ದಲಿತರ ಕಲ್ಯಾಣದ ನಿಧಿ ದುರುಪಯೋಗ,ಕಲಬುರಗಿ ಜವಳಿ ಪಾರ್ಕ್ ಗೆ ಎಳ್ಳು ನೀರಿಬಿಟ್ಟ ಕಾಂಗ್ರೆಸ್: ಡಾ.ಉಮೇಶ್ ಜಾಧವ್ ಆರೋಪ

ದಲಿತರ ಕಲ್ಯಾಣದ ನಿಧಿ ದುರುಪಯೋಗ,ಕಲಬುರಗಿ ಜವಳಿ ಪಾರ್ಕ್ ಗೆ ಎಳ್ಳು ನೀರಿಬಿಟ್ಟ ಕಾಂಗ್ರೆಸ್: ಡಾ.ಉಮೇಶ್ ಜಾಧವ್ ಆರೋಪ

ದಲಿತರ ಕಲ್ಯಾಣದ ನಿಧಿ ದುರುಪಯೋಗ,ಕಲಬುರಗಿ ಜವಳಿ ಪಾರ್ಕ್ ಗೆ ಎಳ್ಳು ನೀರಿಬಿಟ್ಟ ಕಾಂಗ್ರೆಸ್: ಡಾ.ಉಮೇಶ್ ಜಾಧವ್ ಆರೋಪ

ಕಲಬುರಗಿ : ಕೇಂದ್ರ ಸರ್ಕಾರವು ರಾಷ್ಟ್ರಮಟ್ಟದಲ್ಲಿ ಜಾರಿ ಮಾಡಿದ ಜವಳಿ ಪಾರ್ಕ್ ಯೋಜನೆಯಡಿಯಲ್ಲಿ ಕಲಬುರಗಿ ಪಾರ್ಕ್ ಶಿಲಾನ್ಯಾಸ ನೆರವೇರಿಸಿದ್ದು ಆ ಮೂಲಕ ಒಂದು ಲಕ್ಷ ನೇರ ಹಾಗೂ ಎರಡು ಲಕ್ಷ ಪರೋಕ್ಷ ಉದ್ಯೋಗ ಯೋಜನೆ ಯ ನಿರಾಸಕ್ತಿ ಹಾಗೂ ದಲಿತರ ಕಲ್ಯಾಣಕ್ಕಾಗಿ ನೀಡುವ 39 ಸಾವಿರ ಕೋಟಿ ರೂಪಾಯಿ ಹಣ ದುರುಪಯೋಗ ಮಾಡಿ ರಾಜ್ಯ ಸರಕಾರ ಜನತೆಗೆ ದೊಡ್ಡ ಮೋಸ ಮಾಡಿದೆ ಎಂದು ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಆರೂಪಿಸಿದ್ದಾರೆ. 

   ಕಲಬುರಗಿಯ ಪತ್ರಿಕಾ ಭವನದಲ್ಲಿ ಮಾ. 5 ರಂದು ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಮ್ಮ ಅವಧಿಯಲ್ಲಿ ಮಂಜೂರು ನೀಡಲಾದ ಕಲಬುರಗಿಯ ಹೊನ್ನ ಕಿರಣಗಿಯಲ್ಲಿ ಸಾವಿರ ಎಕರೆ ಪ್ರದೇಶದಲ್ಲಿ ಕೇಂದ್ರ ಸರಕಾರ ಅನುಮೋದನೆ ನೀಡಿದ ಜವಳಿ ಪಾರ್ಕ್ ಗೆ ಅನುದಾನ ಘೋಷಣೆ ಮಾಡಿದರೂ ರಾಜ್ಯ ಸರ್ಕಾರವು ಮೂಲಭೂತ ಸೌಲಭ್ಯ ನಿರ್ಮಾಣ ಕೈಗೊಳ್ಳಲು ಕನಿಷ್ಠ ಅನುದಾನ ಬಿಡುಗಡೆ ಮಾಡದೆ ಯೋಜನೆ ಇನ್ನೂ ಪ್ರಾರಂಭವಾಗಿಲ್ಲ. ರಾಜ್ಯ ಸರ್ಕಾರವು ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡುತ್ತಿದ್ದರೆ ಯೋಜನೆ ಆರಂಭಿಸಲು ಉಳಿದ ಹಣ ಕೇಂದ್ರ ಸರಕಾರ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿತ್ತು .ಆದರೆ ರಾಜ್ಯ ಸರ್ಕಾರ ಹಾಗೂ ಕಲ್ಬುರಗಿಯ ಲೋಕಸಭಾ ಸದಸ್ಯರ ತೀವ್ರ ನಿರಾಸಕ್ತಿಯಿಂದ ಪ್ರತಿಷ್ಠಿತ ಯೋಜನೆಗೆ ಎಳ್ಳು ನೀರು ಬಿಡಲಾಗಿದೆ. ಪ್ರಸ್ತುತ ಯೋಜನೆಯಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಒಂದು ಲಕ್ಷ ನೇರ ಹಾಗೂ ಎರಡು ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿ ಸಾಧ್ಯತೆ ಇತ್ತು. ಇದರಿಂದ ಈ ಭಾಗದಿಂದ ಉದ್ಯೋಗಕ್ಕಾಗಿ ವಲಸೆ ಹೋಗುವ ಪಿಡುಗು ಕಡಿಮೆಯಾಗುತ್ತಿತ್ತು ಹಾಗೂ ಯುವಜನರ ಕೈಗೆ ಉದ್ಯೋಗ ನೀಡುವ ದೊಡ್ಡ ಅವಕಾಶ ಲಭ್ಯವಾಗುತ್ತಿತ್ತು. ರಾಜ್ಯದ ಕಾಂಗ್ರೆಸ್ ಸರಕಾರ ಹಾಗೂ ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ಅವರ ನಿರಾಸಕ್ತಿಯಿಂದಾಗಿ ಪ್ರತಿಷ್ಠಿತ ಯೋಜನೆ ಮೂಲೆಗುಂಪಾಗಿದೆ. ಅಮರಾವತಿ ಸೇರಿದಂತೆ ಇತರ ಹಲವು ಕಡೆಗಳಲ್ಲಿ ಜವಳಿ ಪಾರ್ಕ್ ಯೋಜನೆ ಈಗಾಗಲೇ ಪ್ರಾರಂಭಗೊಂಡು ಉದ್ಯೋಗ ಸೃಷ್ಟಿಯಾಗಿ ಆರ್ಥಿಕ ಪ್ರಗತಿ ಸಾಧಿಸಲಾಗುತ್ತಿದೆ ಎಂದು ಜಾಧವ್ ಹೇಳಿದರು.

     ಕಾಂಗ್ರೆಸ್ ಸರಕಾರವು ದಲಿತರ ಉದ್ದಾರದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಕಳೆದ ಮೂರು ವರ್ಷಗಳಿಂದ ಎಸ್ ಸಿ ಎಸ್ ಪಿ ಮತ್ತು ಎಸ್ ಟಿ ಎಸ್ ಅನುದಾನದ 39 ಸಾವಿರ ಕೋಟಿ ರೂಪಾಯಿಯನ್ನು ದುರುಪಯೋಗ ಮಾಡಿಕೊಂಡಿದೆ. ಈಗ ಮತ್ತೊಂದು ಬಜೆಟ್ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೆ ಹದಿನೈದು 15 ಸಾವಿರ ಕೋಟಿ ರೂಪಾಯಿಗಳನ್ನು ಮುಳುಗಿಸಲು ಸಜ್ಜಾಗಿದ್ದಾರೆ. ಏಳು ಡಿ ಕಾಯ್ದೆಯನ್ನು ಕಿತ್ತುಹಾಕಿ ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಕಾಯ್ದೆಯನ್ನು ಬಲಪಡಿಸಿದ್ದು ನಾವೇ ಎಂದು ಸ್ವತಃ ಬೆನ್ನು ತಟ್ಟುಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳಗೊಳಗೆ ಏಳು ಸಿ ಕಾಯ್ದೆ ಮೂಲಕ ದಲಿತರ ಮೀಸಲು ನಿಧಿಗೆ ಕನ್ನ ಹಾಕುತ್ತಿದ್ದಾರೆ ಎಂದು ಜಾಧವ್ ಆರೋಪಿಸಿದರು.

    ಕಾಕಾ ಪಾಟೀಲ, ಮಹಾದೇವಪ್ಪ ನಿಮಗೂ ಫ್ರೀ ಎಂದು ಗ್ಯಾರಂಟಿ ಯೋಜನೆಯ ಕುರಿತಾಗಿ ಉಚಿತ ಕೊಡುಗೆಯ ಬಗ್ಗೆ ಅಬ್ಬರದ ಪ್ರಚಾರ ನೀಡಿ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದ ಕಾಂಗ್ರೆಸ್ ಸರಕಾರವು ರಾಜ್ಯದ ಜನತೆಗೆ ಮಹಾಮೋಸ ಮಾಡಿದ್ದು ಸರಿಯೇ? ಎಂದು ಡಾ. ಜಾಧವ್ ಪ್ರಶ್ನಿಸಿದರು. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಕಳೆದ ಮೂರು ತಿಂಗಳುಗಳಿಂದ ಗ್ಯಾರೆಂಟಿ ಫಲಾನುಭವಿಗಳಿಗೆ ಹಣ ಪಾವತಿಯಾಗದೆ ಜನತೆ ಕಾಂಗ್ರೆಸ್ಸಿನ ಮೇಲೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಡಾ. ಉಮೇಶ್ ಜಾಧವ್ ದೂರಿದ್ದಾರೆ.