ಮೌಲ್ಯವಿಲ್ಲದ ಶಿಕ್ಷಣವೇ ಭ್ರಷ್ಟ ಸಮಾಜದ ಮೂಲವೇ?

ಮೌಲ್ಯವಿಲ್ಲದ ಶಿಕ್ಷಣವೇ ಭ್ರಷ್ಟ ಸಮಾಜದ ಮೂಲವೇ?

ಆತ್ಮಾವಲೋಕನದ ಅಗತ್ಯವಿದೆ: ಮೌಲ್ಯವಿಲ್ಲದ ಶಿಕ್ಷಣವೇ ಭ್ರಷ್ಟ ಸಮಾಜದ ಮೂಲವೇ?

ಇಂದು ಭಾರತದಲ್ಲಿ ಶಿಕ್ಷಣವು ಪ್ರಗತಿಯ ಹಾದಿ ಎನ್ನಲಾಗುತ್ತಿದೆ. ಶಾಲೆ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯೆ ಪಡೆದು, ಕಿರೀಟದಂತೆ ಪದವಿಗಳನ್ನು ತೊಟ್ಟವರು ಆಡಳಿತದ ಹುದ್ದೆಗಳಲ್ಲಿ ಕುಳಿತಿದ್ದಾರೆ. ಆದರೆ ಪ್ರಶ್ನೆ ಇಲ್ಲಿದೆ – ಐಟಿ ದಾಳಿ ಯಾರ ಮೇಲೆ ಬೀಳುತ್ತಿದೆ....? ಅಕ್ಷರಶಕ್ತನಾದ ರೈತನ ಕೂಲಿ ಕಾರ್ಮಿಕರು ಮನೆಮೇಲೆ ಅಲ್ಲ; ವಿದ್ಯಾವಂತನಾದ ಅಧಿಕಾರಿ,ರಾಜಕಾರಣಿಯ ಮನೆಯ ಮೇಲೆ ! ಇದು ಅಶಿಕ್ಷಿತವನ್ನಾಗಿ ಹೇಳಲ್ಪಟ್ಟ ಜನರ ಎಥಿಕ್ಸ್ ಬಗ್ಗೆ ಯೋಚನೆ ಮಾಡಿಸುತ್ತದೆ. ಇದಕ್ಕೆ ಕಾರಣವೆಂದರೆ ಮೌಲ್ಯವಿಲ್ಲದ ಶಿಕ್ಷಣ.

ವಿದ್ಯೆ ಎಂಬುದು ಕೇವಲ ಪುಸ್ತಕದ ಓದು ಅಥವಾ ಪರೀಕ್ಷೆಯ ಅಂಕಗಳು ಮಾತ್ರವಲ್ಲ. ಅದು ವ್ಯಕ್ತಿತ್ವವನ್ನು ರೂಪಿಸುವ, ಮಾನವೀಯತೆಯನ್ನು ಬೆಳೆಸುವ, ಸಮಾಜದ ನೈತಿಕ ಅಡಿಪಾಯವನ್ನು ಬಲಪಡಿಸುವ ಶಕ್ತಿಯಾಗಿದೆ ಎಂಬ ನಂಬಿಕೆ ಈಗ ಹಿಮ್ಮೆಟ್ಟುತ್ತಿದೆ. ಶಾಲೆಯಲ್ಲಿ ವಿಜ್ಞಾನ ಕಲಿಯುತ್ತಿರುವ ವಿದ್ಯಾರ್ಥಿ ಮನೆಯಲ್ಲೇ ಮೂಢನಂಬಿಕೆಗೆ ಶರಣಾಗುತ್ತಿದ್ದರೆ, ಕಾಲೇಜಿನಲ್ಲಿ ಪ್ರಬಂಧ ಬರೆಯುವ ಯುವಕ ಮನಸ್ಸಿನಲ್ಲಿ ಜಾತಿ-ಮತದ ಕುಹರದಲ್ಲಿದ್ದರೆ, ಪಿಎಚ್‌ಡೀ ಮಾಡಿದವನು ತನ್ನ ವೃದ್ಧ ತಂದೆ-ತಾಯಿಯನ್ನು ಆಶ್ರಮಕ್ಕೆ ಕಳಿಸುತ್ತಿದ್ದರೆ – ಅಂಥ ವಿದ್ಯೆಯ ಬಗ್ಗೆಯೆ ಹೆಮ್ಮೆಪಡುವುದೇನು..? ಮೊನ್ನೆ ಮಹಾರಾಷ್ಟ್ರದಲ್ಲಿ ಒಬ್ಬ ಶಿಕ್ಷಕ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಮಗಳನ್ನು  ಕೊಲೆ ಮಾಡಿರುವ ಬಗ್ಗೆ ತಿಳಿದರೆ. ಇಂಥ ಶಿಕ್ಷಣ ಪಡೆದ ಶಿಕ್ಷಕ ಏಕೆ ಬೇಕು. 

ಇಂತಹ ಸಮಯದಲ್ಲಿ ನಮ್ಮ ದೃಷ್ಟಿ ಹಿಂದಿನ ಶರಣ ಸಿದ್ಧಾಂತದತ್ತ ಹೋಗಬೇಕು. ಶರಣರು ಹೇಳಿದ ಮಾತುಗಳು – "*ಕಳಬೇಡ, ಕೊಲಬೇಡ, ಹುಸಿಯ ನುಡಿಯಲಬೇಡ*" ಎಂಬಂತಹ ವಚನಗಳು ಶಿಕ್ಷಣದ ಅಡಿಗಲ್ಲುಗಳಾಗಬೇಕು. ಇವು ಕೇವಲ ಧಾರ್ಮಿಕ ಅಭಿವ್ಯಕ್ತಿಗಳಲ್ಲ; ಅವು ಮಾನವೀಯತೆ, ಶ್ರದ್ಧೆ, ಸಹಾನುಭೂತಿ, ಶಿಸ್ತು, ತ್ಯಾಗದ ಪಾಠಗಳು. 12ನೇ ಶತಮಾನದಲ್ಲಿ ಶಾಲೆಕೂ ಕಾಲೇಜಿಲ್ಲದೆ ಶರಣರು ನೀಡಿದ ಶಿಕ್ಷಣ ಮೌಲ್ಯಮಯವಾಗಿತ್ತು – ನೈತಿಕವಾಗಿ, ತತ್ತ್ವಜ್ಞಾನದ ದೃಷ್ಟಿಯಿಂದ!

ಆದರೆ ಇಂದಿನ ಶಿಕ್ಷಣದಲ್ಲಿದೆ ಏನು? ಮಕ್ಕಳಿಗೆ ಶಿಸ್ತು ಇಲ್ಲದೆ ಅಂಕ ಗಳಿಸುವ ಕಲಿಕೆ. ಅವರಿಗೆ ಕಾಳಜಿ ಉದ್ಯೋಗದ ಬಗ್ಗೆ, ಆದರೆ ಜೀವನಮೌಲ್ಯಗಳ ಬಗ್ಗೆ ಇಲ್ಲ. ಅವರು ನವೀಕರಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಆದರೆ ಸಂಬಂಧಗಳನ್ನು ಉಳಿಸಿಕೊಂಡು ಹೋಗಲು ನೈತಿಕ ಶಕ್ತಿ ಇಲ್ಲ. ಈ ಕಾರಣಕ್ಕೇ ವಿದ್ಯಾವಂತರಲ್ಲಿಯೇ ಹೆಚ್ಚು ವಿವಾಹ ವಿಚ್ಛೇದನೆ, ಅನಿಷ್ಟಾಚರಣೆಗಳು ಕಂಡು ಬರುತ್ತಿವೆ. ಆದರೆ ಹಳ್ಳಿಯ ಮೂಢನಂಬಿಕೆಯ ಬಡಕುಟುಂಬಗಳಲ್ಲಿ ಸಹಜ ಮೌಲ್ಯಗಳು ಇನ್ನೂ ಜೀವಂತವಾಗಿವೆ – ಗಂಡ ಹೆಂಡತಿಯ ನಡುವಿನ ಗೌರವ, ಕುಟುಂಬದ ಏಕತೆ, ಸಂಯಮ ಇವು ಎಲ್ಲಾ ಅಲ್ಲಿ ಇಂದಿಗೂ ಕಂಡುಬರುತ್ತವೆ.

ಇನ್ನು ಅಧಿಕಾರ ವಲಯದಲ್ಲೂ, ವಿದ್ಯಾವಂತರೇ ಹೆಚ್ಚು ಭ್ರಷ್ಟರಾಗಿರುವುದನ್ನು ಗಮನಿಸಬಹುದು. ದೇಶವನ್ನು ಆಳಬೇಕಾದವರಲ್ಲಿ, ಮೌಲ್ಯಗಳನ್ನು ಪಾಲಿಸುವ ಬದಲು ಸುವರ್ಣದ ಕುರ್ಚಿಗಾಗಿ ವಂಚನೆ, ಲಂಚ, ಮೋಸ ನಡೆಯುತ್ತಿರುವುದು ದುರಂತ.

ಇಂತಹ ಸಂದರ್ಭದಲ್ಲಿ ಶಿಕ್ಷಣದ ಮೌಲ್ಯಮಾಪನ ಬಹಳ ಅಗತ್ಯವಾಗಿದೆ. ಶಿಕ್ಷಣವು ಕೇವಲ ಉದ್ಯೋಗ ಕೊಡುವ ಸಾಧನವಾಗಬಾರದು. ಅದು ಉತ್ತಮ ಮನುಷ್ಯನನ್ನು ರೂಪಿಸಬೇಕು. ಶರಣರ ಪಾಠಗಳು, ಭಕ್ತಿಯ ಬದಲಾವಣೆಗಳು, ತತ್ತ್ವ ಚಿಂತನೆಗಳು ಇಂದಿನ ಪಾಠ್ಯಕ್ರಮದ ಭಾಗವಾಗಬೇಕು. ಶಿಕ್ಷಣದಿಂದ ಉದ್ಭವಿಸಬೇಕಾದ ತಂತ್ರಜ್ಞಾನ, ವಿಜ್ಞಾನ, ಕಲಾಪ್ರವೃತ್ತಿಗಳೊಂದಿಗೆ ಮೌಲ್ಯಪೂರ್ಣ ಜೀವನದ ಪರಿಕಲ್ಪನೆಯೂ ಬೆಳೆದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ.

ಅಂತಿಮವಾಗಿ, ಸಮಾಜದ ಪುನರ್‌ನಿರ್ಮಾಣವು ಶ್ರದ್ಧೆ, ಶಿಸ್ತಿನ ಮೌಲ್ಯಗಳು, ಮತ್ತು ಸಹಾನುಭೂತಿಯ ತತ್ವಗಳ ಅಡಿಯಲ್ಲಿ ನಡೆಯಬೇಕು. ಮೌಲ್ಯಪೂರ್ಣ ವಿದ್ಯೆಯ ಮೂಲಕವೇ ನಾವೆಲ್ಲರೂ ಒಂದಾಗಿ, ನಾಡನ್ನು ಭ್ರಷ್ಟಾಚಾರ ಮುಕ್ತವಾಗಿಸುವ ಕನಸು ಸಾಕಾರಗೊಳಿಸಬಹುದು.

- ಶರಣಗೌಡ ಪಾಟೀಲ ಪಾಳಾ