ಅನುದಾನಿತ ಶಾಲೆಗಳಲ್ಲಿ ಅಕ್ರಮ ಡೊನೇಷನ್ ವಸೂಲಿ – ತಕ್ಷಣ ಕ್ರಮಕ್ಕೆ ರಾಜೋಳೆ ಆಗ್ರಹ

ಅನುದಾನಿತ ಶಾಲೆಗಳಲ್ಲಿ ಅಕ್ರಮ ಡೊನೇಷನ್ ವಸೂಲಿ – ತಕ್ಷಣ ಕ್ರಮಕ್ಕೆ ರಾಜೋಳೆ ಆಗ್ರಹ
ಬಸವಕಲ್ಯಾಣ:ನಗರದಲ್ಲಿನ ಅನುದಾನಿತ (ಅನ್ನದಾನಿತ) ಶಾಲೆಗಳ ಕೆಲವು ಆಡಳಿತ ಮಂಡಳಿಗಳು ಹಾಗೂ ಮುಖ್ಯಗುರುಗಳು ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುವ ಸಂದರ್ಭದಲ್ಲಿ ಸರ್ಕಾರದಿಂದ ಗ್ರ್ಯಂಟ್ (ಅನುದಾನ) ಪಡೆಯುವ ಶಾಲೆಯಾಗಿದ್ದರೂ, ಡೊನೇಷನ್ ಹೆಸರಿನಲ್ಲಿ ₹10,000 ರಿಂದ ₹12,000 ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಶಾಲೆಗೆ ಮಕ್ಕಳನ್ನು ಸೇರಿಸಲು ಹೋಗಿರುವ ಪಾಲಕರಿಗೆ ಈ ಮೊತ್ತವನ್ನು ಕಟ್ಟಬೇಕೆಂದು ಕಟ್ಟುನಿಟ್ಟಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಜೆಡಿಎಸ್ ಬಸವಕಲ್ಯಾಣ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಧನರಾಜ್ ಡಿ. ರಾಜೋಳೆ ಅವರು ಕ್ಷೇತ್ರ ಶಿಕ್ಷಣ ಉಪನಿರ್ದೇಶಕರು (ಬೀದರ್) ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ (ಬಸವಕಲ್ಯಾಣ) ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಅವರು ಹೇಳುವಂತೆ, ಈ ಅನುದಾನಿತ ಶಾಲೆಗಳು ಸರ್ಕಾರದಿಂದ ಕನ್ನಡ ಮಾಧ್ಯಮದ ಅನುಮತಿ ಪಡೆದಿದ್ದರೂ, ಇಂಗ್ಲಿಷ್ ಮೀಡಿಯಂ ಎಂದು ಪ್ರಚಾರ ಮಾಡಿ ₹25,000 ರಿಂದ ₹30,000 ಫೀಸ್ ಗಳನ್ನು ಪೋಷಕರಿಂದ ವಸೂಲಿ ಮಾಡುತ್ತಿದ್ದಾರೆ. ಇದು ನಿಜಕ್ಕೂ ಜನಸಾಮಾನ್ಯರ ಮೇಲೆ ಆರ್ಥಿಕ ಶೋಷಣೆಯಾಗಿದೆ.
ಈ ಹಿನ್ನೆಲೆಯಲ್ಲಿ ಬಸವಕಲ್ಯಾಣ ನಗರದಲ್ಲಿನ ಎಲ್ಲಾ ಅನುದಾನಿತ ಶಾಲೆಗಳಲ್ಲಿ ಸಂಪೂರ್ಣ ಪರಿಶೀಲನೆ ನಡೆಸಬೇಕು ಹಾಗೂ ಅಕ್ರಮವಾಗಿ ಡೊನೇಷನ್ ಹಾಗೂ ಅಧಿಕ ಫೀಸ್ ವಸೂಲಿ ಮಾಡುವ ಶಾಲೆಗಳ ಮಾನ್ಯತೆ ತಕ್ಷಣವೇ ರದ್ದುಪಡಿಸಬೇಕೆಂದು ಧನರಾಜ್ ಡಿ. ರಾಜೋಳೆ ಅವರು ಒತ್ತಾಯಿಸಿದ್ದಾರೆ.
-