ಹೊಡೆಹುಲ್ಲ ಬಂಕಣ್ಣ

ನೆಲ್ಲು; ನೆಲದಲ್ಲಿಯೆ ಅಳಿದು, ಹುಲ್ಲಿನ. ಒಡಲಲ್ಲಿಯೆ ಜನಿಸಿ, ಆ ಹುಲ್ಲ
ತನ್ನೊಳಗಿರಿಸಿದ ಭೇದವ ನೋಡಾ.
ತನ್ನೊಡಲಳಿದಲ್ಲಿ; ನೆಲ್ಲೂ ಅಲ್ಲ, ಹುಲ್ಲೂ ಅಲ್ಲ !
ಆ ಹೊಡೆಯಲ್ಲಿ ಅಡಗಿತ್ತೆಂದರಿಯೆ,
ಕುಂಭೇಶ್ವರಲಿಂಗದಲ್ಲಿ ಜಗನ್ನಾಥನನರಿಯಲಾಗಿ.
ಹೊಡೆಹುಲ್ಲ ಬಂಕಣ್ಣ ವಚನ ಅನುಸಂಧಾನ
ಅಪ್ಪ ಬಸವಾದಿ ಶರಣರೆಲ್ಲರೂ ಸೇರಿ ಮಾಡಿದ ಅನುಭಾವದ ಅಡುಗೆಯ ಅರಿವಿನ ಪ್ರಸಾದವೇ ಈ ವಚನ ಸಾಹಿತ್ಯವಾಗಿದೆ. ಅದರ ಸ್ವುಸ್ವಾದದ ಸವಿ ಸುಖದ ಮೂಲ ನೆಲೆಯ ಸೆಲೆ ಇರುವುದೂ ಕೂಡಾ; ನಡೆ ನುಡಿ ಒಂದಾಗಿ ದುಡಿದ ಬಹುತೇಕ ದಮನಿತ ಜನವರ್ಗದಿಂದ ಬಂದಂಥ ಕಾಯಕದ ಜೀವಿಗಳ ದಾಸೋಹ ನಿರತ ಶರಣ ಮನಸುಗಳ ಆಳದಲ್ಲಿ. ಅವರು, ಅರಿವು ಮತ್ತು ಆಚರಣೆಯ ಜೊತೆಗೆ ತಮ್ಮಗಳ ದಿನ ನಿತ್ಯದ ವೃತ್ತಿ ಜೀವನದ ಅಂದರೆ ಕಾಯಕದ ಪರಿಕರಗಳನ್ನು ಮತ್ತು ತಮ್ಮ ಅರಿವುಗೊಂಡ ಮನದ ಲೌಕಿಕ ಬದುಕಿನ ಜೀವ ನಾನುಭವವನ್ನು ಹದವರಿತು ಬಳಸಿಕೊಂಡಿದ್ದು ಅಲ್ಲದೇ ಶರಣ ತತ್ವದ ಮಹತ್ವದ ಮಾರ್ಗದರ್ಶನ ದಲ್ಲಿ ಅರ್ಥಪೂರ್ಣವಾಗಿ ಅವು ಮಿಳಿತವಾಗಿದ್ದು ದು ನಿಜಕ್ಕೂ ಕಾರಣವಾಗಿದೆ. ಈ ಮಾತುಗಳಲ್ಲಿ ಇರುವ ಸಾಕ್ಷೀ ಪ್ರಜ್ಞೆಯ ಬೆಳಕಲ್ಲಿ ಪ್ರಸ್ತುತ ಶರಣ ಹೊಡೆಹುಲ್ಲ ಬಂಕಣ್ಣರ ಈ ಮೇಲಿನ ವಚನವನ್ನ ಈಗ ಇಲ್ಲಿ ಅನುಸಂಧಾನವನ್ನು ಮಾಡೋಣ.
*ನೆಲ್ಲು; ನೆಲದಲ್ಲಿಯೆ ಅಳಿದು, ಹುಲ್ಲಿನ ಒಡಲಲ್ಲಿಯೆ ಜನಿಸಿ*, *ಆ ಹುಲ್ಲ*
*ತನ್ನೊಳಗಿರಿಸಿದ ಭೇದವ ನೋಡಾ.*
ಅತ್ಯಂತ ಸರಳ ಸುಂದರವಾದ ರೀತಿಯಲ್ಲಿ ಘನ ತರವಾದ ಸಂದೇಶವನ್ನ ನೀಡಲು ನಿಂತ ಅತ್ಯಂತ ವಿನಯವಂತನ ಹಾಗೆ ತೋರುವ ಈ ವಚನದ ಪ್ರಾರಂಭದಲ್ಲಿರುವ ಈ ಸಾಲುಗಳು ಕಣ್ಣುಗಳಿಗೆ
ಭೌತಿಕವಾಗಿ ರೂಪಕದ ದೃಷ್ಟಾಂತ ಭಾಷೆಯಲ್ಲಿನ ಒಂದು ಸಂಗತಿಯ ಹಾಗೆ ಕಾಣುವಂತೆ ಇದ್ದರೂ ಕೂಡಾ ಅದು ಒಟ್ಟಿನಲ್ಲಿ ಹೃನ್ಮನಗಳ ಸದ್ಭಾವಕ್ಕೆ ಮಾತ್ರ ಜೀವಂತವಾಗಿರುವಂತೆ ತೋರಿದ ಭಾಸ ವಾಗಿ ತೊನೆಯುತ್ತದೆ! ನೆಲ್ಲು; ಅಂದ್ರೆ ಈ ಭತ್ತವು ಭೂಮಿಗೆ ಬಿದ್ದು ನೆಲ ಮತ್ತು ನೀರ ಸಾಂಗತ್ಯದಲ್ಲಿ ಮೊಳೆತು ಕವಚ ಕಳಚಿ ತಾನಳಿದು ಅಲ್ಲಿಯೇ ತಾ ಹುಲ್ಲಾಗಿ ಹುಟ್ಟಿ ಅರಳಿದ ಮೇಲೆಯೂ ಅಂದರೆ ಅದು ಮತ್ತೆ ಅದರೊಳಗೆ ತಾನು ನೆಲ್ಲಾಗಿ ಹುಟ್ಟಿ ಬರುತ್ತದೆ. ಸೃಷ್ಟಿಯಲ್ಲಿರುವ ಈ ಹುಟ್ಟು ಸಾವಿನ ಜೀವನ ಚಕ್ರದ ವೈಚಿತ್ರ್ಯವನ್ನ ಇಲ್ಲಿ ಭತ್ತದ ಹುಲ್ಲಿ ನಲ್ಲಿ ಇರಿಸಿದ ಭೇದವನ್ನು ಶರಣ ಹೊಡೆಹುಲ್ಲ ಬಂಕಣ್ಣನವರು ಕಂಡುಕೊಂಡು ಹಾಗೂ ಸ್ವತಃ ಬೆರಗುಗೊಂಡು ಪ್ರಸ್ತುತ ವಚನದ ಮೂಲಕ ಇಲ್ಲಿ ಕಂಡರಿಸುತ್ತಾರೆ ಎನಿಸುತ್ತದೆ.
*ತನ್ನೊಡಲಳಿದಲ್ಲಿ; ನೆಲ್ಲೂ ಅಲ್ಲ, ಹುಲ್ಲೂ ಅಲ್ಲ!* *ಆ ಹೊಡೆಯಲ್ಲಿ ಅಡಗಿತ್ತೆಂದರಿಯೆ,*
*ಕುಂಭೇಶ್ವರಲಿಂಗದಲ್ಲಿ #ಜಗನ್ನಾಥನನರಿಯಲಾಗಿ.*
ಹೀಗೆ ಹೇಳಿ, ನೆಲ್ಲು ಹುಲ್ಲಾಗಿ ಹುಟ್ಟಿ ಸಾಯುವ ಮತ್ತೆ ಅಲ್ಲಿಯೇ ಪುನರಪಿ ಹುಟ್ಟಿ ಬದುಕುವ ಈ ಬೆರಗಿನ ಜೀವನದ ರಹಸ್ಯದ ಗುಟ್ಟನ್ನು ಇಂಥಹ ಸುಂದರ ದೃಷ್ಟಾಂತದ ಮೂಲಕವಾಗಿ ಅದನ್ನಿಲ್ಲಿ ಅರ್ಥಪೂರ್ಣವಾಗಿಯೇ ವಚನಕಾರರು ಕಟ್ಟಿಕೊ ಟ್ಟಿದ್ದಾರೆ. ಈ ವಿಷಯದ ವಿಚಾರವನ್ನು ನೀಲ ನಕ್ಷೆ ಯಾಗಿಟ್ಟುಕೊಂಡು ಇಲ್ಲಿ ಶರಣ ಹೊಡೆಹುಲ್ಲ ಬಂಕಣ್ಣರು; ಶರಣ ತತ್ವದ ಬಹು ಮುಖ್ಯ ಸಂಗತಿ ಯಾದ ಪುನರ್ಜನ್ಮ ನಿರಾಕರಣೆ ಸಿದ್ಧಾಂತದಂತೆ 'ಇದೇ ಜನ್ಮ ಕಡೆ' ಎಂಬ ತಾತ್ವಿಕ ವಿಚಾರವನ್ನು ಈ ಸುಂದರ ವಚನದ ಸಾಲಿನಲ್ಲಿ ಸಮೀಕರಿಸಿ ಇಲ್ಲಿ ಅತ್ಯಂತ ಸೂಕ್ಷ್ಮವಾಗಿ ಹೇಳುತ್ತಾರೆಂದು ಅನಿಸು ತ್ತದೆ. ಇನ್ನೂ ಮುಂದುವರಿದ ವಿಚಾರದಂತೆ, ಭತ್ತ ತನ್ನೊಡಲಳಿದಲ್ಲಿ; ನೆಲ್ಲೂ ಅಲ್ಲ, ಹುಲ್ಲೂ ಅಲ್ಲ ! ಆ ಹೊಡೆಯಲ್ಲಿ ಅಡಗಿತ್ತೆಂದು ಹೇಳು ಮೂಲಕ ಭೂತ ಭವಿಷ್ಯದ ಭ್ರಮೆಯ ಕಿತ್ತೊಗೆದು, ಶರಣ ಬಂಕಯ್ಯ ವರ್ತಮಾನದ ಪ್ರಸ್ತುತ ಬದುಕನ್ನು; 'ಹೊಡೆ'ಗೆ ಹೋಲಿಸಿ, ಅದನ್ನ ಸರಿಯಾಗಿ ಅರಿತು ಅದರಂತೆ ಅರ್ಥಪೂರ್ಣವಾಗಿ ಆಚರಣೆ ಮಾಡಿ, ಈ ಹುಟ್ಟನ್ನು ಸಾಫಲ್ಯಗೊಳಿಸಿಕೊಂಡಲ್ಲಿಯೇ ಈ ಜೀವನದ ಸಾರ್ಥಕ್ಯವಿದೆ ಎಂಬ ಶರಣರ ತತ್ವ ಸಿದ್ಧಾಂತದವನ್ನಿಲ್ಲಿ ಪರೋಕ್ಷವಾಗಿ ಪ್ರತಿಬಿಂಬಿಸು ತ್ತಾರೆಂದು ಅನಿಸುತ್ತದೆ
ಸಂಕ್ಷಿಪ್ತ ಪರಿಚಯ;
ಹೊಡೆಹುಲ್ಲ ಬಂಕಣ್ಣರು ೧೨ನೆಯ ಶತಮಾನದ ಶರಣ. ಹುಲ್ಲನ್ನು ತಂದು ಮಾರಿ ದಾಸೋಹವನ್ನು ಮಾಡುವದು ಇವರ 'ಕಾಯಕ'. ಈ ವಚನಾಂಕಿತ ಗ್ರಹಿಸಿದರೆ ಇದು ತಿಳಿಯುತ್ತದೆ. ಅಪ್ಪ ಬಸವಾದಿ ಶರಣರ ಸಂಪರ್ಕದಿಂದಿವರು ತಮ್ಮರಿವು ಮತ್ತು ಅನುಭಾವವನ್ನ ಸಂವೃದ್ಧಿ ಮಾಡಿಕೊಳ್ಳುವುದರ ಜೊತೆಗೆ ಅನುಭವ ಮಂಟಪದ ೭೭೦ ಅಮರ ಗಣಂಗಳ ಪೈಕಿ ಒಬ್ಬ ವಚನಕಾರ ಶರಣರಾಗಿ, 'ಕುಂಭೇಶ್ವರಲಿಂಗದಲ್ಲಿ ಜಗನ್ನಾಥ ಸಾಕ್ಷಿಯಾಗಿ' ಎಂಬ ವಚನಾಂಕಿತದಲ್ಲಿ ವಚನಗಳನ್ನು ರಚಿಸಿದ ಇವರ ಹತ್ತೇ ವಚನಗಳು ದೊರೆತಿವೆ. ಅವುಗಳು; ಪ್ರಸಾದ ತತ್ವದ ಮಹತ್ವ, ಶುದ್ಧ ಕಾಯಕ ತತ್ವದ ಮಹತ್ವ, ಜೊತೆಗೆ ಶರಣರ ಸ್ತುತಿಗಳಿದ್ದು ಕೆಲ ವಚನಗಳು ಬೆಡಗಿನ ರೂಪದಲ್ಲಿವೆ. ಇವರ ಬಗ್ಗೆ ಯಾವ ಮಾಹಿತಿಯೂ ಸಧ್ಯಕ್ಕೆ ಉಪಲಭ್ಯವಿಲ್ಲ.
ಅಳಗುಂಡಿ ಅಂದಾನಯ್ಯ