ಪರಿಸರ ಜಾಗೃತಿ ಮೂಡಲಿ.

ಪರಿಸರ ಜಾಗೃತಿ ಮೂಡಲಿ.

ಪರಿಸರ ಜಾಗೃತಿ ಮೂಡಲಿ.

ಬಹುಶಃ ನಾವು ನಮ್ಮ ವೈಯಕ್ತಿಕ ಜೀವನದಲ್ಲಿ ಹೆಚ್ಚು ಮುಳುಗಿರುವುದರಿಂದ ನಮ್ಮ ಕಣ್ಣಿಗೆ ಕೇವಲ ನಮ್ಮ ಜೀವನದ ಆಗು ಹೋಗುಗಳು, ಸುಖ-ದುಃಖಗಳು, ಕಷ್ಟ ನಷ್ಟಗಳೇ ಕಾಣುತ್ತವೆ, ಹಾಗಾಗಿ ಅವುಗಳನ್ನು ಅನುಭವಿಸುತ್ತ, ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳುತ್ತ ಜೀವನ ಸಾಗಿಸುತ್ತೇವೆ. ಆದರೆ, ಅದನ್ನು ದಾಟಿ ಹೊರಗಡೆ ಏನು ನಡೆಯುತ್ತಿದೆ ಎಂದು ಯೋಚಿಸುವ ಗೋಜಿಗೆ ನಾವು ಹೋಗುವುದಿಲ್ಲ. ನಮ್ಮ ಸುತ್ತಮುತ್ತಲಿನ ಜನರ ಬಗ್ಗೆಯೇ ಯೋಚಿಸದ ನಾವು, ನಮ್ಮನ್ನು ಹೊತ್ತು ನಿಂತ ಭೂಮಿ ಮತ್ತು ನಮ್ಮಿಂದ ಎನ್ನನ್ನು ಆಶಿಸದೆ ನಾವು ಜೀವಂತವಾಗಿರಲು ಸಹಾಯ ಮಾಡುವ ಪರಿಸರದ ಬಗ್ಗೆ ಹೇಗೆ ಯೋಚಿಸುತ್ತೀವಿ? ಯೋಚಿಸುವುದಿಲ್ಲ ಅಲ್ಲವೇ? ಹಾಗಾಗಿ ಪರಿಸರವು ನಮಗಾಗಿ ಎಲ್ಲವನ್ನು ಉಚಿತವಾಗಿ ಕೊಡುತ್ತಿರುವುದರಿಂದ ನಾವು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಕೇವಲ ಸಂಪಾದಿಸಿ ತೆಗೆದುಕೊಳ್ಳುವುದರ ಬಗ್ಗೆಯೇ ಯೋಚಿಸುತ್ತಿದ್ದೇವೆ. ಮತ್ತು ನಮ್ಮ ವೈಯಕ್ತಿಕ ಜೀವನದ ಆಗುಹೋಗುಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತೇವೆ, ಅದರ ಸಮಸ್ಯೆಗಳು, ಪರಿಣಾಮಗಳು, ಪರಿಹಾರಗಳು ಎಲ್ಲವು ಕಣ್ಣಿಗೆ ರಾಚುತ್ತವೆ. ಆದರೆ ಹಾಳಾಗುತ್ತಿರುವ ಪರಿಸರದ ಅಡ್ಡ ಪರಿಣಾಮಗಳು ಅಷ್ಟು ಸುಲಭವಾಗಿ ಮತ್ತು ಬೇಗ ಕಾಣಿಸಿಕೊಳ್ಳುವುದಿಲ್ಲ. ಅದನ್ನು ಸೂಕ್ಮವಾಗಿ ಗಮನಿಸಿ ಪರಿಶೀಲಿಸಿದಾಗ, ಅದರ ಬಗ್ಗೆ ಅಧ್ಯಯನ ಮಾಡಿದಾಗ ಅದು ತಿಳಿಯುತ್ತದೆ, ಆದರೆ ಆ ಕೆಲಸ ಮಾಡಲು ಯಾರು ಮುಂದಾಗುವುದಿಲ್ಲ ಕಾರಣ ಅದು ನಮ್ಮ ಸಮಸ್ಯೆ ಎಂದೆನಿಸುವುದಿಲ್ಲ. ಅದಕ್ಕಾಗಿ ಪರಿಸರದ ಬಗ್ಗೆ ಅಷ್ಟು ಪ್ರಮಾಣಿಕವಾಗಿ ಜನರಲ್ಲಿ ಜಾಗೃತಿ ಇಲ್ಲ ಎಂಬುವುದು ಅತ್ಯಂತ ನೋವಿನ ಮಾತಾಗಿದೆ. 

ಕಾರಣ ಈಗಲಾದರೂ ಆಗಿರುವಂತ ಎಲ್ಲ ತಪ್ಪುಗಳನ್ನು ಸರಿಪಡಿಸಿಕೊಂಡು ಪರಿಸರ ಸಂರಕ್ಷಣೆಯಲ್ಲಿ ವಿಶೇಷವಾಗಿ ಪ್ರಕೃತಿಯ ಸಂರಕ್ಷಣೆಯಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳುವುದು ಅವಶ್ಯಕತೆ ಖಂಡಿತವಾಗಿಯೂ ಇದೆ. ಈ ನಿಟ್ಟಿನಲ್ಲಿ ಕೇವಲ ಒಂದು ದಿನ ಅಂದರೆ ಪರಿಸರ ದಿನಾಚರಣೆಗೆ ಮಾತ್ರ ನಾವು ಪರಿಸರ ಪ್ರೇಮಿಗಳ ಆಗುವುದು ಖಂಡಿತವಾಗಿಯೂ ಬೇಡವೇ ಬೇಡ, ಪ್ರತಿದಿನವೂ ಪ್ರತಿ ನಿಮಿಷವೂ ಪರಿಸರ ಸಂರಕ್ಷಣೆಯ ಸ್ನೇಹಜೀವಿಗಳಾಗಿ ಈ ಒಂದು ಭೂಮಿಯಲ್ಲಿ ಬದುಕುವಂಥ ಸುಂದರವಾದಂತ ವಾತಾವರಣ ನಿರ್ಮಾಣ ಮಾಡೋಣ ಮತ್ತು ನಿರ್ಮಾಣ ಮಾಡಿ ಕೊಡುವ ಮೂಲಕ ಮುಂದಿನ ಪೀಳಿಗೆಗೆ ಭವ್ಯವಾದಂತ ಪರಿಸರ ಸ್ನೇಹಿ ಜೀವನವನ್ನು ಕೊಡೋಣ ಎನ್ನುವ ಮಾತುಗಳು ನಾನು ಹೇಳಲು ಇಚ್ಚಿಸುತ್ತೇನೆ.

- ಸಂಗಮೇಶ ಎನ್ ಜವಾದಿ 

ಪರಿಸರ ಸಂರಕ್ಷಕರು, ಬೀದರ ಜಿಲ್ಲೆ.