ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿ: ಶರಣು ಪಾಟೀಲ ಮೋತಕಪಲ್ಲಿ

ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿ: ಶರಣು ಪಾಟೀಲ ಮೋತಕಪಲ್ಲಿ
ಚಿಂಚೋಳಿ : ಸ್ವಾತಂತ್ರ್ಯ ಪೂರ್ವದಿಂದಲೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ವೀರಶೈವ ಲಿಂಗಾಯತ ಜನರಿಗೆ ಪ್ರತ್ಯೇಕ ಧರ್ಮದ ಹೋರಾಟ ಮಾಡುತ್ತಾ ಬಂದಿದೆ. ಈ ಬೇಡಿಕೆ ಹೋರಾಟಕ್ಕೆ ಕೇಂದ್ರ ಸರ್ಕಾರ ಇನ್ನೂ ಮನ್ನಣೆ ನೀಡಿಲ್ಲ. ಆದರೆ ನಮ್ಮದು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಆಗಲೇಬೇಕು ಅಂದಾಗ ಮಾತ್ರ ನಮ್ಮ ಜನಕ್ಕೆ ನ್ಯಾಯ ಸಿಗುತ್ತದೆ. ಈ ದೃಷ್ಟಿಯಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ತಾಲೂಕಿನ ಎಲ್ಲಾ ವೀರಶೈವ ಲಿಂಗಾಯತ ಜನರು ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದು ಹಾಗೂ ಜಾತಿ ಮತ್ತು ಉಪಜಾತಿ ಕಾಲಂ ನಲ್ಲಿ ಲಿಂಗಾಯತ ಎ-0832, ಅಥವಾ ವೀರಶೈವ ಎ-1522 ಎಂದು ದಾಖಲಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಚಿಂಚೋಳಿ ತಾಲೂಕು ಘಟಕದ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ ತಿಳಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆ ನೀಡಿ, 2001 ರ ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದು ಸೇರಿಸಲು ಒತ್ತಾಯ ಮಾಡಲಾಗಿತ್ತು. ಆದರೆ ಆಗಲಿಲ್ಲ. ಸದ್ಯ ಧರ್ಮದ ಕಾಲಂ ನಲ್ಲಿ ವೀರಶೈವ ಲಿಂಗಾಯತ ಎಂದು ದಾಖಲು ಮಾಡಿದಲ್ಲಿ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಮತ್ತಷ್ಟು ಶಕ್ತಿ ಬರಲಿದೆ. ಹಾಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಈ ಕುರಿತು ಹಲವಾರು ಸಭೆಗಳನ್ನು ನಡೆಸಿ ಹೆಚ್ಚಿನ ಜನರ ಅಭಿಪ್ರಾಯ ಪಡೆದು, ಸಮಾಜದ ಏಕತೆ ಹಾಗೂ ಪ್ರತ್ಯೇಕ ಧರ್ಮ ಸ್ಥಾಪನೆಯ ನಿಟ್ಟಿನಲ್ಲಿ ಪ್ರಸ್ತುತ ಸಮೀಕ್ಷೆಯಲ್ಲಿ ಧರ್ಮ ವೀರಶೈವ ಲಿಂಗಾಯತ ಎಂದು ದಾಖಲಿಸಲು ಸಮಾಜದ ಜನರಲ್ಲಿ ಮನವಿ ಮಾಡಿದ್ದು, ಚಿಂಚೋಳಿ ತಾಲೂಕಿನ ಸಮಾಜ ಬಾಂಧವರು ವೀರಶೈವ ಲಿಂಗಾಯತ ಧರ್ಮ ಎಂದು ನಮೂದಿಸಿ ದಾಖಲಿಸುವ ಸಮಾಜಕ್ಕೆ ಶಕ್ತಿಯುತವಾಗಿ ಗಟ್ಟಿಗೊಳಿಸಬೇಕೆಂದು ಅಧ್ಯಕ್ಷ ಮೋತಕಪಳ್ಳಿ ಮನವಿ ಮಾಡಿಕೊಂಡಿದ್ದಾರೆ.