ಹೈದರಾಬಾದ ನಿಜಾಮರ ಆಳ್ವಿಕೆಯಲ್ಲಿ ಇತಿಹಾಸ ಅಧ್ಯಯನ: ಡಾ. ಎಸ್.ಕೆ. ಅರುಣಿಯವರ ಪ್ರಬಂಧ ಮಂಡನೆ

ಹೈದರಾಬಾದ ನಿಜಾಮರ ಆಳ್ವಿಕೆಯಲ್ಲಿ ಇತಿಹಾಸ ಅಧ್ಯಯನ: ಡಾ. ಎಸ್.ಕೆ. ಅರುಣಿಯವರ ಪ್ರಬಂಧ ಮಂಡನೆ
ಕಲಬುರಗಿ: 20 ,ಮಾ,ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ವಿಭಾಗೀಯ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ ಪ್ರಾದೇಶಿಕ ನಿರ್ದೇಶಕರಾದ ಡಾ. ಎಸ್.ಕೆ. ಅರುಣಿಯವರು "ಹೈದರಾಬಾದ ನಿಜಾಮರ ಆಳ್ವಿಕೆಯಲ್ಲಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಳು ಮತ್ತು ಕನ್ನಡ ನಾಡಿನ ಚರಿತ್ರೆ ರಚನೆಯ ಬೆಳವಣಿಗೆ" ಎಂಬ ವಿಷಯದ ಮೇಲೆ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು.
ಕಲಬುರಗಿ,ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಚಾರ ಸಂಕಿರಣ ಸಂಶೋಧನಾ ಪ್ರಬಂಧ ಮಂಡನಕಾರರಾಗಿ ಭಾಗವಹಿಸಿದರು.
ಡಾ. ಅರುಣಿಯವರು ಮಾತನಾಡಿ, ಕನ್ನಡ ನಾಡಿನ ಇತಿಹಾಸದ ಪ್ರಾಥಮಿಕ ಆಕರ ಸಂಗ್ರಹ ಕಾರ್ಯ ಕ್ರಿ.ಶ. 1790ರ ದಶಕದಲ್ಲಿ ಕಲ್ಯಾಣ-ಕರ್ನಾಟಕದಲ್ಲಿ ಆರಂಭಗೊಂಡಿತ್ತು ಎಂದು ದಾಖಲಿಸಿದರು. ಈ ಪ್ರಕ್ರಿಯೆಯಲ್ಲಿ ಬ್ರಿಟಿಷ್ ಅಧಿಕಾರಿ ಕರ್ನಲ್ ಕೋಲೀನ್ ಮೆಕೆಂಜಿ ಕಲಬುರಗಿ ಹಾಗೂ ಬೀದರ ಪ್ರದೇಶಗಳ ನಕ್ಷೆಗಳನ್ನು ರಚಿಸಿ, ಇಂಗ್ಲೆಂಡ್ನ ಬ್ರಿಟಿಷ್ ಲೈಬ್ರರಿ ಗೆ ಸಲ್ಲಿಸಿದ್ದಾರೆ.
ಹೈದರಾಬಾದ ಸಂಸ್ಥಾನದ ಕಾಲದಲ್ಲಿ ನಿಯೋನಾರ್ಡ ಮುನ್, ಮೇಡೋಸ್ ಟೇಲರ್ ಮತ್ತು ಯಾಜ್ದಾನಿ ಅವರುಗಳು ಈ ಭಾಗದ ಇತಿಹಾಸ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿದರು. 1914ರಲ್ಲಿ ನಿಜಾಮ ಸರ್ಕಾರ ಪುರಾತತ್ತ್ವ ಇಲಾಖೆಯನ್ನು ಸ್ಥಾಪಿಸಿ, ಬಸವಕಲ್ಯಾಣ, ಮುದ್ಗಲ್, ರಾಯಚೂರು, ಕಲಬುರಗಿ, ಯಾದಗಿರಿ ಹಾಗೂ ಬೀದರ ಪ್ರದೇಶಗಳ ಇತಿಹಾಸದ ಕುರುಹುಗಳನ್ನು ಗುರುತಿಸಿ, ಪ್ರಕಟಿಸುವ ಮೂಲಕ ನಾಡಿನ ಇತಿಹಾಸದ ರಚನೆಗೆ ಅನುಕೂಲ ಮಾಡಿತು.
ಶಾಸನಗಳು ಮತ್ತು ಪುರಾತತ್ವ ಸ್ಮಾರಕಗಳ ಸಂಗ್ರಹ ಹಾಗೂ ಸಂರಕ್ಷಣೆ ಕಾರ್ಯದಿಂದ ಈ ಭಾಗದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಹೊಸ ಪೀಳಿಗೆಯ ಸಂಶೋಧಕರು ಈ ಅಧ್ಯಯನ ಕಾರ್ಯವನ್ನು ಮುಂದುವರೆಸಿ, ಅಜ್ಞಾತ ಇತಿಹಾಸವನ್ನು ಬೆಳಕಿಗೆ ತರಬೇಕು ಎಂದು ಡಾ. ಅರುಣಿ ಕರೆ ನೀಡಿದರು.