ರಾಯಸದ ಮಂಚಣ್ಣ

ದಿನಕ್ಕೊಂದು ವಚನ ಅನುಸಂಧಾನ
ಊರ ವಂಕದ ಹೊರಗಿದ್ದು, ಮನೆಯ
ಬಾಗಿಲ ಕಾಣೆನೆಂದು ಅರಸುವನಂತೆ,
ಇದಿರಿನಲ್ಲಿ ತೋರುವ ಕುರುಹ ಮರದು
ಅರಿವನೊಳಕೊಂಡೆನೆಂಬುವನಂತೆ,
ಜಂಬುಕ ಶಸ್ತ್ರದ ಫಳವ ನುಂಗಿ ಜಂಬೂದ್ವೀಪವೆಲ್ಲಾ ಪ್ರಳಯವಾಯಿತ್ತು ಎಂದಡೆ, ಅದು ಚಂದವೇ ಜಾಂಬೇಶ್ವರಾ.
ರಾಯಸದ ಮಂಚಣ್ಣ ವಚನ ಅನುಸಂಧಾನ
ಹನ್ನೆರಡನೇ ಶತಮಾನದ ಸಾಮಾಜಿಕ ವ್ಯವಸ್ಥೆ ಜೊತೆಗೆ ಧಾರ್ಮಿಕ ಆಚರಣೆಗಳ ರಕ್ಷಣೆಯನ್ನು ರಾಜಪ್ರಭುತ್ವ ಬೆಂಬಲಿಸುತ್ತಿದ್ದಂಥಾ ಕಾಲಘಟ್ಟದ ಲ್ಲಿ ಅಪ್ಪಬಸವಣ್ಣನವರು ಅಂದಿನ ಆ ಶ್ರೇಣೀಕೃತ
ವ್ಯವಸ್ಥೆಯ ತರತಮಭಾವದ ವಿರುದ್ಧ ಸಿಡಿದೆದ್ದು; ಆ ಶೋಷಣೆಯ ಕಬಂಧ ಬಾಹುವಿನಲ್ಲಿ ಸಿಲುಕಿ
ಬಂಧಿಯಾಗಿ ಬಸವಳಿದಿದ್ದ ಅತ್ಯಂತ ಕೆಳವರ್ಗದ ದುಡಿಯುವ ಜನರ ಶತ ಶತಮಾನದ ಸ್ವಾತಂತ್ರ್ಯ ಹೀನ ದಯನೀಯ ಪರಸ್ಥಿತಿಯ ಮಡುವಿನಲ್ಲಿ ಮಹಿಳೆಯರು ಪರಾವಲಂಬಿ ಬದುಕಿನ ಜೀವನ ನಡೆಸುತ್ತಿದ್ದಾಗ ಇವರೆಲ್ಲರ ಶ್ರೇಯೋಭಿವೃದ್ಧಿಯ ಕನಸನ್ನು ತಮ್ಮ ಕಂಗಳಲ್ಲಿ ಹಾಗೂ ಹೃನ್ಮನದಲ್ಲಿ ತುಂಬಿಕೊಂಡು, ಸರ್ವಸಮಾನತೆಯ ಆತ್ಮೀಯ ಸಮಬಾಳಿನ ಮಾದರಿಯದಾದಂಥಾ ಜನಗಣದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಮ್ಮ ಆಳವಾದ ಮಾನವೀಯ ಚಿಂತನೆಯ ವೈಚಾರಿಕತೆ ಹಾಗೂ ನೈತಿಕ ಪ್ರಜ್ಞೆಯ ಮೂಲಕ ತಮ್ಮಲ್ಲಿಯೇ ರೂಪಿಸಿ ಇಂಬಿಟ್ಟುಕೊಂಡಿದ್ದ ಅಪ್ಪ ಬಸವಣ್ಣರು ಬಿಜ್ಜಳನ ಆಸ್ಥಾನದಲ್ಲಿ ಮಹಾಮಂತ್ರಿಯ ಪದವಿಯನ್ನು
ಅಲಂಕರಿಸಿದಾಗ; ಸಾಮಾನ್ಯ ವ್ಯಕ್ತಿಯ ಎದೆಯ ಆಳದಲ್ಲಿನ ಅಜ್ಞಾನದ ಕಗ್ಗತ್ತಲೆಯ ಭಯವನ್ನು ಕಳೆದುಕೊಳ್ಳಲು ಅಪ್ಪ ಬಸವಣ್ಣನವರು ಅಂತಹ ಮನಸುಗಳ ಕೈಗೆ ಇಷ್ಟಲಿಂಗ ಎಂಬ ಕೈಗನ್ನಡಿಯ ಕರುಣಿಸಿ ಕೊಟ್ಟು ಅರಿವಿನ ಗುರುಮಾರ್ಗವನ್ನು ತೋರಿಸಿದರು. ಅಪ್ಪ ಬಸವಣ್ಣನವರ ಈ ಅರಿವು ಆಚರಣೆಯ ಆಂದೋಲನದ ಪ್ರವಾಹಕ್ಕೆ ಎಲ್ಲಾ ಧರ್ಮ ವರ್ಗ ವರ್ಣಗಳ ಜನರೂ ಆಸಕ್ತಿ ತೋರಿ ಬಂದು ಸೇರಿ ಒಂದು ಕ್ರಾಂತಿಕಾರಿ ಆಂದೋಲನ ಮಾದರಿಯ ಬದಲಾವಣೆಯನ್ನೇ ತಂದರು. ಈ ಮೇಲಿನ ವಚನ ರಚಿಸಿದ ರಾಯಸದ ಮಂಚಣ್ಣ
ಮೇಲ್ವರ್ಗದ ಮೂಲದಿಂದ ಬಂದು ಶರಣರಾದ ವರು. ಅಪ್ಪ ಬಸವಣ್ಣನವರ ಪತ್ರವ್ಯವಹಾರವನ್ನ ನೋಡಿಕೊಳ್ಳುವ ಕಾಯಕವನ್ನ ನಿರ್ವಹಿಸುತ್ತಿದ್ದ
ರಾಯಸದ ಮಂಚಣ್ಣನವರು, ಇಷ್ಟಲಿಂಗ ನಿಷ್ಠೆಗೆ ಬದ್ಧರಾಗುವರು. ಪ್ರಸ್ತುತ ಈ ಮೇಲಿನ ವಚನದ ಮೂಲಕ ಅವರು ಅದನ್ನೇ ಪ್ರತಿಪಾದಿಸಿರುವರು. ಈ ವಚನದ ಅನುಸಂಧಾನವನ್ನು ಮಾಡಿ ಹೆಚ್ಚಿನ ವಿಚಾರ ಪರಿಶೀಲಿಸಿ ತಿಳಿಯಲು ಪ್ರಯತ್ನ ಮಾಡಿ ನೋಡೋಣ.
*ಊರ ವಂಕದ ಹೊರಗಿದ್ದು,* *ಮನೆಯ*
*ಬಾಗಿಲ ಕಾಣೆನೆಂದು* *ಅರಸುವನಂತೆ,*
*ಇದಿರಿನಲ್ಲಿ ತೋರುವ ಕುರುಹ ಮರದು*
*ಅರಿವನೊಳಕೊಂಡೆನೆಂಬುವನಂತೆ,*
ಪ್ರಸ್ತುತ ವಚನವನ್ನು ಅರ್ಥೈಸಿಕೊಳ್ಳಲು ಮಾತ್ರ ಎರಡು ಭಾಗ ಮಾಡಿಕೊಳ್ಳಲಾಗಿದೆ. ಈ ಮೇಲಿನ ಸಾಲುಗಳು ವಚನದ ಮೊದಲ ಭಾಗದಲ್ಲಿಯವು. ಇಲ್ಲಿ ಅರ್ಥಪೂರ್ಣವಾದ ಮತ್ತು ಸುಂದರವಾದ ಎರಡು ರೂಪಕದಲ್ಲಿ "ಇಷ್ಟಲಿಂಗ"ದ ಕುರಿತಂತೆ ತಮ್ಮ ನಿಲುವು ಮತ್ತು ಸದಾಶಯವನ್ನ ಇಂಬಿಟ್ಟು ಕೊಟ್ಪಿದ್ದಾರೆ. ಅದೆಂದ್ರೆ ಒಬ್ಬ ವ್ಯಕ್ತಿ ತಾನು ಇನ್ನೂ ಊರ ಸೀಮೆಯಾಚೆ ದೂರದಲ್ಲಿ ಇರುವಾಗಲೇ ತನ್ನ ಮನೆಯ ಬಾಗಿಲನ್ನು ತಡಕಾಡಿ ಹುಡುಕಾಡು ವ ಆತುರದ ಹುಚ್ಚುತನದ ವರ್ತನೆಯ ಕುರಿತು ಹಾಗೂ ಇನ್ನೊಬ್ಬನು ತನ್ನ ಎದುರಿನಲ್ಲೇ ಇರುವ ವಿಶ್ವಚೈತನ್ಯದ ಕುರುಹು ಆಗಿರುವ ಇಷ್ಟಲಿಂಗದ ಸಾಧನೆ ಮಾಡುವ ಮೂಲಕ ಅರಿತುಕೊಳ್ಳಲಾರ ದೇನೇ ಸುಮ್ಮನೆ ಲಿಂಗ ಕೈಯಲ್ಲಿ ಹಿಡಿದು ತಾನು ಅರಿವನ್ನು ಪಡೆದುಕೊಂಡಿದ್ದೇನೆ ಎಂದು 'ಡೌವ್ವು' ಮಾಡುವವನಂತೆ ಹೀಗೆ ಇಲ್ಲಿರುವ ಈ ಎರಡೂ ರೂಪಕಗಳ ಗಮನಿಸಿದರೆ, ಅವರ ಆತುರದಲ್ಲಿ ಇರುವ ಅರಿವುಗೇಡಿತನದ ಬಗ್ಗೆ ಗಮನಿಸಿ ಇಲ್ಲಿ ವಚನಕಾರ ತೀವ್ರವಾಗಿ ಅವರ ನಡೆಯನ್ನು ಟೀಕೆ ಮಾಡುವ ಮೂಲಕ "ಅರಿವು" ಹಾಗೂ ಅದರ "ಆಚರಣೆ" ಎಷ್ಟು ಮುಖ್ಯವಾದ ಸಂಗತಿಗಳಾಗಿವೆ ಎನ್ನುವುದನ್ನು ಇಲ್ಲಿ ಪ್ರತಿಪಾದಿಸುವರು.
ಜಂಬುಕ ಶಸ್ತ್ರದ ಫಳವ ನುಂಗಿ ಜಂಬೂದ್ವೀಪವೆಲ್ಲಾ ಪ್ರಳಯವಾಯಿತ್ತು ಎಂದಡೆ, ಅದು ಚಂದವೇ ಜಾಂಬೇಶ್ವರಾ.
ವಚನದ ಎರಡನೇ ಭಾಗದ ಈ ಸಾಲುಗಲ್ಲಿರುವ ವಿಷಯ ಏನೆಂದರೆ; ನರಿಯು ಇಟ್ಪಿಯ ಹಣ್ಣನ್ನು ತಿಂದುದರ ಪರಿಣಾಮ ಕಾರಣದಿಂದಾಗಿ ಅದರ ತಲೆ ತಿರುಗಿ ಅದ್ದಕ್ಕೆ ಜಂಬೂದ್ವೀಪ(ಭಾರತ)ವೇ ಎಲ್ಲಾ ಪೂರ್ತಿಯಾಗಿ ಮುಳುಗುವ ಪ್ರಳಯವೇ ಆಗುತ್ತಿದೆ! ಎಂಬಂತೆ ಇಷ್ಟಲಿಂಗ ಸಾಧನೆ ಇಲ್ಲದೇ ಇರುವವ ಅಲ್ಪಸ್ವಲ್ಪ ಇಷ್ಟಲಿಂಗದ ಬಗ್ಗೆ ತಿಳಿದಿರು ವುದನ್ನೇ ತಾನು ಎಲ್ಲವನ್ನೂ ತಿಳಿದುಕೊಂಡಿರುವೆ ಎಂದು ಬೊಗಳೆ ಬಿಡುವುದನ್ನು ಇಟ್ಟಿಯ ಹಣ್ಣು ತಿಂದ ನರಿ, ಇಡೀ ದೇಶವೇ ಪ್ರಳಯವಾಯಿತು ಎನ್ನುವಂಥಾ ಈ ದೃಷ್ಟಾಂತದಲ್ಲಿರುವ ಅವರನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ. ಈ ಸಂಗತಿಯನ್ನೇ ವಚನಕಾರರು ಇಲ್ಲಿ ತಮ್ಮ ಇಷ್ಟಲಿಂಗ ದೈವವಾದ ಜಾಂಬೇಶ್ವರನಿಗೆ ಶರಣ ಮಾರ್ಗದಲ್ಲಿದ್ದುಕೊಂಡ ಇಂಥವರೆಲ್ಲಾ ಹೀಗೆ ಒಣಮಾತುಗಳನ್ನು ಆಡುವ ಹಾಗೂ ಜಂಭ ಮಾಡುವ ಹುಚ್ಚಾಟ ಚೆಂದವೇ!? ಎಂದು ಶರಣ ತತ್ವಗಳಾದಂಥಾ 'ಅರಿವು' ಮತ್ತು 'ಆಚಾರ'ಗಳ ಸಾಂಗತ್ಯದ ಅಗತ್ಯದ ಬಗ್ಗೆ ಗಮನ ಹಾಗೂ ಗೌರವವ ತೋರಿಸಿ ಜನಮಾನಸವನ್ನು ಸೆಳೆಯುವಂಥ ಮಾತುಗಳನ್ನವರು ಹೇಳುವರು.
ಅಳಗುಂಡಿ ಅಂದಾನಯ್ಯ