ಭೀಮಾ ನದಿ ದಂಡೆ ಪ್ರವಾಹದ ಮುನ್ನೆಚ್ಚರಿಕೆ: ಕಲಬುರಗಿ CEO ಭೇಟಿ

ಭೀಮಾ ನದಿ ದಂಡೆ ಪ್ರವಾಹದ ಮುನ್ನೆಚ್ಚರಿಕೆ: ಕಲಬುರಗಿ CEO ಭೇಟಿಯಿಂದ
ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಅಫಜಲಪೂರ ತಾಲೂಕಿನ ದೇವಲ್ ಗಾಣಗಾಪೂರದಿಂದ ಜೇರಟಗಿಗೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್-ಕಂ-ಬ್ಯಾರೇಜ್ ಅಪಾಯದ ಮಟ್ಟಿಗೆ ನೀರಿನಿಂದ ಆವರಿಸಲ್ಪಟ್ಟಿದೆ. ಈ ಹಿನ್ನಲೆಯಲ್ಲಿ CEO ಭವರ್ ಸಿಂಗ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅವರು ಅಲ್ಲಿನ ಜನರನ್ನು ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆಯಿಂದಿರಲು ಎಚ್ಚರಿಸಿದರು. ಭೀಮಾ ನದಿಗೆ ಹೆಚ್ಚುವರಿ ನೀರು ಹರಿಬಿಡುವ ಹಿನ್ನೆಲೆ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದೆ. KNNL ಸಹಯೋಗದೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನದಿಯ ತಳಮಟ್ಟವನ್ನು ಪರಿಗಣಿಸಿ ಅಪಾಯದ ಮಟ್ಟ ಗುರುತಿಸಲು ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಮನೆಗಳನ್ನು ಬಣ್ಣದಿಂದ ಗುರುತಿಸಿ ಜನರಲ್ಲಿ ಜಾಗೃತಿ ಮೂಡಿಸಲು ಸೂಚನೆ ನೀಡಿದರು.
ನೀರಿನ ಹರಿವು ತೀವ್ರಗೊಂಡಾಗ ಮುಳುಗುವ ಅಪಾಯವಿರುವ ಗ್ರಾಮಗಳ ಮನೆಗಳ ಮಾಹಿತಿ ಸಂಗ್ರಹಿಸಿ, ಆ ಮನೆ ಮಾಲೀಕರ ವಾಟ್ಸಾಪ್ ಗುಂಪು ರಚಿಸಲು ಸೂಚಿಸಲಾಯಿತು. ಈ ಮೂಲಕ ನೀರಿನ ಹರಿವಿನ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಹಂಚಿಕೊಳ್ಳುವಂತೆ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಅವುಗಳಿಗೆ ಶೆಡ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಲಾಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಿ, ಅದರಲ್ಲಿ ಬೆಳಕು, ಕುಡಿಯುವ ನೀರು, ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೂಚಿಸಲಾಯಿತು. ಪಂಚಾಯತ್ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕ್ರೀಯಾಯೋಜನೆ ರೂಪಿಸಿ ಮೂರು ದಿನಗಳೊಳಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು