ಬಸವೇಶ್ವರ ಆಸ್ಪತ್ರೆಯಲ್ಲಿ ಅಸ್ತಮಾ ರೋಗಿಗಳಿಗೆ ವಿಶೇಷ ಶಿಬಿರ
ಬಸವೇಶ್ವರ ಆಸ್ಪತ್ರೆಯಲ್ಲಿ ಅಸ್ತಮಾ ರೋಗಿಗಳಿಗೆ ವಿಶೇಷ ಶಿಬಿರ
ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಅಸ್ತಮಾ ದಿನದ ಅಂಗವಾಗಿ ಬಸವೇಶ್ವರ ಆಸ್ಪತ್ರೆ ಹಾಗೂ ಅಸೋಸಿಯೇಷನ್ ಆಫ್ ಫಿಜಿಸಿಯನ್ ಆಫ್ ಇಂಡಿಯಾ (API) ಕಲಬುರ್ಗಿ ಇವರ ಸಹಯೋಗದಲ್ಲಿ ಅಸ್ತಮಾ ರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ವಿಶೇಷ ಶಿಬಿರದಲ್ಲಿ ಸುಮಾರು 120 ಕ್ಕಿಂತಲೂ ಹೆಚ್ಚು ಅಸ್ತಮಾ ರೋಗಿಗಳು ಭಾಗವಹಿಸಿ ಸಂಬಂಧಿಸಿದ ತಪಾಸಣೆ ಮಾಡಿಕೊಂಡರು. ಆಸ್ಪತ್ರೆಯ ಸಾಮಾನ್ಯ ರೋಗ ವಿಭಾಗದ ಹೋರರೋಗಿಗಳ ಘಟಕ 3 ರಲ್ಲಿ ರೋಗಿಗಳಿಗೆ ಆಸ್ಪತ್ರೆಯ ಸಾಮಾನ್ಯ ರೋಗ ವಿಭಾಗದ ಮುಖ್ಯಸ್ಥರಾದ ಡಾ ಸುರೇಶ್ ಹರಸೂರ ಹಾಗೂ ಶ್ವಾಸಕೋಶ ತಜ್ಞ ವೈದ್ಯರಾದ ಡಾ ವೇಣುಗೋಪಾಲ್ ಮತ್ತು ಅನೇಕ ತಜ್ಞ ವೈದ್ಯರು ಅಸ್ತಮಾ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ರೋಗಿಗಳಿಗೆ ಉಚಿತ ಸಲಹೆ ನೀಡಿ, ಉಚಿತ ರಕ್ತ ತಪಾಸಣೆ ಹಾಗೂ ಚಿಕಿತ್ಸೆ ನೀಡಿದರು. ಇಷ್ಟೆ ಅಲ್ಲದೆ ಭಾಗವಹಿಸಿದ ರೋಗಿಗಳಿಗೆ ಸ್ಪೈರೋಮೆಟ್ರೀ ಪರೀಕ್ಷೆ ಮತ್ತು ಪಿ ಎಫ್ ಟಿ ಪರೀಕ್ಷೆ ಮಾಡಿ ಅಸ್ತಮಾ ಹಾಗೂ ಶ್ವಾಸಕೋಶ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಆರಂಭಿಕ ಹಂತದಲ್ಲಿ ರೋಗವನ್ನು ಗುರುತಿಸಿ ಕಾಯಿಲೆ ತಡೆಯಬೇಕಾದರೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಲಾಯಿತು.
ಈ ಶಿಬಿರದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ್ ದೇಶಮುಖ, ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಶರಣಗೌಡ ಪಾಟೀಲ್ ಉಪ ಡೀನ್ ಡಾ ವಿಜಯಕುಮಾರ ಕಪ್ಪಿಕೇರಿ, ವೈದ್ಯಕೀಯ ಅಧೀಕ್ಷಕರಾದ ಡಾ ಮಲ್ಲಿಕಾರ್ಜುನ ತೇಗನೂರ, ಆಡಳಿತ ಅಧಿಕಾರಿಗಳಾದ ಡಾ ಎಂ ಆರ್ ಪೂಜಾರಿ ಎಪಿಐ ಕಲಬುರ್ಗಿ ಜಿಲ್ಲಾ ಅಧ್ಯಕ್ಷರಾದ ಡಾ ಶರಣ ನಂದ್ಯಾಳ ಭಾಗವಹಿಸಿದ್ದರು ಇದೆ ಸಂದರ್ಭದಲ್ಲಿ ಶಿಬಿರಕ್ಕೆ ಭೇಟಿ ನೀಡಿದ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ನಡೆಯುತ್ತಿರುವ ಶಿಬಿರಗಳು ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದ್ದು ನಮ್ಮ ಭಾಗದ ರೋಗಿಗಳಿಗೆ ಬಸವೇಶ್ವರ ಆಸ್ಪತ್ರೆ ಆರೋಗ್ಯ ಸಂಜೀವಿನಿಯಾಗಿ ಪರಿವರ್ತನೆಯಾಗಿದೆ ಎಂದು ಹೇಳಿದರು
