ನಾಡೋಜ ಡಾ.ಕಯ್ಯಾರ ರಾಷ್ಟ್ರೀಯ ಪ್ರಶಸ್ತಿಗೆ ಡಾ. ಸದಾನಂದ ಪೆರ್ಲ ಆಯ್ಕೆ

ನಾಡೋಜ ಡಾ.ಕಯ್ಯಾರ ರಾಷ್ಟ್ರೀಯ ಪ್ರಶಸ್ತಿಗೆ ಡಾ. ಸದಾನಂದ ಪೆರ್ಲ  ಆಯ್ಕೆ

ನಾಡೋಜ ಡಾ.ಕಯ್ಯಾರ ರಾಷ್ಟ್ರೀಯ ಪ್ರಶಸ್ತಿಗೆ ಡಾ. ಸದಾನಂದ ಪೆರ್ಲ ಆಯ್ಕೆ

ಕಲಬುರಗಿ: ಕಾಸರಗೋಡಿನ ಪ್ರತಿಷ್ಠಿತ ಕನ್ನಡದ ಸಂಸ್ಥೆಯಾದ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯ ಹಾಗೂ ಕೇರಳ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಇವುಗಳ ಸಂಯುಕ್ತ ಆಶಯದಲ್ಲಿ ಪ್ರತಿವರ್ಷ ಕೊಡ ಮಾಡುವ "ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ"ಗೆ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರು ಹಾಗೂ ಪ್ರಸ್ತುತ ಕಲಬುರಗಿ ದೂರದರ್ಶನ ಕೇಂದ್ರದ ವಿಶೇಷ ಕಾರ್ಯಕ್ರಮ ನಿರೂಪಕರಾದ ಸಾಹಿತಿ ಡಾ. ಸದಾನಂದ ಪೆರ್ಲ ಅವರನ್ನು ಸೇರಿದಂತೆ ಒಟ್ಟು ನಾಲ್ವರನ್ನು ಆಯ್ಕೆ ಮಾಡಲಾಗಿದೆ. 

    ಕಾಸರಗೋಡಿನ ಕನ್ನಡ ಭವನದ ಸ್ಮಾರಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಮತ್ತು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ವಿರಾಜ್ ಅಡೂರು ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಡಾ. ಸದಾನಂದ ಪೆರ್ಲ, ಡಾ. ರಮಾನಂದ ಬನಾರಿ, ಡಾ. ವಸಂತಕುಮಾರ್ ಪೆರ್ಲ ಹಾಗೂ ಡಾ. ಶಿವಾನಂದ ಬೇಕಲ್ ಅವರನ್ನು 2025 ಸಾಲಿನ "ನಾಡೋಜ ಡಾ ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ"ಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

   ಕಯ್ಯಾರರ ಜನ್ಮದಿನ ಜೂನ್ 8ರಂದು ಮಧ್ಯಾಹ್ನ 3 ಗಂಟೆಗೆ ಕಾಸರಗೋಡಿನ ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. 

    ಡಾ. ಸದಾನಂದ ಪೆರ್ಲ ಅವರು ಕಾಸರಗೋಡಿನ ಪೆರ್ಲ ಸಮೀಪದ ಬಜಕೂಡ್ಲಿನವರು. "ಕಯ್ಯಾರ ಕಿಞ್ಞಣ್ಣ ರೈ ಯವರ ಸಾಹಿತ್ಯ ಮತ್ತು ಕಾಸರಗೋಡಿನ ಕನ್ನಡ ಹೋರಾಟ" ಎಂಬ ವಿಷಯದ ಕುರಿತಾಗಿ ಮಹಾ ಪ್ರಬಂಧವನ್ನು ಮಂಡಿಸಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಖ್ಯಾತ ಬಂಡಾಯ ಸಾಹಿತಿಗಳಾದ ದಿವಂಗತ ಡಾ. ಚನ್ನಣ್ಣ ವಾಲೀಕಾರ್ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧ ಸಿದ್ಧಪಡಿಸಿದ್ದರು. ಡಾ ಪೆರ್ಲ ಅವರು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಿ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಪದವಿಯನ್ನು ಪಡೆದು ಮಾಧ್ಯಮ ರಂಗವನ್ನು ಪ್ರವೇಶ ಮಾಡಿದರು. ಕಾಸರಗೋಡಿನ ಪ್ರತಿ ಸೂರ್ಯ ಹಾಗೂ ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕ, ವರದಿಗಾರನಾಗಿ ಕಾರ್ಯನಿರ್ವಹಿಸಿದರು. 1994 ರಿಂದ 2023 ರವರೆಗೆ ಕೇಂದ್ರ ಸರಕಾರದ ಆಕಾಶವಾಣಿ ಕೇಂದ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಕಾರ್ಯಕ್ರಮ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದರು. ಪ್ರಸಕ್ತ ಕಲಬುರಗಿ ದೂರದರ್ಶನ ಕೇಂದ್ರದಲ್ಲಿ ವಿಶೇಷ ಕಾರ್ಯಕ್ರಮ ಸಂಯೋಜಕ ಹಾಗೂ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಹತ್ತಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದ ಇವರಿಗೆ 2013ನೇ ಸಾಲಿನಲ್ಲಿ ಕರ್ನಾಟಕ ಸರಕಾರದ ಮಾಧ್ಯಮ ಅಕಾಡೆಮಿಯು "ಅಭಿವೃದ್ಧಿ ಪತ್ರಿಕೋದ್ಯಮ" ಪ್ರಶಸ್ತಿ ನೀಡಿ ಗೌರವಿಸಿತ್ತು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಪ್ರಶಸ್ತಿ ನೀಡಿ ಗೌರವಿಸಿದ್ದರು. ಸಾಹಿತ್ಯ ಹಾಗೂ ಮಾಧ್ಯಮ ರಂಗದಲ್ಲಿ ವಿಶೇಷ ಕೃಷಿ ಮಾಡಿ ಖ್ಯಾತರಾದ ಡಾ.ಪೆರ್ಲ ಅವರು "ನಾಡೋಜ ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ"ಗೆ ಭಾಜನರಾಗಿರುವುದು ಕಾಸರಗೋಡಿನ ಕನ್ನಡಿಗನನ್ನು ಗುರುತಿಸಿ ಗೌರವಿಸಿದಂತಾಗಿದೆ ಎಂದು ಡಾ. ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.