ಪೋಷಕರು ಮಕ್ಕಳನ್ನೇ ಅಸ್ತಿಯನ್ನಾಗಿ ರೂಪಿಸಬೇಕು:ವಡ್ಡನಕೇರಿ
ಪೋಷಕರು ಮಕ್ಕಳನ್ನೇ ಅಸ್ತಿಯನ್ನಾಗಿ ರೂಪಿಸಬೇಕು:ವಡ್ಡನಕೇರಿ
ಕಲಬುರಗಿ : ಪೋಷಕರು ಮಕ್ಕಳಿಗೆ ಆಸ್ತಿ ಸಂಪತ್ತು ಮಾಡಿಕೊಡುವ ಬದಲಾಗಿ ಉನ್ನತ ವಿದ್ಯಾಭ್ಯಾಸ ಕೊಡಿಸಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದುಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ಶರಣಬಸಪ್ಪ ವಡ್ಡನಕೇರಿ ಕರೆ ನೀಡಿದರು.
ನಗರದ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಕಿಡ್ಜ್ಜಿ ಕಾಲೇಜ್ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾವಂತರಾದ ಮಕ್ಕಳು ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ತಮ್ಮ ಆಶೋತ್ತರ ಬದಿಗೊತ್ತಿ ದುಡಿದ ತಂದೆ ತಾಯಿಯರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ದೇಶದ ಭವಿಷ್ಯ ಹಾಗೂ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ದೇಶ ನಿರ್ಮಾಣ ಆಗಬೇಕಾದರೆ ಉತ್ತಮ ಪ್ರಜೆಗಳನ್ನು ನಾವು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ವೇದಿಕೆ ಕಲ್ಪಿಸಬೇಕೆಂದು ಎಂದು ಸಲಹೆ ನೀಡಿದರು..
ಶ್ರೀ ಬಸವರಾಜ ಜೋಗುರ ಮಾತನಾಡಿ ತಂದೆ ತಾಯಿಗಳ ಮಾತುಗಳನ್ನು ಮಕ್ಕಳು ಪಾಲಿಸಬೇಕು. ಮಕ್ಕಳು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ.ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳುವತ್ತ ಗಮನಹರಿಸಬೇಕು. ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಯಪಡಿಸಬೇಕಿದೆ. ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಪರಸ್ಪರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಮಕ್ಕಳ ಸಮಸ್ಯೆಗಳಿಗೆ ಪೋಷಕರು ಮೊದಲು ಕಿವಿಗೊಡಬೇಕು. ಮಕ್ಕಳ ಮೇಲೆ ನಾವು ನಂಬಿಕೆಯನ್ನು ಹೊಂದಿರಬೇಕು. ಮಗುವಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕಾಗುತ್ತದೆ. ದೊರೆಯುವ ಅವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಬೇಕು. ಶಿಕ್ಷಣದಿಂದ ಮಾತ್ರ ಸಮಾನತೆ ತರಲು ಸಾಧ್ಯ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ವೇಷಭೂಷಣ ಸ್ಪರ್ಧೆ,ಏರ್ಪಡಿಸಿದ್ದರು.
ಕಿಡ್ಜ್ ಕಾಲೇಜ್ ಶಿಕ್ಷಣ ಸಂಸ್ಥೆಯ ಶ್ರೀ ಬಸವರಾಜ ಜೋಗುರ, ಸಿದ್ದಲಿಂಗೇಶ್ವರ ಪ್ರಕಾಶನದ ಶ್ರೀ ಸಿದ್ದಲಿಂಗ ಕೊನೇಕ ಹಾಗೂ ಪ್ರಾಚಾರ್ಯರಾದ ಶ್ರೀಮತಿ ಜ್ಯೋತಿ ಜೋಗುರ ಹಾಗೂ ಶಿಕ್ಷಣ ಸಂಸ್ಥೆಯ ಎಲ್ಲ ಬೋಧಕ– ಬೋಧಕೇತರು, ವಿದ್ಯಾರ್ಥಿಗಳು, ಪೋಷಕರು ಇದ್ದರು.
