ಮಾನವೀಯತೆಗೆ ಮೀಸಲಾದ ಕಥಾನಾಯಕಿ: ಡಾ. ಗೀತಾ ನಾಗಭೂಷಣ

ಮಾನವೀಯತೆಗೆ ಮೀಸಲಾದ ಕಥಾನಾಯಕಿ: ಡಾ. ಗೀತಾ ನಾಗಭೂಷಣ

ಮಾನವೀಯತೆಗೆ ಮೀಸಲಾದ ಕಥಾನಾಯಕಿ: ಡಾ. ಗೀತಾ ನಾಗಭೂಷಣ

ಡಾ. ಗೀತಾ ನಾಗಭೂಷಣರು ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದ ಹಿರಿಯ ಸಾಹಿತಿಗಳಲ್ಲಿ ಒಬ್ಬರು. 1942ರ ಮಾರ್ಚ್ 25ರಂದು ಕಲಬುರಗಿ ಜಿಲ್ಲೆಯ ಹಿಂದುಳಿದ ಹಳ್ಳಿಯಲ್ಲಿ ಜನಿಸಿದ ಅವರು, ಆ ಕಾಲದ ಬಡತನ, ಹೆಣ್ಣು ಮಕ್ಕಳ ಶಿಕ್ಷಣವನ್ನು ನಿರಾಕರಿಸುವ ಸಾಮಾಜಿಕ ಸ್ಥಿತಿಗತಿಗಳನ್ನು ಎದುರಿಸಿ, ತಮ್ಮ ಜಿವನವನ್ನು ಬೆಳಗಿಸಿಕೊಂಡು, ಇಡೀ ಸಮಾಜಕ್ಕೆ ಬೆಳಕಾದವರು.

ಬಿ.ಎ, ಬಿ.ಎಡ್ ಮತ್ತು ಎಂ.ಎ ಪದವಿಗಳನ್ನು ಗಳಿಸಿದ ನಂತರ ಅವರು ಬಹುಕಾಲ ಅಧ್ಯಾಪನ ವೃತ್ತಿಯಲ್ಲಿ ತೊಡಗಿದರೂ, ಬರಹವೆಂದರೆ ಅವರ ಜೀವಾಳ. ತಮ್ಮ ಬದುಕಿನ ಅನುಭವಗಳನ್ನು, ಮಹಿಳೆಯರ ಸಂಕಟಗಳನ್ನೂ, ಸಮಾಜದ ವೈಷಮ್ಯವನ್ನೂ ಸ್ಪಷ್ಟವಾಗಿ ಅಭಿವ್ಯಕ್ತಿಸಿದ ಅವರು, ಬರಹವನ್ನೂ ಬದುಕಿನ ಚಳವಳಿಯಾಗಿ ಬಳಸಿದರು.

1968ರಲ್ಲಿ ಪ್ರಕಟವಾದ ‘ತಾವರೆಯ ಹೂವು’ ಕಾದಂಬರಿಯಿಂದ ತಮ್ಮ ಸಾಹಿತ್ಯಿಕ ಪ್ರವಾಸ ಆರಂಭಿಸಿ, ‘ಬದುಕು’ ಕಾದಂಬರಿವರೆಗೆ ಅವರು 27 ಕಾದಂಬರಿಗಳನ್ನು ರಚಿಸಿದ್ದಾರೆ. 2004ರಲ್ಲಿ ‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಲಭಿಸಿತು. ಅವರ ‘ಹಸಿಮಾಂಸ ಮತ್ತು ಹದ್ದುಗಳು’ ಕಾದಂಬರಿ ‘ಹೆಣ್ಣಿನ ಕೂಗು’ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿ ಜನಮನ ಸೆಳೆದಿತು.

ಅವರು ಬರಹಗಳ ಮೂಲಕ ಮಹಿಳಾ ಚೇತನೆಗೆ ಬಲ ನೀಡಿದರು. 50ಕ್ಕೂ ಹೆಚ್ಚು ಸಣ್ಣ ಕಥೆಗಳು, 12 ನಾಟಕಗಳು, ಎರಡು ಸಂಕಲನಗಳು, ಸಂಶೋಧನಾ ಕೃತಿಗಳು ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ತಮ್ಮ ಸಾಹಿತ್ಯಿಕ ಛಾಪು ಮೂಡಿಸಿದರು. ಗದಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿ ಸಾಹಿತ್ಯವನ್ನು ಮಾನವೀಯ ಮೌಲ್ಯಗಳ ಮೆಟ್ಟಿಲಿಗೆ ಎತ್ತಿ ಹಿಡಿದರು.

ಅವರ ಭಾಷಣದಲ್ಲಿ ತಾವು ಹೇಳಿದಂತೆ –ಸಾಹಿತ್ಯವು ಮನಸ್ಸಿನ ಸುಧಾರಣೆಗೆ ಸೇವೆ ಮಾಡಬೇಕು. ಬುದ್ಧನ ಕರುಣೆ, ಬಸವನ ಛಲ, ಬಾಬಾ ಸಾಹೇಬರ ಸ್ವಾಭಿಮಾನ, ಗಾಂಧೀಜಿಯ ಅಹಿಂಸೆ – ಇವೆಲ್ಲದರೊಂದಿಗೆ ನಮ್ಮ ಸಾಹಿತ್ಯವೂ ಕ್ರಾಂತಿಯ ಹಾದಿ ಹಿಡಿಯಬೇಕು.” ಎಂಬ ಮಾತುಗಳು ಇಂದಿಗೂ ಅರ್ಥಪೂರ್ಣವಾಗಿವೆ.

ಅವರು ಗುಲ್ಬರ್ಗ ವಿಶ್ವವಿದ್ಯಾಲಯದ ಡಾಕ್ಟರೇಟ್ ಪಡೆದವರು, ಅತ್ತಿಮಬ್ಬೆ ಪ್ರಶಸ್ತಿ, ನಾಡೋಜ ಪುರಸ್ಕಾರ ಸೇರಿದಂತೆ ಹಲವಾರು ಗೌರವಗಳನ್ನು ಗಳಿಸಿದರು. ಅಲ್ಲದೆ, ಅವರು ಕನ್ನಡಕ್ಕೆ ಮೊಟ್ಟಮೊದಲ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿಯನ್ನು ತಂದುಕೊಟ್ಟ ಹೆಮ್ಮೆಗೂ ಪಾತ್ರರಾದರು.

ಕನ್ನಡ ಸಾಹಿತ್ಯದ ಈ ಅಪೂರ್ವ ಲೇಖಕಿಯು 2020ರ ಜೂನ್ 28ರಂದು ಇಹಲೋಕ ತ್ಯಜಿಸಿದರು. ಆದರೆ ಅವರ ಬರಹಗಳು, ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿವೆ.

ಡಾ. ಗೀತಾ ನಾಗಭೂಷಣರು ಮಾತ್ರವಲ್ಲ, ಅವರ ಜೀವನವೇ ಒಂದು ಪ್ರೇರಣೆಯ ಕಥೆ. ಅವರು ಎದ್ದು ಬಂದ ಹಿನ್ನಲೆ, ಬದುಕು ಕಂಡ ಹಾದಿ ಮತ್ತು ಸಮರ್ಪಿಸಿದ ಸಾಹಿತ್ಯ, ಇಂದಿನ ಯುವ ಲೇಖಕರಿಗೆ ದಿಕ್ಕು ತೋರಿಸುವ ದೀಪಸ್ತಂಭವಾಗಿದೆ.