ವಿನಯ ವಿದ್ವತ್ತಿನ- 'ಜಾನಪದ ಫಸಲು'

ವಿನಯ ವಿದ್ವತ್ತಿನ- 'ಜಾನಪದ ಫಸಲು'
ಬುದ್ದ, ಬಸವ, ಅಂಬೇಡ್ಕರ್, ಫುಲೇ ,ಶಾಹು, ಕನಕ ಕುವೆಂಪುರವರ ವಿಚಾರಗಳನ್ನು ತತ್ವ ಸಿದ್ಧಾಂತ ಮೈಗೂಡಿ ಸಿಕೊಂಡು ಅವರ ವಿಚಾರಗಳನ್ನು ನಾಡಿನಾದ್ಯಂತ ಪಸರಿಸುತ್ತಿರುವ, ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಆಡು ಮಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಯಂತೆ ಡಾ.ಗವಿಸಿದ್ಧಪ್ಪ ಪಾಟೀಲರು ಪ್ರಯೋಗಿಸದಿರುವ ಸಾಹಿತ್ಯದ ಪ್ರಕಾರವೇ ಇಲ್ಲವೆನ್ನಬಹುದು, ಎಲ್ಲ ಪ್ರಕಾರಗಳನ್ನು ಉಪಯೋಗಿಸಿ ಸಾಹಿತ್ಯ ರಚಿಸಿದ್ದಾರೆ.
ಇವರ ನೂತನ ಜಾನಪದ ಫಸಲು ಗ್ರಂಥವು ಲೇಖಕರ ಇಲ್ಲಿಯವರೆಗಿನ ಕಲ್ಯಾಣ ಕರ್ನಾಟಕ ಜಾನಪದ ಅಧ್ಯಯನದ ವಿಶಾಲತೆಯನ್ನು ತೋರಿಸುತ್ತದೆ ಓದು ಬರಹದಲ್ಲಿ ಜೀವನೋತ್ಸಾಹ ಕಂಡುಕೊಂಡಿರುವ ಇವರು ತಾವಷ್ಟೇ ಓದಿನಲ್ಲಿ ತೊಡಗದೇ ತಮ್ಮ ಸುತ್ತಲಿನ ಅನೇಕ ಯುವಕರನ್ನು ಹುರಿದುಂಬಿಸಿ ಓದಿಸುವ, ಅದರ ಕುರಿತು ಮಾತನಾಡಿಸುವ, ಬರವಣಿಗೆಗೆ ಹಚ್ಚುವ ಕಾರ್ಯವನ್ನು ಕೂಡಾ ನಿರಂತರವಾಗಿ ಮಾಡುತ್ತ ಬರುತ್ತಿದ್ದಾರೆ. ಅವರ ಗರಡಿಯಲ್ಲಿ ಪಳಗಿರುವ ಅನೇಕ ಯುವ ಲೇಖಕರು ಇಂದು ಬರವಣಿಗೆಗೆ ತೊಡಗಿಕೊಂಡು ಹೆಸರು ಮಾಡುತ್ತಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ಮೂಲ ಬೇರು ಜಾನಪದ ಸಾಹಿತ್ಯ. ಇಂಥ ಜಾನಪದದ ಕುರಿತು ನಾಡಿನ ಅನೇಕ ಜಾನಪದ ವಿದ್ವಾಂಸರನ್ನು ಒಂದೆಡೆ ಸೇರಿಸುವ ಕೆಲಸ ಡಾ.ಗವಿಸಿದ್ಧಪ್ಪ ಪಾಟೀಲ ಅವರು ಮಾಡಿದ್ದಾರೆ ಜಾನಪದ ಫಸಲು ಕೃತಿ ರಚನೆ ಮಾಡುವ ಮೂಲಕ ಇಂಥ ವಿಶಿಷ್ಟ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ನಾಡಿನ ಅದರಲ್ಲೂ ಕಲ್ಯಾಣ ಕರ್ನಾಟಕದ ಎಲೆ ಮರೆಯ ಕಾಯಿಯಂತಿರುವ ಜಾನಪದ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಜಾನಪದ ಕಲಾವಿದರನ್ನು ಗುರುತಿಸುವ ಕಾರ್ಯ ನಿರ್ವಹಿಸಿದ್ದಾರೆ.
"ಜಾನಪದ ಫಸಲು" ಕೃತಿಯು ಐದು ಭಾಗಗಳನ್ನು ಒಳಗೊಂಡಿದೆ. ಜಿಲ್ಲೆಯ ಜಾನಪದ ಲೋಕವು ಬೀದರ ಜಿಲ್ಲೆಯ ಸಮಗ್ರ ಜಾನಪದ ಸಾಹಿತ್ಯವನ್ನು ವಿಶ್ಲೇಷಿಸುತ್ತದೆ. ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಕಾರಣಗಳಿಂದ ಕೂಡಿದ ವಿಭಿನ್ನ ಚಿಂತನೆಗಳು ಇಲ್ಲಿನ ಲೇಖನಗಳಲಲಿವೆ. ಹಿರಿಯರಿಂದ ತಮ್ಮ ಅನುಭವಗಳಿಂದ ಕಥೆಯ ರೂಪ ತಾಳಿ ಕಿವಿಯಿಂದ ಕಿವಿಗೆ ಬಾಯಿಂದ ಬಾಯಿಗೆ ಮೌಖಿಕ ಕಥೆಗಳಾಗಿ ಸಮುದಾಯದಲ್ಲಿ ಪರಂಪರೆಯಿಂದ ಬೆಳವಣಿಗೆ ಹೊಂದಿದ ಕಥಾ ಸಾಹಿತ್ಯದ ಪ್ರಮುಖ ಗ್ರಂಥವಾದ ವಡ್ಡಾರಾಧನೆ ಅದರ ಲೇಖಕರಾದ ಬ್ರಾಜಿಷ್ಣು ಬೀದರ ಜಿಲ್ಲೆಯ ಹಳ್ಳಿಖೇಡ (ಬಿ) ಗ್ರಾಮದವರು ಅವನ 'ಆರಾಧನಾ ಕರ್ಣಾಟ ಟೀಕೆ'ಯು ಜಿಲ್ಲೆಯ ಶ್ರೇಷ್ಠತೆಯನ್ನು ಒತ್ತಿ ಹೇಳುತ್ತದೆ ಅಲ್ಲಿನ ಒಡಪು, ಒಗಟು, ಬಯಲಾಟ, ಸಣ್ಣಾಟ, ಲಾಲಿ -ಜೋಗುಳ ಹಾಡು ಭುಲಾಯಿ, ಹಂತಿಪದ, ಮೋಹರಂ, ಕೋಲಾಟ, ಭೂತೇರು ಕುಣಿತ,ಡೊಳ್ಳು, ತತ್ವಪದದಂತೆ ಅನೇಕ ಜನಪದ ಪ್ರಕಾರಗಳನ್ನು ಹಾಗೂ ಅಲ್ಲಿನ ಜಾನಪದ ವಿದ್ವಾಂಸರನ್ನು ದಾಖಲೀಕರಣ ಮಾಡಿದ್ದಾರೆ. ಕನ್ನಡ ಭಾಗದಲ್ಲಿ ಸಿಗದೇ ಇರುವ ಭೂತೇರು, ಬುಲಾಯಿ ಹಾಡು ಜಿಲ್ಲೆಯಲ್ಲಿ ಮಾತ್ರ ಸಿಗುವುದನ್ನು ಎತ್ತಿ ಹೇಳಿದ್ದಾರೆ. ಜನಪದರ ಬೀಸುವ ಹಾಡಿನಲ್ಲಿ ಕಾಣುವ ಸಾಂಸಾರಿಕ ಜೀವನದ ಅನೇಕ ಪ್ರಕ್ರಿಯೆಗಳು ಇಲ್ಲಿ ಬಳಕೆಯಾಗುವುದರಿಂದ ಶ್ರಮದ ಕಾರ್ಯ ಮಾಡುವ ಸಂದರ್ಭದಲ್ಲಿ ಇಂಥ ಹಾಡು ಹಾಡುವ ಮೂಲಕ ಶ್ರಮವನ್ನು ಮರೆಯುವಂಥ ಗ್ರಾಮೀಣರ ಹಾಡುಗಳನ್ನು ಕಾಣಬಹುದು ಆಂಧ್ರ -ಮಹಾರಾಷ್ಟ್ರದ ಗಡಿಭಾಗದಲ್ಲಿನ ಕಲ್ಯಾಣ ಕರ್ನಾಟಕವು ಮರಾಠಿ -ತೆಲುಗು ಉರ್ದು -ಹಿಂದಿ ,ಪಾರ್ಸಿ -ಅರೇಬಿಕ್ ಭಾಷೆಯ ಮಿಶ್ರಿತ ಜಾನಪದ ಭಾಷಾ ವೈಶಿಷ್ಟ್ಯವು ಈ ಭಾಗದಲ್ಲಿ ಕಂಡು ಬರುವುದನ್ನು ಗುರುತಿಸಿದ್ದಾರೆ.
ಒಂದು ಹಂತದಲ್ಲಿ ಜಾನಪದವೆಂದರೆ ಮೂಗು ಮುರಿಯುವ ಕಾಲವಿತ್ತು. ಅಂಥ ಸಂದರ್ಭದಲ್ಲಿ ಈ ಭಾಗದ ಹತ್ತಾರು ಲೇಖಕರು ಜಾನಪದ ಕ್ಷೇತ್ರದ ವಿಸ್ತಾರಕ್ಕೆ ಕೆಲಸ ಮಾಡಿರುವ ಅನೇಕ ವಿದ್ವಾಂಸರು ಇಲ್ಲಿ ಸೇವೆ ಸಲ್ಲಿಸಿರುವ ಕಲಾವಿದರ ಪರಿಚಯಾತ್ಮಕ ಲೇಖನ ಗಮನ ಸೆಳೆಯುತ್ತದೆ
ಭಾರತದ ಬುಡಕಟ್ಟು ಜನಾಂಗಗಳು ವಿಭಿನ್ನ ಸಂಸ್ಕೃತಿಯ ನ್ನು ಹೊಂದಿ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತವೆ. ಅವುಗಳ ಕುಲಶಾಸ್ತ್ರೀಯ ಅಧ್ಯಯನದ ಅವಶ್ಯಕತೆಯಿದೆ ಅಂಥದ್ದೆ ಪಾರ್ದಿ ಜನಾಂಗದ ಮೂಲವನ್ನು ಕುರಿತ ವಿಶ್ಲೇಷಿಸುವ ಲೇಖನವನ್ನು ಅಂಕಿ ಅಂಶಗಳ ಮೂಲಕ ವರದಿಸಿದ್ದಾರೆ. ಮುಂದೆ ಏನು ಮಾಡಬೇಕೆಂಬ ಸಲಹೆ ನೀಡಿದ್ದಾರೆ. ಆಧುನಿಕ ಸಮಾಜದಲ್ಲಿ ನಾಗರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದರೂ ತಮ್ಮ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿರುವ ಲಂಬಾಣಿ ಜನಾಂಗದ ಡಿ.ಬಿ.ನಾಯಕರ ಕುರಿತ ಅವರ ವ್ಯಕ್ತಿ ಅಧ್ಯಯನ ಮತ್ತು ಅವರ ಕೃತಿ ಅವಲೋಕನ ಲೇಖನ ಆಪ್ತವೆನಿಸುತ್ತದೆ. ಜನಪರ ಬದುಕಿನಲ್ಲಿ ಹಾಸು ಹೊಕ್ಕಗಿರುವ ಹೈದರಾಬಾದ್ ಕರ್ನಾಟಕ ಜನಪದ ಪ್ರದರ್ಶನ ಕಲೆಗಳು ಜಾನಪದ ಸಂಸ್ಕೃತಿಕ ಬದುಕನ್ನು ಅನಾವರಣಗೊಳಿಸುವ ಪ್ರೊ. ಎಚ್. ಟಿ. ಪೋತೆ ಅವರ ಸಂಶೋಧನಾ ಪ್ರಬಂಧ ಓದಿದಾಗ ಮಾತ್ರ ಅರ್ಥವಾಗಬಹುದು ಹಾಗೆಯೇ ಪ್ರೊ. ಬಸವರಾಜ ಸಬರದರವರ ಜನಪದ ದೇವತೆಗಳು ಮತ್ತು ಶಿಷ್ಟ ದೇವತೆಗಳು, ವೀರಣ್ಣ ದಂಡೆಯವರು ಸಂಪಾದಿಸಿರುವ ಜನಪದ ಹಾಲುಮತ ಮಹಾಕಾವ್ಯ ಸಂಪಾದಿಸಿದ್ದಾರೆ ಇದರಲ್ಲಿ ಮೇಟಿ ಸಿದ್ದಪ್ಪನವರು 850 ಪುಟಗಳಿಂದ ಕೂಡಿದ ಮಹಾಕಾವ್ಯವನ್ನು 75 ಕ್ಯಾಸೆಟ್ ಗಳನ್ನು ಹಾಡಿರುವದನ್ನು ದಾಖಲಿಸಿದ್ದಾರೆ. ಈ ಕೃತಿಯ ಒಳ ಹೊಕ್ಕು ಭಾರತೀಯ ಜನಾಂಗಿಕ ಮಹಾಕಾವ್ಯವಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ. ನಾಡಿನ ಶ್ರೇಷ್ಠ ಜಾನಪದ ಕೃತಿಗಳಾದ ಬಸವರಾಜ ಪೊಲೀಸ ಪಾಟೀಲರ ಜಾನಪದ ವ್ಯಾಸಂಗ, ಜಾನಪದ ಚಿಂತನ, ಬಿ.ಬಿ.ಹೆಂಡಿಯವರ ಜಾನಪದಶಾಸ್ತ್ರ, ಸೂರ್ಯಕಾಂತ ಸುಜ್ಯಾತ್ ರ ದೇಗಾಂವದ ತತ್ವಪದಗಳು, ಎಂ.ಎಸ್. ಲಠ್ಠೆಯವರ ಕಲ್ಯಾಣ ನಾಡಿನ ಪರಂಜ್ಯೋತಿ ಸಿರಗಾಪುರದ ನಾಗೇಂದ್ರ ಕವಿಗಳ ಭಜನಾ ಹಾಡುಗಳನ್ನು ಕುರಿತ ಮಹತ್ವದ ಕೃತಿಗಳ ಮೇಲೆ ವಿಮರ್ಶಾ, ವಿಶ್ಲೇಷಣೆ ಲೇಖನಗಳನ್ನು ಬರೆಯುವ ಮೂಲಕ ಅವರನ್ನು ನಾಡಿಗೆ ಪರಿಚಯಿಸಿದ್ದಾರೆ. ಮೀನಾಕ್ಷಿ ಬಾಳಿಯವರ ಕಡಕೋಳ ಮಡಿವಾಳಪ್ಪನವರ ಶಿಷ್ಯರ ತತ್ವಪದಗಳು ಮರಕುಂಬಿ ಬಸವಣ್ಣಪ್ಪರ ನಿಜಾನಂದ ಲಹರಿ ಲೇಖನಗಳು ಅವರ ಓದಿನ ವಿದ್ವತ್ ಲೋಕ ಅರಿವಿಗೆ ಬರುತ್ತವೆ.
ಜಾನಪದ ಫಸಲು ಕೃತಿಯಲ್ಲಿರುವ ಪ್ರಮುಖ ಅಧ್ಯಾಯ ಜಾನಪದ ವಿದ್ವಾಂಸರ ಲೋಕದಲ್ಲಿ ನಾಡಿನ ಪ್ರಖ್ಯಾತ ಜಾನಪದ ವಿದ್ವಾಂಸರ ಕುರಿತ ಲೇಖನಗಳು ಆಸಕ್ತಿದಾಯಕವಾಗಿವೆ. ಎಚ್.ಎಲ್.ನಾಗೇಗೌಡರು, ಕವಿ, ಕತೆಗಾರ, ಕಾದಂಬರಿಕಾರ, ಆಡಳಿತಗಾರರಾಗಿಯೂ ಹೆಸರಾದವರು ಅದಕ್ಕಿಂತ ಹೆಚ್ಚಿನ ಮಹತ್ವ ಅವರು ಮಾಡಿರುವ ಜಾನಪದ ಕ್ಷೇತ್ರ ವಿಶೇಷವಾಗಿದೆ. ಅವರ ಒಳ ಅಂತರಂಗ ಜಾನಪದವೆ ಎಂದು ಬರೆಯುವ ಮೂಲಕ ನ್ಯಾಯ ಒದಗಿಸಿರುವರು. ಹೈದರಾಬಾದ ಕರ್ನಾಟಕದ ಕಾರಂತಜ್ಜನೆಂದೇ ಪ್ರಸಿದ್ದಿಯಾದ ಮುದೇನೂರು ಸಂಗಣ್ಣನವರು ಕರ್ನಾಟಕ ಏಕೀಕರಣ ಚಳವಳಿಯ ಸಂದರ್ಭದಲ್ಲಿ ಹೋರಾಟಗಾರರಾಗಿಯೂ ಜಾನಪದ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ತೆಗೆದಕೊಂಡು ಹೋಗಿದ್ದಾರೆ ಮೃತ್ಯುಂಜಯ ಹೊರಕೇರಿ, ಮ.ಗು ಬಿರಾದಾರ, ಎಂ.ಎಸ್.ಲಠ್ಠೆ, ಪಿ.ಕೆ.ಖಂಡೋಬಾ ಡಿ.ಬಿ.ನಾಯಕ, ಟಿ.ಎಂ.ಭಾಸ್ಕರ್, ದುರ್ಗಾದಾಸ, ಕ್ರೈಸ್ತ ಜಾನಪದ ಜೀವಿ ತಲ್ವಾಡಿ, ಕಾಶಿನಾಥರೆಡ್ಡಿ, ಎ.ಕೆ ರಾಮೇಶ್ವರ, ಗೋವಾ ಕನ್ನಡಿಗರಿಗೆ ಕುರಿತ ಕೆಲಸ ಮಾಡಿರುವ ಜಾನಪದ ಕ್ಷೇತ್ರವನ್ನು ವಿಭಿನ್ನ ಚಿಂತನೆಯ ಮೂಲಕ ಕಂಡುಕೊಂಡ ಹರಿಶ್ಚಂದ್ರ ದಿಗಸಂಗಿಕರ್, ಜಾನಪದ ಜೀವಾಳವಾಗಿಸಿಕೊಂಡ ಹಣಮಂತರಾವ ದೊಡ್ಡಮನಿ, ಸೂಗಯ್ಯ ಹಿರೇಮಠ, ಮೊದಲಾದವರ ಜಾನಪದದ ವಿದ್ವಾಂಸರ ಮೇಲೆ ಬೆಳಕು ಚೆಲ್ಲುತ್ತವೆ.
ಜಾನಪದ ಕಲಾವಿದರ ಲೋಕದಲ್ಲಿ ಶಂಭುಲಿಂಗ ವಾಲ್ದೊಡ್ಡಿ, ಮಂಡಲಗಿರಿ ಈರಪ್ಪ ತೋಟದ, ಶರಣಪ್ಪ ವಡಗೇರಿ, ಇಮಾಮಸಾಬ, ಫಕೀರಪ್ಪ, ಗಜಲ್ ಗುಂಡಮ್ಮ ಅಮರೆಮ್ಮ, ರಾಮಣ್ಣ, ಆರೋಲಿ ಮರೆಮ್ಮನಂತಹ ಅನೇಕ ಜಾನಪದ ಕಲಾವಿದರನ್ನು ಇಂದು ಹುಡುಕಿದರೂ ಸಿಗದ ಅಲಕ್ಷ್ಯಕ್ಕೆ ಒಳಗಾದ ಕಲಾವಿದರ ದಾಖಲೀಕರಣ ಮಾಡಿದ್ದಾರೆ. ಕೊಪ್ಪಳ, ರಾಯಚೂರು, ಬೀದರ ಜಿಲ್ಲೆಯ ಕಲಾವಿದರು ಇಲ್ಲಿದ್ದಾರೆ. ಆ ಮೂಲಕ ಜಾನಪದ ಫಸಲು ಈ ನಾಡಿಗೆ ಪರಿಚಯಿಸುತ್ತದೆ
ಒಟ್ಟಿನಲ್ಲಿ ಈ ಜಾನಪದ ಫಸಲು ಕೃತಿಯು ಕನ್ನಡದ ಶ್ರೇಷ್ಠ ಜಾನಪದ ಕೃತಿಗಳ ಸಾಲಿಗೆ ಸೇರುವ ಸೇರ್ಪಡೆಗೊಂಡ ಮಹತ್ವದ ಕೃತಿಯಾಗಿದೆ. ಅಧ್ಯಯನಕ್ಕೆ ಅತ್ಯಂತ ಉಪಯಕ್ತವಾದ ಗ್ರಂಥವಾಗಿದೆ .ಈ ಭಾಗದ ಜಾನಪದ ಕೃತಿಗಳು, ನಾಡಿನ ವಿದ್ವಾಂಸರು, ಜಾನಪದ ಸಾಹಿತ್ಯದ ಹಲವು ಸಂಗಮಗಳ ನೋಟ ಇಲ್ಲಿವೆ. ಇದು ಡಾ.ಪಾಟೀಲರ ಅಧ್ಯಯನ, ಅಧ್ಯಾಪನ, ವಿಮರ್ಶಾನೋಟ, ಕ್ಷೇತ್ರಕಾರ್ಯ ಕಾರ್ಯ ಆಧಾರಿತ ಮತ್ತು ಅವರ ಜಾನಪದ ಪ್ರೀತಿ ಇಲ್ಲಿ ಕಂಡು ಬರುತ್ತದೆ. ವಿನಯ- ವಿದ್ವತ್ತಿನ ಗ್ರಂಥ ಇಂತಹ ವಿದ್ವಾಂಸರು ವಿಮರ್ಶೆಗೆ ಒಳಪಡಬೇಕಾಗಿದೆ..
ಲೇಖಕರು:ಡಾ.ಚಿದಾನಂದ ಕುಡ್ಡನ್,ಶಿಕ್ಷಕರು ಮತ್ತು ಲೇಖಕರು
ಸರಕಾರಿ ಪ್ರೌಢ ಶಾಲೆ,ಮರಗುತ್ತಿ