ಕಲಬುರಗಿ: ನಾರಾಯಣಸ್ವಾಮಿ ಮತ್ತು ರವಿಕುಮಾರ್ ವಿರೋಧಿಸಿ ಭಾರೀ ಪ್ರತಿಭಟನೆ

ಕಲಬುರಗಿ: ನಾರಾಯಣಸ್ವಾಮಿ ಮತ್ತು ರವಿಕುಮಾರ್ ವಿರೋಧಿಸಿ ಭಾರೀ ಪ್ರತಿಭಟನೆ

ಕಲಬುರಗಿ: ನಾರಾಯಣಸ್ವಾಮಿ ಮತ್ತು ರವಿಕುಮಾರ್ ವಿರೋಧಿಸಿ ಭಾರೀ ಪ್ರತಿಭಟನೆ

ಕಲಬುರಗಿ: ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಧಾನ ಪರಿಷತ್ ಸದಸ್ಯರು ಛಲವಾದಿ ನಾರಾಯಣಸ್ವಾಮಿ ಮತ್ತು ಎನ್. ರವಿಕುಮಾರ್ ವಿರುದ್ಧ ಶನಿವಾರ ಕಲಬುರಗಿಯಲ್ಲಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಯಿತು.

ಜಗತ್ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ದಲಿತಪರ ಸಂಘಟನೆಗಳ ಮುಖಂಡರು, ಎಡಪಕ್ಷದ ಚಿಂತಕರ ಮಠಾಧೀಶರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪ್ರಿಯಾಂಕ್ ಖರ್ಗೆ ಅಭಿಮಾನಿಗಳು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡವರು ‘ಸಂವಿಧಾನದ ರಕ್ಷಕ ಪ್ರಿಯಾಂಕ್ ಖರ್ಗೆ’ ಎಂಬ ಲೆಕ್ಕಪತ್ರಗಳು, ನೀಲಿ ಧ್ವಜಗಳು, ಗಾಂಧಿ ಟೋಪಿ ಹಾಗೂ ನೀಲಿ ಶಾಲು ಧರಿಸಿ, ನಾರಾಯಣಸ್ವಾಮಿ ಮತ್ತು ರವಿಕುಮಾರ್ ವಿರುದ್ಧ ಘೋಷಣೆ ಕೂಗಿದರು.

ಮೆರವಣಿಗೆ ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಬಹಿರಂಗ ಸಭೆ ನಡೆಯಿತು. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮುಖಂಡರು ನೇರವಾಗಿ ನಾರಾಯಣಸ್ವಾಮಿ ಹಾಗೂ ರವಿಕುಮಾರ್ ಅವರ ಹೇಳಿಕೆಯನ್ನು ಖಂಡಿಸಿದರು. “ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತು ಇಂತಹ ಅವಾಚ್ಯ ಪದ ಬಳಸಿದವರು ಪರಿಷತ್ತಿನಲ್ಲಿ ಉಳಿಯಲು ಅರ್ಹರಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯ ಅಂತ್ಯದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಅವರು ಈ ಮನವಿಯನ್ನು ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂಬ ಭರವಸೆ ನೀಡಿದರು.

ಪ್ರತಿಭಟನೆಯ ಕೊನೆಗೆ, ಪ್ರತಿಭಟನಾಕಾರರು ನಾರಾಯಣಸ್ವಾಮಿ ಹಾಗೂ ರವಿಕುಮಾರ್ ಅವರ ಪ್ರತಿಕೃತಿಗಳಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಅಲ್ಲಮಪ್ರಭು ಲಿಂಗೇಶ್ವರ, ವರಜ್ಯೋತಿ ಭಂತೇಜಿ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ, ಶಾಸಕರಾದ ಜಗದೇವ ಗುತ್ತೇದಾರ, 'ಕುಡಾ' ಅಧ್ಯಕ್ಷ ಮಜರ್ ಆಲಂ ಖಾನ್, ಚಂದ್ರಿಕಾ ಪರಮೇಶ್ವರ, ಭೀಮಣ್ಣ ಸಾಲಿ, ರಾಜೀವ್ ಜಾನೆ, ಡಾ. ಕಿರಣ್ ದೇಶಮುಖ, ಲಿಂಗರಾಜ ತಾರಫೈಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

.

ವಚನ ಪರಂಪರೆಯ ನೆಲೆಯಾದ ಕಲ್ಯಾಣ ಕರ್ನಾಟಕ ಮತ್ತೆ ಸಾಬೀತುಪಡಿಸಿದೆ – ಪ್ರಿಯಾಂಕ್ ಖರ್ಗೆ ಸಂದೇಶ 

ವಚನ ಚಳವಳಿಯಿಂದ ಸಾಮಾಜಿಕ ವಿಚಾರ ಕ್ರಾಂತಿಗೆ ನಾಂದಿ ಹಾಡಿದ ಕಲ್ಯಾಣ ಕರ್ನಾಟಕ ಪ್ರದೇಶವು, ಇಂದು ಕೂಡಾ ವೈಚಾರಿಕವಾಗಿ ಮುಂಚೂಣಿಯಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, “ಈ ನಾಡು ಶರಣರ ತತ್ವಗಳನ್ನು ಅನುಸರಿಸುವ ನಾಡಾಗಿದೆ. ಇಂತಹ ನಾಡು ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಬಿಜೆಪಿ ಹೇರಲು ಬಯಸುವ ಮಲಿನ ಚಿಂತನೆಗೆ ಎಂದಿಗೂ ತಲೆಬಾಗುವುದಿಲ್ಲ” ಎಂದು ಹೇಳಿದರು.

ಕಲಬುರಗಿಯ ಜನತೆ ತಮ್ಮ ಪರವಾಗಿ ಬೃಹತ್ ಮಟ್ಟದ ವೈಚಾರಿಕ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಪ್ರಣಾಮ ಸಲ್ಲಿಸಿದ ಖರ್ಗೆ, “ನಿಮ್ಮ ಬೆಂಬಲ ನನ್ನನ್ನು ಹೆಚ್ಚು ಶಕ್ತಿಶಾಲಿಯನ್ನಾಗಿಸಿದೆ. ರಾಜಕೀಯವಾಗಿ ನನ್ನನ್ನು ಎದುರಿಸಲು ಸಾಧ್ಯವಾಗದವರು ವೈಯಕ್ತಿಕ ದಾಳಿಗಳಿಗೆ ಶರಣಾಗಿದ್ದಾರೆ. ಆದರೆ, ನಿಮ್ಮಂತೆ ಪ್ರಜ್ಞಾವಂತ ನಾಗರಿಕರು ಇದನ್ನು ಖಂಡಿಸಿ ಸಿಡಿದೆದ್ದಿದ್ದಾರೆ” ಎಂದರು.

“ನಮ್ಮ ಹೋರಾಟ ಸತ್ಯದ ಪರವಾಗಿದೆ. ಸಂವಿಧಾನದ ತತ್ತ್ವಗಳು, ಬಾಬಾ ಸಾಹೇಬರ ಮಾರ್ಗದರ್ಶನ ಹಾಗೂ ಬಸವಣ್ಣನ ತತ್ವಗಳು ನಮಗೆ ಬಲವಾಗಿವೆ. ವೈಚಾರಿಕವಾಗಿ ತಳಮಳಗೊಳ್ಳುತ್ತಿರುವವರು ಹೇಸಿಕೊಳ್ಳುವಂತಹ ಅಶಿಷ್ಟ ಭಾಷೆ ಬಳಸುತ್ತಿದ್ದರೂ, ಅವರು ಸಮಾಜದ ಮನಸ್ಸನ್ನು ಗೆಲ್ಲಲಾಗದು” ಎಂದು ಖರ್ಗೆ ಹೇಳಿದರು.

ಮನುಸ್ಮೃತಿಯ ಆಧಾರದಲ್ಲಿ ಸಮಾಜವನ್ನು ಹಿಂಬದಿಯಲ್ಲಿಟ್ಟುಕೊಳ್ಳಲು ಇಚ್ಛಿಸುವ ಮನೋವೃತ್ತಿಯ ವಿರುದ್ಧ ಜನಶಕ್ತಿ ಎದ್ದು ನಿಲ್ಲುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

“ನಾನು ಒಂಟಿ ಅಲ್ಲ. ನನ್ನ ಜೊತೆ ಸಾವಿರಾರು ಬಾಬಾ ಸಾಹೇಬರ ಭಕ್ತರು, ಬಸವಣ್ಣನ ಅನುಯಾಯಿಗಳು ನಿಲ್ಲುತ್ತಿದ್ದಾರೆ. ಈ ಪ್ರೀತಿ, ಬೆಂಬಲ ನನ್ನಲ್ಲಿ ಆತ್ಮವಿಶ್ವಾಸ ತುಂಬಿದೆ. ಶೋಷಿತರ ಹಕ್ಕಿಗಾಗಿ ನನ್ನ ಹೋರಾಟ ಮುಂದುವರಿಯಲಿದೆ” ಎಂದು ಖರ್ಗೆ ತಮ್ಮ ಪತ್ರದ ಮೂಲಕ ತಿಳಿಸಿದ್ದಾರೆ.

ಬಸವಣ್ಣನಿಂದ ವೈಚಾರಿಕ ಶಕ್ತಿ, ಬಾಬಾ ಸಾಹೇಬರಿಂದ ನೈತಿಕ ಶಕ್ತಿ, ಜನರಿಂದ ಆತ್ಮಶಕ್ತಿ” ದೊರಕಿದೆ

-ಸಚಿವ ಪ್ರಿಯಾಂಕ್ ಖರ್ಗೆ