ಅಸ್ಪೃಶ್ಯತೆ ನಿವಾರಣೆಗೆ ಬಾಬಾಸಾಹೇಬ್ ವಿಚಾರ ಪ್ರಸಾರ ಅಗತ್ಯ -ಎಚ್.ಟಿ. ಪೋತೆ

ಅಸ್ಪೃಶ್ಯತೆ ನಿವಾರಣೆಗೆ ಬಾಬಾಸಾಹೇಬ್ ವಿಚಾರ ಪ್ರಸಾರ ಅಗತ್ಯ -ಎಚ್.ಟಿ. ಪೋತೆ

ಅಸ್ಪೃಶ್ಯತೆ ನಿವಾರಣೆಗೆ ಬಾಬಾಸಾಹೇಬ್ ವಿಚಾರ ಪ್ರಸಾರ ಅಗತ್ಯ – ಎಚ್.ಟಿ. ಪೋತೆ

ಕಲಬುರಗಿ: “ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಕನಕದಾಸರನ್ನು ಹೋರಗೆ ಇಟ್ಟ ಮನುವಾದಿಗಳು, ವಿಶ್ವಗುರು ಬಸವಣ್ಣನವರ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗೆ ಅಪಮಾನ ಮಾಡಿದ್ದಾರೆ. ಇಂತಹ ಮನೋಭಾವಕ್ಕೆ ವಿರೋಧವಾಗಿ ನಾವು ಧ್ವನಿ ಎತ್ತಬೇಕು” ಎಂದು ಹಿರಿಯ ಚಿಂತಕ ಎಚ್.ಟಿ. ಪೋತೆ ಹೇಳಿದರು.

ನಗರದ ಕಲಾಮಂದಿರದಲ್ಲಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ಶಿಕ್ಷಕಿ ಮಮತಾ ಜಾನೆ ಅವರ ‘ಬಾಬಾಸಾಹೇಬರ ನುಡಿಮುತ್ತುಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 “ಬಾಬಾಸಾಹೇಬ್ ಅಂಬೇಡ್ಕರ್ ತಮ್ಮ ಕುಟುಂಬಕ್ಕಾಗಿ ಹಣ ಸಂಪಾದನೆ ಮಾಡದೇ, ದೇಶದ ಜನರಿಗೆ ಸಂವಿಧಾನ ನೀಡಿ ಸಮಾನತೆಯ ಸಮಾಜ ನಿರ್ಮಿಸಿದರು. ಮಕ್ಕಳಿಗೆ ಬುದ್ಧ, ಬಸವ, ಅಂಬೇಡ್ಕರ್ ವಿಚಾರ ತಿಳಿಸಿದ್ದಲ್ಲಿ ಮಾತ್ರ ಸಮಾನತೆ ಸಾಧನೆ ಸಾಧ್ಯ,” ಎಂದರು.

ಪತ್ರಾಗಾರ ಇಲಾಖೆಯ ಉಪನಿರ್ದೇಶಕರಾದ ಡಾ. ವೀರಶೆಟ್ಟಿ ಗಾರಂಪಳ್ಳಿ ಅವರು ಪುಸ್ತಕದ ವಿಮರ್ಶೆ ಮಾಡುತ್ತಾ, ಅಂಬೇಡ್ಕರ್ ಅವರನ್ನು ನಾವು ಅಕ್ಷರಗಳ ಮೂಲಕವಲ್ಲ, ಅವುಗಳ ನಡುವಿನ ಅರ್ಥದ ಮೂಲಕ ನೋಡಬೇಕು. ಅಂದಾಗ ಮಾತ್ರ ಅವರ ಹೋರಾಟದ ಬದುಕು ನಮ್ಮ ವರ್ತಮಾನದ ಬದುಕಿಗೆ ದಾರಿದೀಪವಾಗಲಿದೆ. ಪುಸ್ತಕ ಓದುವುದರ ಜೊತೆಗೆ ಅದರ ಅನುಭೂತಿ ಅತಿಮುಖ್ಯ. ಬಾಬಾಸಾಹೇಬರು ಬದುಕಿದ್ದಾಗಲೇ ಅವರ 13 ಕೃತಿಗಳು ಇಂಗ್ಲಿಷ್‌ನಲ್ಲಿ ಬಂದಿದ್ದವು. ಕನ್ನಡದಲ್ಲಿಯೇ ಅವರ ಭಾಷಣ ಮತ್ತು ಬರಹಗಳ ಕುರಿತು 22 ಸಂಪುಟಗಳು ಬಂದಿವೆ. ಮಾನವೀಯತೆಯ ಬಗ್ಗೆ, ಮನುಷ್ಯತ್ವದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ಚಿಂತಿಸುವ ಪ್ರತಿಯೊಬ್ಬರೂ ಮನೆಯಲ್ಲಿ ಇಡಲೇಬೇಕಾದ ಸಂಪುಟಗಳಿವು. ಮಮತಾ ಜಾನೆ ಅವರ ಕೃತಿಯಲ್ಲಿ ಕಾನೂನು, ಧರ್ಮ, ಸಮಾಜ, ದೇವರು, ಮಹಿಳೆ, ಅರ್ಥ, ಸಂಸ್ಕೃತಿ, ಪ್ರಜಾಪ್ರಭುತ್ವ, ರಾಜಕೀಯ, ಶಿಕ್ಷಣ, ಹೀಗೆ ಎಲ್ಲದರ ಕುರಿತಾದ ವಿಷಯಗಳ ಹೇಳಿಕೆಗಳು ಇಲ್ಲಿವೆ. ಅಂಬೇಡ್ಕರ್ ಅವರು ತಮ್ಮ ಜೀವಮಾನದಲ್ಲಿ ಮಾತಾಡಿರುವ, ಬರೆದಿರುವ ಈ ಹೇಳಿಕೆಗಳನ್ನು ಬದಿಗಿಟ್ಟು ನಮ್ಮ ಬದುಕನ್ನು ಸಮಾಜವನ್ನು ರೂಪಿಸಿಕೊಳ್ಳಲು ಸಾಧ್ಯವಿದೆಯೇ? ಎಂಬುದನ್ನು ನಾವು ಗಮನಿಸಬೇಕು. ಈ ಪುಸ್ತಕ ಬಾಬಾಸಾಹೇಬರ ಜೀವನಾದರ್ಶಗಳನ್ನು, ವಿಚಾರಗಳನ್ನು ಸುಲಭವಾಗಿ ಜನರಿಗೆ ತಲುಪಿಸುತ್ತವೆ” ಎಂದರು.

ಸಾಹಿತಿ ಡಾ. ಶ್ರೀಶೈಲ ನಾಗರಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿಡಿಪಿಐ ಶ್ರೀ ಸೂರ್ಯಕಾಂತ ಮದಾನೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಶ್ರೀ ಬಿ. ಹೆಚ್. ನಿರಗುಡಿ ಅವರು ಕಾರ್ಯಕ್ರಮವನ್ನು ಸಂಘಟಿಸಿ ನಿರೂಪಿಸಿದರು.

ಅಣ್ಣಾರಾಯ ಮತ್ತಿಮಡು, ಸೈದಪ್ಪ ಚೌಡಾಪೂರ, ಮೌನೇಶ ಪಂಚಾಳ, ಸುರೇಶ ಪೂಜಾರಿ,ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಪತ್ರಕರ್ತ ಶರಣಗೌಡ ಪಾಟೀಲ ಪಾಳಾ, ಸಾಹಿತಿ ಚಿ.ಸಿ. ನಿಂಗಣ್ಣ, ಡಾ. ಆನಂದ ಸಿದ್ದಾಮಣಿ, ಡಾ. ವಿಜಯಕುಮಾರ ಪರುತೆ, ಸಾಹಿತಿ ದುಖಾನ, ಹೇಮನೂರ , ಚಾಮರಾಜ ದೊಡ್ಡಮನಿ, ಬಸವಂತರಾಯ ಕೋಳಕೂರ,ಅಂಬಾರಾಯ ಕೋಣೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.