ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಶಕ್ತಿ ಪಾತ್ರ ಮಹತ್ವ ವ್ಯಸನ ಮುಕ್ತ ದಿನಾಚರಣೆಯಲ್ಲಿ ಡಾ. ಸದಾನಂದ ಪೆರ್ಲ ಅಭಿಮತ

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಶಕ್ತಿ ಪಾತ್ರ ಮಹತ್ವ  ವ್ಯಸನ ಮುಕ್ತ ದಿನಾಚರಣೆಯಲ್ಲಿ ಡಾ. ಸದಾನಂದ ಪೆರ್ಲ ಅಭಿಮತ

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಶಕ್ತಿ ಪಾತ್ರ ಮಹತ್ವ

ವ್ಯಸನ ಮುಕ್ತ ದಿನಾಚರಣೆಯಲ್ಲಿ ಡಾ. ಸದಾನಂದ ಪೆರ್ಲ ಅಭಿಮತ

ಕಲಬುರಗಿ : ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವವಾಗಿದ್ದು ಹಾಗೂ ಸದೃಢ ರಾಷ್ಟ್ರ ಕಟ್ಟಲು ನೆರವಾಗುತ್ತದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಹೇಳಿದರು.

     ನಗರದ ಅಳಂದ ರಸ್ತೆಯ ಶೆಟ್ಟಿ ಕಾಂಪ್ಲೆಕ್ಸ್ ಎದುರುಗಡೆಯಿರುವ 'ಶಾರದಾ ವಿವೇಕ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ'ದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಶನಿವಾರ ಜರುಗಿದ 'ಡಾ.ಮಹಾಂತ ಶಿವಯೋಗಿಗಳವರ ಜನ್ಮದಿನಾಚರಣೆ- ವ್ಯಸನ ಮುಕ್ತ ದಿನಾಚರಣೆ'ಯಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದ ನಂತರ ಮಾತನಾಡಿ ಅವರು, ಮಠಾಧೀಶರು ಕೇವಲ ಮಠ, ಪೂಜೆ, ಪುನಸ್ಕಾರಗಳಿಗೆ ಸೀಮಿತವಾಗದೆ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಪೂಜ್ಯ ಶ್ರೀ ಮಹಾಂತ ಶಿವಯೋಗಿಗಳ ಕಾರ್ಯ ಎಲ್ಲರಿಗೂ ಆದರ್ಶವಾಗಬೇಕಾಗಿದೆ ಎಂದರು. 'ಮಹಾಂತ ಜೋಳಿಗೆ'ಯ ಮೂಲಕ ಅವರು ಮಾಡಿದ ಕ್ರಾಂತಿಯ ಸಂದೇಶ ನಾಡಿನ ಹಳ್ಳಿ ಹಳ್ಳಿಗೂ ವ್ಯಾಪಿಸಿ ಪರಿವರ್ತನೆ ಸೃಷ್ಟಿಸಲು ಯುವಕರು ಮತ್ತು ವಿದ್ಯಾರ್ಥಿಗಳು ಅದಕ್ಕೆ ರಾಯಭಾರಿಗಳಾಗಬೇಕು. ದೇಶದಲ್ಲಿ 15 ರಿಂದ 29 ವಯೋಮಾನದ 37 ಕೋಟಿಗೂ ಅಧಿಕ ಯುವಕರನ್ನು ಹೊಂದಿದ್ದು ಭಾರತ ಸಮಗ್ರವಾಗಿ ಪ್ರಗತಿ ಹೊಂದಲು ದುಶ್ಚಟಗಳಿಂದ ಮುಕ್ತರಾದ ಯುವಕರ ಅಗತ್ಯವಿದೆ. ದೇಶದ ಯುವಕರು ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯ "ಫಿಟ್ನೆಸ್ ಇಂಡಿಯಾ " ಅಳವಡಿಸಿಕೊಂಡಾಗ ಸ್ವಾಸ್ಥ್ಯ ಹಾಗೂ ಅಭಿವೃದ್ಧಿಪರ ರಾಷ್ಟ್ರ ಕಟ್ಟಲು ಸಾಧ್ಯ ಎಂದು ಡಾ.ಪೆರ್ಲ ಹೇಳಿದರು.

         ಬಸವೇಶ್ವರ ಸಮಾಜ ಸೇವಾ ಬಳಗದ ಸೇವಾ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ. ಪಾಟೀಲ್ ಮಾತನಾಡಿ, ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದ ಪೂಜ್ಯಶ್ರೀ ಮಹಾಂತ ಶಿವಯೋಗಿಗಳ ಕಾರ್ಯ ಜನಮನಕ್ಕೆ ತಲುಪಿಸಲು ಒಗ್ಗಟ್ಟಾಗಿ ದುಡಿಯೋಣ ಎಂದು ಹೇಳಿದರು. ಶಾರದಾ ವಿವೇಕ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಹಣಮಂತ ರಾವ್ ಗುಡ್ಡೇವಾಡ ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದಲ್ಲಿ ಶಿವಯೋಗೆಪ್ಪಾ ಎಸ್. ಬಿರಾದಾರ, ಉಪನ್ಯಾಸಕರಾದ ಸತೀಶ್ ತುಮಕೂರು, ವನಜಾಕ್ಷಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕವಿತಾ ಪ್ರಾರ್ಥನ ಗೀತೆ ಹಾಡಿದರು. ಉಪನ್ಯಾಸಕರಾದ ಮಹಾದೇವಪ್ಪ ಕುಂಬಾರ ನಿರೂಪಣೆ ಮಾಡಿದರು. ಉಪನ್ಯಾಸಕಿ ತ್ರಿವೇಣಿ ಕಲಶೆಟ್ಟಿ ವಂದಿಸಿದರು.