ರಾಷ್ಟ್ರೀಯ ಶಿಕ್ಷಣ ದಿನಾಚರಣೆ — ಶ್ರೀಮತಿ ವೀರಮ್ಮ ಗಂಗಾಸಿರಿ ಮಹಿಳಾ ಮಹಾವಿದ್ಯಾಲಯ,
ರಾಷ್ಟ್ರೀಯ ಶಿಕ್ಷಣ ದಿನಾಚರಣೆ — ಶ್ರೀಮತಿ ವೀರಮ್ಮ ಗಂಗಾಸಿರಿ ಮಹಿಳಾ ಮಹಾವಿದ್ಯಾಲಯ, ಕಲಬುರಗಿ
ಶ್ರೀಮತಿ ವೀರಮ್ಮ ಗಂಗಾಸಿರಿ ಮಹಿಳಾ ಮಹಾವಿದ್ಯಾಲಯ, ಕಲಬುರಗಿ, ಶಿಕ್ಷಣ ವಿಭಾಗ ವತಿಯಿಂದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು “ಅಂತರ್ಗತ ಗುಣಮಟ್ಟದ ಶಿಕ್ಷಣ (Inclusive Quality Education)” ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಯಿತು. ಈ ದಿನವನ್ನು ಪ್ರತಿ ವರ್ಷ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಅಂಗವಾಗಿ, ಶಿಕ್ಷಣ ಕ್ಷೇತ್ರಕ್ಕೆ ಅವರ ಅಮೂಲ್ಯ ಕೊಡುಗೆಗಾಗಿ ಆಚರಿಸಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಶ್ರೀಮತಿ ನಾಗರತ್ನ ಎಲ್. ಇಂಡೇ , ಉಪನ್ಯಾಸಕರು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಕಲಬುರಗಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಪ್ರೇರಣಾದಾಯಕ ಭಾಷಣ ಮಾಡಿದರು. ಅವರು ಮೌಲಾನಾ ಆಜಾದ್ ಅವರ ಶಿಕ್ಷಣದ ದೃಷ್ಟಿಕೋನವನ್ನು ವಿವರಿಸಿ, ಶಿಕ್ಷಣವು ಪ್ರತಿಯೊಬ್ಬ ನಾಗರಿಕನಿಗೂ ತಲುಪುವಂತಾಗಬೇಕು ಎಂದು ಹೇಳಿದರು. ಅವರು RTE ಕಾಯ್ದೆ (Right to Education Act - 2009) ಯ ಕುರಿತು ವಿವರಿಸಿ, 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಮಹತ್ವವನ್ನು ಸ್ಪಷ್ಟಪಡಿಸಿದರು. “ಪ್ರಾಥಮಿಕ ಶಿಕ್ಷಣವೇ ಮಾನವ ಅಭಿವೃದ್ಧಿಯ ಮೂಲ”. ಈ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ನೈತಿಕತೆ, ವಿಚಾರಶೀಲತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಬೇಕು. ಹಾಗೂ ಅಂತರ್ಗತ ಮತ್ತು ಗುಣಮಟ್ಟದ ಶಿಕ್ಷಣದ ಅಗತ್ಯತೆಯನ್ನು ಪ್ರಸ್ತಾಪಿಸಿ, ಉಪನ್ಯಾಸಕರು ವಿದ್ಯಾರ್ಥಿ ಕೇಂದ್ರಿತ ಮತ್ತು ಪರಸ್ಪರ ಕ್ರಿಯಾಶೀಲ ಬೋಧನಾ ವಿಧಾನಗಳನ್ನು ಅನುಸರಿಸಬೇಕೆಂದು ಕೋರಿದರು. ಮೌಲಾನಾ ಆಜಾದ್ ಅವರ ಮಾತುಗಳನ್ನು ಉಲ್ಲೇಖಿಸಿ — “ಶಿಕ್ಷಣವನ್ನು ನಿರ್ಲಕ್ಷಿಸುವ ರಾಷ್ಟ್ರ ಪ್ರಗತಿ ಸಾಧಿಸಲಾರದು” ಎಂದು ಹೇಳಿ ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿದರು.
ನಂತರ ಪ್ರಾಚಾರ್ಯರು ಡಾ. ರಾಜೇಂದ್ರ ಕೊಂಡಾ ಅಧ್ಯಕ್ಷೀಯ ಭಾಷಣದಲ್ಲಿ ಶಿಕ್ಷಣವು ಇಂದಿನ ಯುವ ಪೀಳಿಗೆಗೆ ಸಬಲತೆ, ಸ್ವಾವಲಂಬನೆ ಮತ್ತು ನವೋದ್ಯಮದ ದಾರಿಯಾಗಿದೆ ಎಂದು ಹೇಳಿದರು. ಹಾಗೂ ವಿದ್ಯಾರ್ಥಿನಿಯರು ಶಿಕ್ಷಣದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವು ಕು.ಸಾವಿತಾ (ಬಿ.ಎ. ಪ್ರಥಮ ಸೆಮಿಸ್ಟರ್) ಅವರಿಂದ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ಅತಿಥಿ ಪರಿಚಯವನ್ನು ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ. ನಾಗರತ್ನ ಎಸ್. ಮಾಡಿದರು. ಕು. ಸ್ವಾತಿ (ಬಿ.ಎ. ಪ್ರಥಮ ಸೆಮಿಸ್ಟರ್) ನಿರೂಪಣೆಯನ್ನು ಮತ್ತು ವಂದನಾರ್ಪಣೆಯನ್ನು ಕು. ಆಶಾರಾಣಿ (ಬಿ.ಎ. ಪ್ರಥಮ ಸೆಮಿಸ್ಟರ್) ಮಾಡಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಶ್ರೀದೇವಿ, ಶ್ರೀಮತಿ ಗೀತಾ ಪಾಟೀಲ್, ಶ್ರೀಮತಿ ಕವಿತಾ ಎ.ಎಂ., ಶ್ರೀಮತಿ ಬಸಮ್ಮ, ಶ್ರೀಮತಿ ಅಶ್ವಿನಿ, ಮತ್ತು ಶ್ರೀಮತಿ ಮೌಷೀನಾ ಫಾತಿಮಾ ಹಾಗೂ ಬಿ.ಎ. ಎಲ್ಲಾ ಸೆಮಿಸ್ಟರ್ನ 41 ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಎಂದು ಮಾಧ್ಯಮ ಸಮಿತಿಯ ಡಾ.ಮಹೇಶ ಗಂವ್ಹಾರ ತಿಳಿಸಿದ್ದಾರೆ
