ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಿ: ಪ್ರಮೀಳಾ ಎಂ.ಕೆ

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಿ: ಪ್ರಮೀಳಾ ಎಂ.ಕೆ
ಕಲಬುರಗಿ: ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ವಿದ್ಯಾವಂ ತಳಾಗಿ ಮಾಡಿದರೆ ಮಾತೃಸ್ಥಾನದಲ್ಲಿ ನಿಂತು ಇಡೀ ಕುಟುಂಬಕ್ಕೆ ಮಾದರಿಯಾಗುತ್ತಾಳೆ. ಅದಕ್ಕಾಗಿ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ನಿರಾಸಕ್ತಿ ಸಲ್ಲದು ಎಂದು ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಪ್ರಮೀಳಾ ಎಂ ಕೆ ಹೇಳಿದರು.
ಕಲ್ಬುರ್ಗಿಯ ಸಿರನೂರು ಸಂತ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನವಂಬರ್ 29 ರಂದು "ಅವಳರಳಲಿ, ಸಮಾಜ ಬೆಳಗಲಿ"ಎಂಬ ಧ್ಯೇಯ ವಾಕ್ಯದಡಿಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿ ಹೆಣ್ಣು ಮಕ್ಕಳ ಬಗ್ಗೆ ಇರುವ ನಿಷ್ಕಾಳಜಿ ದೂರಾಗಿ ತಾಯಿ ಸ್ಥಾನದಲ್ಲಿ ನಿಲ್ಲುವ ಹೆಣ್ಣು ಮಗಳು ಇಡೀ ಕುಟುಂಬ ಮತ್ತು ಸಮಾಜಕ್ಕೆ ಆದರ್ಶವಾಗಿ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರಣೀಭೂತಳಾಗುತ್ತಾಳೆ. ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ಉತ್ತಮ ವ್ಯವಸ್ಥೆಯನ್ನು ಬಳಸಿಕೊಂಡು ಶಿಕ್ಷಣ ಪಡೆದರೆ ಪ್ರಗತಿ ಹೊಂದಲು ಸಾಧ್ಯ. ಕೇವಲ 69 ಮಕ್ಕಳಿಂದ ಪ್ರಾರಂಭಗೊಂಡ ಸಂತ ಕ್ಸೇವಿಯರ್ ಶಾಲೆ ಶಾಲೆಯು ಐದು ವರ್ಷಗಳಲ್ಲಿ 550ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಆದರ್ಶ ಪ್ರಾಯ ಕೆಲಸ ಮಾಡುತ್ತಿದೆ ಎಂದು ಹೇಳಿದರು. ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯಸ್ಥರಾದ ವಂದನೀಯ ಮ್ಯಾಕ್ಸಿಮ್ ಮಿಸ್ಕಿತ್ ಎಸ್. ಜೆ ಮಾತನಾಡಿ ಮಕ್ಕಳಲ್ಲಿ ಕೇವಲ ಪಾಠ ಪ್ರವಚನಗಳನ್ನು ಮಾತ್ರ ಬೋಧಿಸದೆ ಮಾನವೀಯ ಮೌಲ್ಯಗಳನ್ನು ತುಂಬಿ ರಾಷ್ಟ್ರಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಗುರಿಯನ್ನು ಹೊಂದಲಾಗಿದೆ. ಶಾಲೆಗಳು ಕೇವಲ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳನ್ನು ಸೃಷ್ಟಿ ಮಾಡದೆ ಆದರ್ಶ ಪ್ರಜೆಗಳನ್ನು ಹುಟ್ಟುಹಾಕುವ ಕೇಂದ್ರ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರೆವೆರೆಂಡ್ ಫಾದರ್ ರಾಬರ್ಟ್ ರಾಡ್ರಿಗಸ್ ಎಸ್. ಜೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ "ಅವಳರಳಲಿ ಸಮಾಜ ಬೆಳಗಲಿ" ಧ್ಯೇಯ ವಾಕ್ಯದೊಂದಿಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜೊತೆಗೆ ಹೆಣ್ಣು ಮಕ್ಕಳ ಮೇಲಿನ ಕ್ರೌರ್ಯದ ವಿರುದ್ಧ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ನಂತರ ಫಾದರ್ ರಾಡ್ರಿಗಸ್ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ಹೆಣ್ಣು ಮಕ್ಕಳ ಮೇಲಿನ ಕ್ರೌರ್ಯ ಹಾಗೂ ಅದರ ತಡೆಯ ಕುರಿತಾದ ಜಾಗೃತಿಯ ವಿಶೇಷ ಗಾನ- ನೃತ್ಯ ಸಂಯೋಜನೆಯ ರೂಪಕವನ್ನು ಪ್ರಸ್ತುತಪಡಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶಪಾಲರಾದ ಶ್ರುತಿ ರೆಡ್ಡಿ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕೋಶಾಧಿಕಾರಿ ಫಾದರ್ ಆನಂದ ಪ್ರಭು, ಫಾದರ್ ಜಾನ್ ಥಾಮಸ್ ಮತ್ತು ಫಾದರ್ ರೋಷನ್ ಪಿಂಟೊ ಉಪಸ್ಥಿತರಿದ್ದರು. ವಾಣಿ ಮತ್ತು ವಿಮಲ್ ಕಾರ್ಯಕ್ರಮ ನಿರೂಪಿಸಿದರು.