ವಾಡಿ ಬಿಜೆಪಿ ಕಛೇರಿ ಯಲ್ಲಿ ಅಟಲ್ ಜಿ ಸ್ಮರಣೆ

ವಾಡಿ ಬಿಜೆಪಿ ಕಛೇರಿ ಯಲ್ಲಿ ಅಟಲ್ ಜಿ ಸ್ಮರಣೆ
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ಸ್ಮರಣೆ ಜರುಗಿತು.
ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಪುಷ್ಪ ನಮನ ಸಲ್ಲಿಸಿ ಮಾತನಾಡಿ ವಿಶ್ವವೇ ಅಚ್ಚರಿಯಿಂದ ನೋಡುವಂತೆ ದೇಶವನ್ನು ಮುನ್ನಡೆಸಿದ ಕೀರ್ತಿಗೆ ಪಾತ್ರರಾದ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿ ಹುದ್ದೆಗೇರಿದ್ದರು ಎಂದರು.
ಒಮ್ಮೆ 13 ದಿನಕ್ಕೆ ಅಧಿಕಾರ ಕಳೆದುಕೊಂಡರೆ, ಮತ್ತೊಮ್ಮೆ 13 ತಿಂಗಳಿಗೆ ಅಧಿಕಾರ ಕಳೆದುಕೊಂಡರು. ಮೂರನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಿದ ಅವರು, ಐದು ವರ್ಷ ಅಧಿಕಾರ ನಡೆಸಿದರು.
21ನೇ ಶತಮಾನದಲ್ಲಿ ಭಾರತದ ಪರಿವರ್ತನೆಯ ಶಿಲ್ಪಿಯಾಗಿದ್ದಕ್ಕಾಗಿ ದೇಶವು ಅಟಲ್ ಜಿ ಅವರಿಗೆ ಯಾವಾಗಲೂ ಕೃತಜ್ಞವಾಗಿರಬೇಕು. ಅವರ ಒಂದು ಸಿದ್ಧಾಂತದ ಆಧಾರದ ಮೇಲೆ ರೂಪಗೊಂಡ ಪಕ್ಷದಲ್ಲಿರುವುದೇ ನಮ್ಮ ಭಾಗ್ಯೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ ಅಟಲ ಜಿ ಅವರು 1998ರಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ನಮ್ಮ ದೇಶವು ರಾಜಕೀಯ ಅಸ್ಥಿರತೆಯ ಅವಧಿಯನ್ನು ಕಂಡಿತ್ತು. ಸುಮಾರು 9 ವರ್ಷಗಳಲ್ಲಿ ನಾಲ್ಕು ಲೋಕಸಭೆ ಚುನಾವಣೆಗಳನ್ನು ನೋಡಿದ್ದೆವು. ಭಾರತದ ಜನರು ಸಹನೆ ಕಳೆದುಕೊಂಡಿದ್ದರು ಮತ್ತು ಸರಕಾರಗಳ ಕಾರ್ಯಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದರು. ಸ್ಥಿರ ಮತ್ತು ಪರಿಣಾಮಕಾರಿ ಆಡಳಿತ ನೀಡುವ ಮೂಲಕ ಈ ಪರಿಸ್ಥಿತಿಯನ್ನು ಬದಲಾಯಿಸಿದವರು ಅಟಲ್ ಜಿ. ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರು ಸಾಮಾನ್ಯ ನಾಗರಿಕರ ಹೋರಾಟ ಮತ್ತು ಪರಿಣಾಮಕಾರಿ ಆಡಳಿತದ ಪರಿವರ್ತಕ ಶಕ್ತಿಯನ್ನು ಅರಿತುಕೊಂಡಿದ್ದರು.
ಅವರ ಆಡಳಿತ ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣ ಅಕ್ಷರಗಳಲ್ಲ ಬರೆದಂತಿದೆ ಅದಕ್ಕಾಗಿ ಅವರು ಎಲ್ಲರ ಮನದಲ್ಲಿ ಅಚ್ಚಳಿದು ಉಳಿದಿದ್ದಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಮುಖಂಡರಾದ ಶರಣಗೌಡ ಚಾಮನೂರ, ಆನಂದ ಇಂಗಳಗಿ,ಪ್ರಶಾಂತ ಕಾನಕುರ್ತೆ,ದಿನೇಶ ರಾಠೊಡ, ಗುರುನಾಥ ರಾಠೊಡ ಸೇರಿದಂತೆ ಇತರರು ಇದ್ದರು.