ತೋಟ್ನಳ್ಳಿಯ ಶ್ರೀ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ– ಶಿವರಾಜ ಅಂಡಗಿ
ತೋಟ್ನಳ್ಳಿಯ ಶ್ರೀ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ– ಶಿವರಾಜ ಅಂಡಗಿ
ಸೇಡಂ: ತಾಲೂಕಿನ ತೋಟ್ನಳ್ಳಿ ಗ್ರಾಮದ ಶ್ರೀ ದುರ್ಗಾದೇವಿ ಪಲ್ಲಕ್ಕಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಡಾ. ತ್ರಿಮೂರ್ತಿ ಶಿವಾಚಾರ್ಯರ ನೇತೃತ್ವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿಯವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯ ದಾಸೋಹಿಗಳಾದ ವಿಶ್ವನಾಥ ತೋಟ್ನಳ್ಳಿ, ಡಾ. ವಿವೇಕಾನಂದ ಬುಳ್ಳಾ ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವವು ದಿನಾಂಕ 02-01-2026ರಂದು ಸಂಜೆ 5 ಗಂಟೆಗೆ ತೋಟ್ನಳ್ಳಿ ಗ್ರಾಮದ ಶ್ರೀ ಮಹಾಂತೇಶ್ವರ ಮಠದಿಂದ ವಾದ್ಯಮೇಳದೊಂದಿಗೆ ದೇವಿಯ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ಜರುಗಲಿದೆ. ನಂತರ ಶ್ರೀ ದುರ್ಗಾದೇವಿಯ ಉತ್ಸವ ಮೂರ್ತಿಯನ್ನು ಬರಮಾಡಿಕೊಳ್ಳಲಾಗುವುದು. ರಾತ್ರಿ 8.30 ಗಂಟೆಗೆ ಮೀನಹಾಬಾಳ, ಮಂಗಲಗಿ, ಬಿಜನಳ್ಳಿ, ಸಂಗಾವಿ, ಬೀರನಳ್ಳಿ, ಕುಕ್ಕುಂದಾ, ಯಡಗಾ, ಬಿಬ್ಬಳ್ಳಿ, ನೀಲಹಳ್ಳಿ, ಮಳಖೇಡ, ಮಲಕೂಡ, ತೋನಸನಹಳ್ಳಿ, ಟೆಂಗಳಿ, ಸಾಲೋಳ್ಳಿ, ಕೊಡದೂರ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
03-01-2026ರಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸಹಿತ ದೇವಿ ವಿಗ್ರಹಕ್ಕೆ ರುದ್ರಾಭಿಷೇಕ, ಕನ್ಯೆ ಮುತೈದೆಯರಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ನಂತರ ನುರಿತ ತಜ್ಞ ವೈದ್ಯರ ನೇತೃತ್ವದಲ್ಲಿ ತಾಲೂಕು ಸಮುದಾಯ ಆರೋಗ್ಯ ಕೇಂದ್ರ ಸೇಡಂ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ರಾತ್ರಿ 9 ಗಂಟೆಯ ನಂತರ ನುರಿತ ಕಲಾವಿದರಿಂದ ರೇಣುಕಾ ಮಹಾತ್ಮೆ ಬಯಲಾಟ ಕಾರ್ಯಕ್ರಮ ನಡೆಯಲಿದೆ.
ಈ ಜಾತ್ರಾ ಮಹೋತ್ಸವಕ್ಕೆ ಸೇಡಂ ಶ್ರೀ ಶಿವಶಂಕರ ಶಿವಾಚಾರ್ಯರು, ಟೆಂಗಳಿ–ಮಂಗಲಗಿ ಶ್ರೀ ಡಾ. ಶಾಂತಸೋಮನಾಥ ಶಿವಾಚಾರ್ಯರು, ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯರು, ಸೇಡಂ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಶ್ರೀ ಸದಾಶಿವ ಮಹಾಸ್ವಾಮಿಗಳು, ರಾಯಕೋಡ ಶ್ರೀ ಚಿಕ್ಕಶಿವಲಿಂಗೇಶ್ವರ ದೇವರು, ನಿಡಗುಂದಾ ಶ್ರೀ ಉಮೇಶ್ವರ ದೇವರು ಸಾನಿಧ್ಯ ವಹಿಸಲಿದ್ದಾರೆ.
ಕಲಬುರಗಿ ಶ್ರೀ ಚನ್ನವೀರ ಮುತ್ಯ, ಮಂಗಲಗಿ ಸಿದ್ದಯ್ಯ ಮುತ್ಯಾ, ಕರದಾಳ ಶ್ರೀ ತೋಟಯ್ಯ ಶಾಸ್ತ್ರೀಗಳ ಸಮ್ಮುಖದಲ್ಲಿ ಶ್ರೀ ಮಹಾಂತೇಶ್ವರ ಹಿರೇಮಠ ತೋಟ್ನಳ್ಳಿ ಡಾ. ಶಿವಮೂರ್ತಿ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗಲಿದೆ.
ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸೇಡಂ ಹಾಗೂ ಮಳಖೇಡದಿಂದ ತೋಟ್ನಳ್ಳಿ ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಾತ್ರಾ ಮಹೋತ್ಸವದ ಪತ್ರಿಕಾ ಮುದ್ರಣ ಸೇವಾಕರ್ತ ಹಾಗೂ ಭಕ್ತರಾದ ವಿಶ್ವನಾಥ ತೋಟ್ನಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
