ಆಯ್ದಕ್ಕಿ ಮಾರಯ್ಯ

ಆಯ್ದಕ್ಕಿ ಮಾರಯ್ಯ

ಭಕ್ತರಿಗೆ ಬಡತನವುಂಟೆ ? 

ಸತ್ಯರಿಗೆ ಕರ್ಮವುಂಟೆ ?

ಚಿತ್ತ ಮುಟ್ಟಿ ಸೇವೆಯ ಮಾಡುವ ಭಕ್ತಂಗೆ. ಮರ್ತ್ಯ ಕೈಲಾಸವೆಂಬುದುಂಟೆ ?

ಆತನಿದ್ದುದೆ ಸುಕ್ಷೇತ್ರ, ಆತನಂಗವೆ 

ಅಮರೇಶ್ವರ ಲಿಂಗದ ಸಂಗ ಸುಖ.

     *ಆಯ್ದಕ್ಕಿ ಮಾರಯ್ಯ   *ವಚನ ಅನುಸಂಧಾನ

ಕನ್ನಡ ಭಾಷೆಯನ್ನು ಮುರಿದು ಕಟ್ಟಿದವರು ಅಪ್ಪ ಬಸವಾದಿ ಶರಣರು. ಅದುವರೆಗೂ ಅಲ್ಲಿದ್ದಂಥ ಸಿದ್ಧ ಮಾದರಿಯ ಶಬ್ದಾರ್ಥ ಗ್ರಹಿಕೆಯ ಮಿತಿಯ ಸೂತಕವ ಶುದ್ಧೀಕರಣ ಮಾಡಿ ಕನ್ನಡ ಭಾಷೆಯ ಅರ್ಥ ವಿಸ್ತರಣೆಯನ್ನ ಅಸ್ಸೀಮವಾಗಿ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಗೊಳಿಸಿದ ಶರಣರು; ಅಂತಹ ಕನ್ನಡದ ಪರಿಭಾಷೆಯನ್ನೇ ಅಲ್ಲಿ ಅನುಭಾವವ ಅಡಕವಾಗಿಸಿ ವಚನಗಳನ್ನು ರಚಿಸಿ ತನ್ಮೂಲಕ ದೇವರಿಗೂ ಅಂತಹ ಕನ್ನಡವ ಕಲಿಸಿದಂಥ ಕಲಿಗಳು ಅಪ್ಪ ಬಸವಾದಿ ಶರಣರು! ಈ ಚಮತ್ಕಾರ ಸದೃಶ್ಯವಾದ ಚಿದ್ಬೆಳಕನ್ನೇ ನಮ್ಮ ಶರಣ್ರು ತಮ್ಮಗಳ ವಚನ ಸಾಹಿತ್ಯದಲ್ಲಿ ಸಾಕ್ಷೀಕ ರಿಸಿದ್ದಾರೆ. ಹಾಗಾಗೇ ಶರಣರ ಜೊತೆಗೆನೇ ವಚನ ಸಾಹಿತ್ಯವೂ ದುರುಳರ ದಾಳಿಗೆ ಒಳಗಾಗಿಯೂ (ಒಂಭತ್ತು ಶತಮಾನ) ಉರುಳಿ ಹೋಗಿದ್ದರೂ ಸಹಿತ ಅಳಿದುಳಿದಷ್ಟೂ ವಚನಗಳು ಇಹ ಪರವ ನ್ನು ಒಂದು ಮಾಡಿ ನಿಲ್ಲುವ ಶಕ್ತಿ ಸಾಮರ್ಥ್ಯದ ತಾಕತ್ತನ್ನ ಈಗಲಾದ್ರೂ ಜಗಜ್ಜಾಹೀರುಗೊಳಿಸಿ ಜನಮಾನಸದಲ್ಲಿ ಮೆರೆಯಿಸುತ್ತಿರುವ ಸತ್ಯವನ್ನು ಇಲ್ಲಿ ಈ ಮೇಲಿನ ಆಯ್ದಕ್ಕಿ ಮಾರಯ್ಯ ಶರಣರ ವಚನವನ್ನು ಅನುಸಂಧಾನ ಮಾಡುವ ಮೂಲಕ ಕನ್ನಡ ಭಾಷೆ ಹೊಸ ಅರ್ಥ ವಿನ್ಯಾಸದಲ್ಲಿ ಹೇಗೆ ಆವಿಷ್ಕಾರಗೊಂಡಿದೆ ಎನ್ನುವುದನ್ನೂ ಪರಿಗ್ರಹಿಸಿ ಪರಿಶೀಲಿಸಿ ನೋಡೋಣ.

*ಭಕ್ತರಿಗೆ ಬಡತನವುಂಟೆ ?*

*ಸತ್ಯರಿಗೆ #ಕರ್ಮವುಂಟೆ ?*

ಭಕ್ತ ಎನ್ನುವ ಪದ ಸಿದ್ಧ ಮಾದರಿಯ ಅರ್ಥದಲ್ಲಿ ದೇವರ ಆರಾಧನೆಗಳ ಆಚರಣೆ ಮಾಡುವ ಭವಿ ಯಾಗಿರುವನು. ಆದರೆ ಶರಣರ ಪರಿಭಾಷೆಯ ಲ್ಲಿ ಭಕ್ತ ಎನ್ನುವ ಪರಿಕಲ್ಪನೆಯ ಪದ ತನ್ನ ಅರ್ಥ ವಿನ್ಯಾಸದಲ್ಲಿ ಬಹುದೊಡ್ಡ ಆಯಾಮ ಉಳ್ಳದ್ದು. ಹಾಗೂ ಅದು ಶರಣತತ್ವದಲ್ಲಿ ತನ್ನದೇ ಆದಂತಹ ಘನತೆ ಹೊಂದಿದೆ. ಹಾಗಾಗಿ ಭಕ್ತ ಪದ ಶರಣರಿಗೆ ಗೌರವಾದರದ ಪದವಾಗಿದೆ. ಇಂತಹ ಘನ ಭಕ್ತ ರಿಗೆ ಯಾವುದೇ ರೀತಿಯ ಬಡತನದ ದಾರಿದ್ರ್ಯ ಇರಲು ಸಾಧ್ಯವಿಲ್ಲ ಎನ್ನುವ ಮಾರಯ್ಯ ಶರಣರು ಸತ್ಯರಿಗೆ ಕರ್ಮವುಂಟೇ? ಎನ್ನುವಲ್ಲಿ ಸತ್ಯವಂತ ಶರಣರಿಗೆ ಯಾವುದೇ ಕರ್ಮದ ಬಾಧೆಯು ಇಲ್ಲ ವೆಂಬ ಶರಣತತ್ವದ ಸಾರವನ್ನು ಅರುಹಿದ್ದಾರೆ.

*#ಚಿತ್ತ ಮುಟ್ಟಿ ಸೇವೆಯ ಮಾಡುವ* 

*ಭಕ್ತಂಗೆ ಮರ್ತ್ಯ #ಕೈಲಾಸವೆಂಬುದುಂಟೆ ?*

ಶರಣಮಾರ್ಗದಲ್ಲಿ ಸಾಗುವ ಯಾವುದೇ ಭಕ್ತನು ಸುಚಿತ್ತ ಮನ ಮುಟ್ಟಿ ಗುರು ಲಿಂಗ ಜಂಗಮದ ಸೇವೆಯನ್ನು ಮಾಡುವಾಗ ಆತನಿಗೆ ಮರ್ತ್ಯದ ಅಥವಾ ಕೈಲಾಸದ ವರ್ಗೀಕರಣ ಇರುವುದಿಲ್ಲ. ಯಾಕೆಂದರೆ ಆತನು ಇಹಪರವನ್ನು ಭಿನ್ನ ಬೇಧ ವಿಲ್ಲದೆ ಕಾಯಕವೇ ಕೈಲಾಸವೆಂದು ಭಾವಿಸಿ ತನ್ನ ಸೇವೆಯನ್ನು ಸಲ್ಲಿಸುವನು. ಹಾಗಾಗಿ ಅಂತಹ ಭಕ್ತನಿಗೆ ಮರ್ತ್ಯ ಕೈಲಾಸವೆಂಬ ತರತಮದ ಭಾವವಿಲ್ಲವೆಂದು ವಚನಕಾರರಾದ ಮಾರಯ್ಯ ಶರಣರು ಪ್ರತಿಪಾದಿಸಿದ್ದಾರೆ.

ಶರಣಮಾರ್ಗದಲ್ಲಿ ನಡೆಯುವ ಭಕ್ತ ತನ್ನ ತನು ಮನ ಭಾವದಿಂದ ಸತ್ಯ ಶುದ್ಧವಾಗಿ ಗುರು ಲಿಂಗ ಜಂಗಮದ ಸೇವೆಯನ್ನ ಮಾಡುವ ಕಾರಣದಿಂದ

ಆತ ಎಲ್ಲಿರುವನೋ ಅಲ್ಲಿ ಅದು ಸುಕ್ಷೇತ್ರವಾಗಿ ರುತ್ತದೆ. ಅಂತಹ ಭಕ್ತನ ಸಂಗವು ಸಾಕ್ಷಾತ್ ಆ ಅಮರೇಶ್ವರ ಲಿಂಗದ ಸಂಗ ಸುಖವೇ ಆಗಿದೆ ಎನ್ನುವ ಮೂಲಕ ಶರಣಮಾರ್ಗದ ಭಕ್ತನ ಘನ ಪದಕ್ಕೆ ಹೆಚ್ಚಿನ ಮಹತ್ವ ಇದೆ ಎಂಬುದನ್ನು ಅಪ್ಪ ಬಸವಾದಿ ಶರಣರೂ ಕೂಡ ಭಕ್ತನ ಕುರಿತಾಗಿ ತಮ್ಮ ಗೌರವಾದರದ ಭಾವನೆಗಳನ್ನು ತಮ್ಮಗಳ ವಚನಗಳಲ್ಲಿ ವೈಭವೀಕರಿಸಿ ಹೇಳುವ ಮೂಲಕ ಭಕ್ತನ ಪದದ ಅರ್ಥ ವಿನ್ಯಾಸವು ಇಹ ಪರವನ್ನು ಬೆಸೆಯುವ ಶಕ್ತಿಯ ಹೊಂದಿರುವುದ ಸಾಬೀತು ಮಾಡಿದ್ದಾರೆ. ಹಾಗಾಗಿ ಈ ವಚನವು ಸರಳವಾದ ಪದಗಳಲ್ಲಿ ಗಹನವಾದದ್ದನ್ನೇ ಹೇಳಿರುವ ಸತ್ಯ ವು ಇಲ್ಲಿ ಬಯಲು ಸತ್ಯವೂ ಆಗಿದೆ ಎನಿಸುತ್ತದೆ.

                ಅಳಗುಂಡಿ ಅಂದಾನಯ್ಯ