿಬ್ಬಂದಿಗಳು ಸ್ಥಳೀಯರು ಲಭ್ಯವಿಲ್ಲದ ಪಕ್ಷದಲ್ಲಿ ಬೇರೆಯರವನ್ನು ತರಬಹುದು. ಆದರೆ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು. ಯೋಜನೆಗೆ ಜಮೀನು ನೀಡಿದ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಕಾಮಗಾರಿ ಸ್ಥಳದಲ್ಲಿ ಟ್ರ್ಯಾಕ್ಟರ್, ಟಿಪ್ಪರ್, ಜೆಸಿಬಿ, ನೀರಿನ ಟ್ಯಾಂಕ್ ಹೀಗೆ ವಿವಿಧ ಯಂತ್ರಗಳನ್ನು ಬಾಡಿಗೆಗೆ ಪಡೆದು ಕೆಲಸ ಮಾಡಲಾಗುತ್ತಿದೆ. ಇವುಗಳನ್ನು ಸ್ಥಳೀಯರಿಂದಲೇ ಪಡೆದು ಇವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪವರ್ ಗ್ರಿಡ್ ಕಾರ್ಪೋರೇಷನ್ ಲಿಮಿಟೆಡ್ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗಣೇಶ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಕಾಮಗಾರಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದ್ದೇನೆ. ಸರಿಯಾಗಿ ಕ್ಯೂರಿಂಗ್ ಆಗುತ್ತಿಲ್ಲ. ಸರಿಯಾಗಿ ನಿಗಾವಹಿಸಿ, ಗುಂಡಿಗಳನ್ನು ಅಗೆಯಲು ಸ್ಪೋಟಕಗಳನ್ನು ಬಳಕೆ ಮಾಡುತ್ತಿದ್ದು, ಇದರಿಂದ ಸುತ್ತಲಿನಲ್ಲಿರುವ ಬೋರ್ವೆಲ್ ನೀರು ಬತ್ತಿ ಹೋಗುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ. ತೀವ್ರ ಅವಶ್ಯಕತೆಯ ಸಂದರ್ಭವನ್ನು ಹೊರತುಪಡಿಸಿ ಡ್ರಿಲ್ಲಿಂಗ್ ಮೂಲಕ ಗುಂಡಿಗಳನ್ನು ಅಗೆಯಬೇಕು. ಸ್ಥಳೀಯರಿಗೆ ತೊಂದರೆಯಾಗದಂತೆ ಕೆಲಸ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಮಲನಗರ ತಹಸೀಲ್ದಾರರಾದ ಅಮೀತಕುಮಾರ ಕುಲಕರ್ಣಿ, ಔರಾದ(ಬಿ) ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶೋಧಾ ಸಂತೋಷ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಪ್ರವೀಣ ಕಾರಬಾರಿ ಬಾಬುರಾವ ತೋರ್ಣಾವಾಡಿ, ಸಚಿನ ರಾಠೋಡ್, ರಾಜಕುಮಾರ ಅಲಬಿದೆ, ಸಚಿನ ಬಿರಾದಾರ, ಅನೀಲ ಬಿರಾದಾರ ಸೇರಿದಂತೆ ಪವರ್ ಗ್ರಿಡ್ ಕಾರ್ಪೋರೇಷನ್ ಅಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.