ದೆಹಲಿಯಲ್ಲಿ ಫೆ.28 ಕ್ಕೆ ಸಂಭ್ರಮದ ಸಂತ ಸೇವಾಲಾಲ ಜಯಂತಿಗೆ ಸಿದ್ಧತೆ: ಡಾ. ಉಮೇಶ್ ಜಾಧವ್
ದೆಹಲಿಯಲ್ಲಿ ಫೆ.28 ಕ್ಕೆ ಸಂಭ್ರಮದ ಸಂತ ಸೇವಾಲಾಲ ಜಯಂತಿಗೆ ಸಿದ್ಧತೆ: ಡಾ. ಉಮೇಶ್ ಜಾಧವ್
ಕಲಬುರಗಿ : ಬಂಜಾರ ಸಮುದಾಯದ ಧರ್ಮ ಗುರುಗಳಾದ ಸಂತ ಶ್ರೀ ಸೇವಾಲಾಲರ 287 ನೇ ಜಯಂತಿ ಉತ್ಸವ ಹಾಗೂ ಶ್ರೀ ರೂಪ ಸಿಂಗ್ ಮಹಾರಾಜರ ಪುಣ್ಯತಿಥಿ ಕಾರ್ಯಕ್ರಮವನ್ನು ಫೆ. 28ರಂದು ನವದೆಹಲಿಯಲ್ಲಿ ಸಂಭ್ರಮದಿಂದ ಆಚರಿಸಲು ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮಾಜಿ ಲೋಕಸಭಾ ಸದಸ್ಯರು ಹಾಗೂ ಅಖಿಲ ಭಾರತ ಬಂಜಾರ ಸೇವಾ ಸಂಘದ ಕಾರ್ಯಾಧ್ಯಕ್ಷರಾದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.
ನವದೆಹಲಿಯ ಜನಪಥ ರಸ್ತೆಯ ಡಾ. ಅಂಬೇಡ್ಕರ್ ಅಂತರಾಷ್ಟ್ರೀಯ ಸೆಂಟರ್ ನಲ್ಲಿ ಫೆ.28ರಂದು ಬೆಳಗ್ಗೆ 11 ಗಂಟೆಗೆ ಜಯಂತೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ನವದೆಹಲಿಯ ಸಂತ ಸೇವಾಲಾಲ ಮಹಾರಾಜ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ 7ನೇ ಬಾರಿಗೆ ನವದೆಹಲಿಯಲ್ಲಿ ಗುರುಗಳ ಜಯಂತಿ ಆಚರಣೆಯನ್ನು ಮಾಡಲಾಗುತ್ತಿದೆ. ಬಂಜಾರ ಸಂಸ್ಕೃತಿಗೆ ಸಂಬಂಧಪಟ್ಟಂತೆ ಈವರೆಗೆ 10 ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ದೇಶದ ಎಲ್ಲ ರಾಜ್ಯಗಳಿಂದ ಬಂಜಾರ ಸಮುದಾಯದ ಕಲಾವಿದರು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಮಣ್ಣು ಹಾಗೂ ಜಲ ಸಂರಕ್ಷಣಾ ಖಾತೆಯ ಸಚಿವರಾದ ಸಂಜಯ್ ಡಿ. ರಾಥೋಡ್, ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಶಂಕರ್ ರಾಥೋಡ್ ಹಾಗೂ ಕೇಂದ್ರ ರಾಜ್ಯ ಸರ್ಕಾರಗಳ ಸಚಿವರು, ಮಾಜಿ ಸಂಸದರು, ಶಾಸಕರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಜಾಧವ್ ತಿಳಿಸಿದರು.
ದೇಶದ ವಿವಿಧ ರಾಜ್ಯಗಳ ಬಂಜಾರ ಕಲಾವಿದರು ಜಯಂತಿ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
