ಶಿವಲೆಂಕ ಮಂಚಣ್ಣ

(ಚಿತ್ರ ಸಾಂದರ್ಭಿಕ ಮಾಹಿತಿ ಅಂತರ್ಜಾಲ ಕೃಪೆ)
ದಿನಕ್ಕೊಂದು ವಚನ ಅನುಸಂಧಾನ
ಧರೆಯ ಕೃಷಿ ಶುದ್ಧವಾಗಿಯಲ್ಲದೆ,
ಸಸಿ ಶುದ್ಧವಿಲ್ಲ.
ಅರ್ಚನೆ ಅರ್ಪಿತ ಮೂರ್ತಿಧ್ಯಾನದಿಂದಲ್ಲದೆ, ಚಿತ್ತ ಶುದ್ಧವಿಲ್ಲ.
ಇದು ನಿಶ್ಚಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.
ಶಿವಲೆಂಕ ಮಂಚಣ್ಣ ವಚನ ಅನುಸಂಧಾನ
ಶೈವಾಚರಣೆಯ ಶಿವನು ಸಾಕಾರನು ಸಂಸಾರ ವಂದಿಗನು. ಆದರೆ, ಶರಣರ ಪರಿಕಲ್ಪನೆಯಲ್ಲಿನ ಶಿವನ ಸ್ವರೂಪದ ರೀತಿಯೇ ಬೇರೆ ತೆರನಾದದ್ದು. ಅದು ಅಗಮ್ಯ ಅಗೋಚರ ಅಪ್ರತಿಮವಾಗಿದ್ದು, ನಿರಂಜನವೂ ನಿರಾಕಾರವೂ ಆದ ಶೂನ್ಯ ಅದು ಅಸೀಮ ಬಟ್ಟ ಬಯಲು. ಇದನ್ನು ಅರಿಯಲು; ಅಪ್ಪ ಬಸವಣ್ಣನವರು ಬಹುಕಾಲದಿಂದಲೂ ಚಿಂತನೆಯ ಮಾಡಿದ ಅರಿವಿನ ಪರಿಭಾವನೆಯ ಫಲಕ್ಕೆ ದಕ್ಕಿದ್ದೇ ಇಷ್ಟೇ ಇಷ್ಟು ಪುಟ್ಟದಾದಂಥಹ 'ಇಷ್ಟಲಿಂಗ' ಸ್ವರೂಪ. ಇದು ನಿರಾಕಾರ ಬಯಲು ಸ್ವರೂಪದ ಶಿವನ ಕುರುಹು ಮಾತ್ರ. ಆದರೆ ಇದೇ ದೇವರಲ್ಲಾ ಎಂದು ಹೇಳಿದ್ದಲ್ಲದೇ, ಇಂತಹ ಈ ಇಷ್ಟಲಿಂಗದ ಮುಖೇನವೇ ಬಯಲು ಸ್ವರೂಪಿ ಶಿವನನ್ನು ಅರಿಯುವ ರೀತಿಯು ಹೇಗಿರಬೇಕು ಎನ್ನುವುದರ ಬಗ್ಗೆ ಅಪ್ಪ ಬಸವಣ್ಣನವರೊಂದಿಗೆ ಅನೇಕ ಮಂದಿ ಶರಣರು ಸೇರಿ ತಮ್ಮ ವಚನಗಳ ಮೂಲಕ ವಿಧ ವಿಧವಾಗಿ ನಿರೂಪಿಸಿ ತಿಳಿಸಿದ್ದಾರೆ ಅಂತಹ ಒಂದು ವಚನ ಈ ಮೇಲಿನ ಶಿವಲೆಂಕ ಮಂಚಣ್ಣ ಶರಣರದ್ದಾಗಿದೆ. ಅದನ್ನು ಈಗ ಇಲ್ಲಿ ಅನುಸಂಧಾನ ಮಾಡುವ ಮೂಲಕ ವಿವರವಾಗಿ ಅಲ್ಲಿನ ವಿಷಯವನ್ನು ಅರಿತುಕೊಳ್ಳೋಣ.
ಧರೆಯ ಕೃಷಿ ಶುದ್ಧವಾಗಿಯಲ್ಲದೆ,
ಸಸಿ ಶುದ್ಧವಿಲ್ಲ.
ಇಲ್ಲಿ ವಚನಕಾರರು ಲೌಕಿಕ ಬದುಕಿನ ಒಂದು ಸುಂದರವಾದ ಚಿತ್ರಣವನ್ನು ನೀಡುವ ಮೂಲಕ ತಮ್ಮ ಮುಂದಿನ ವಚನದ ಅಲೌಕಿಕ ಆಶಯದ ಗ್ರಹಿಕೆಗೆ ಪೂರಕವಾಗಿ ತಳಹದಿಯನ್ನ ಹಾಕಿದ್ದಾರೆ
ಅದು ಏನೆಂದರೆ, ಕೃಷಿಕಾರನಾದ ರೈತನು ತನಗೆ ಒಳ್ಳೆಯ ಬೆಳೆಯು ಬರಬೇಕೆಂದು ಭೂಮಿಯನ್ನ ಹರಗಿ ಹಸನು ಮಾಡಿ ಉತ್ತಿ ಉಳುಮೆಯನ್ನು ಮಾಡುವ ಮೂಲಕ ಭೂಮಿಯ ಸ್ವಚ್ಛತೆಯನ್ನು ಚೆನ್ನಾಗಿ ಶುದ್ಧ ಮಾಡುತ್ತಾನೆ. ಮಳೆಯಾಗಿ ಬಿತ್ತಿದ ಬೀಜ ಮೊಳೆತು ಬೆಳೆಯಾಗಿ ಸಶಕ್ತವಾದ ಫಲವು ಆಗ ಶುದ್ಧವಾಗಿ ಕೈಗೆ ಬರುತ್ತದೆ. ಹೊಲವೇ ಶುದ್ಧ ಇಲ್ಲದಿದ್ದರೆ ಸಸಿಯೂ ಶುದ್ಧವಿಲ್ಲಾ ಎಂದಿದ್ದಾರೆ.
ಅರ್ಚನೆ ಅರ್ಪಿತ ಮೂರ್ತಿಧ್ಯಾನದಿಂದಲ್ಲದೆ, ಚಿತ್ತ ಶುದ್ಧವಿಲ್ಲ.
ಚೆನ್ನಾಗಿ ಕೃಷಿ ಚಟುವಟಿಕೆಯ ಮಾಡಿ ಶುದ್ಧವಾದ ಬೆಳೆಯನ್ನು ರೈತ ಪಡೆಯುವಂತೆ, ಇಷ್ಟಲಿಂಗದ ಸಾಧಕನು ಲಿಂಗಕ್ಕೆ ಅರ್ಚನೆಯನ್ನು ಮಾಡುತ್ತಾ ತನ್ನ ಸದ್ಭಕ್ತಿಯನ್ನ ಇಷ್ಟಲಿಂಗ ಮೂರ್ತಿಗೆ ಸಲ್ಲಿಸು ವ ಮೂಲಕವಾಗಿಯೇ ತನ್ನ ಚಿತ್ತ ಮತ್ತು ಭಾವವ ಪರಿಶುದ್ಧವಾಗಿ ಮಾಡಿ ಕೊಳ್ಳುವನು ಹಾಗೊಂದು ವೇಳೆ ಮಾಡದೇ ಹೋದರೆ ಅವನಿಗೆ ಚಿತ್ತ ಶುದ್ಧಿ ಇಲ್ಲ ಎಂದು ಹೇಳುವ ಮೂಲಕವಾಗಿ ಇಷ್ಟಲಿಂಗ ಸಾಧನೆಗೆ ಪರಿಶುದ್ಧವಾದ ಚಿತ್ತವು ಬೇಕೇ ಬೇಕು ಎಂದಿದ್ದಾರೆ.
ಇದು ನಿಶ್ಚಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.
ಮೇಲಿನೆರಡೂ ದೃಷ್ಟಾಂತಗಳು ಒಂದಕ್ಕೊಂದು
ಪೂರಕವಾಗಿರುವ ಮೂಲಕ ಪ್ರಸ್ತುತ ವಚನದ ಕೊನೆಯ ನಿರ್ಣಯಕ್ಕೆ ಬಳಸಿಕೊಂಡು ವಚನದ ಮುಖ್ಯ ಆಶಯವನ್ನು ವಚನಕಾರರಿಲ್ಲಿ ಸಾಧಿಸಿ ರುವರು. ಶುದ್ಧ ಬೆಳೆಗೆ ಭೂಮಿಯು ಶುದ್ಧವಾಗಿರ ಬೇಕಾತ್ತದೆಯೋ ಹಾಗೆ ಚಿತ್ತದ ಶುದ್ಧೀಕರಣಕ್ಕೂ ಇಷ್ಟಲಿಂಗದ ಅರ್ಚನೆ ಅರ್ಪಣೆ ಮುಖ್ಯವಾಗಿದೆ. ಈ ಎರಡೂ ಸಂಗತಿಯಲ್ಲಿನ ಸಾಧನೆಯು ಸಾಧ್ಯ ಆದಾಗ ಮಾತ್ರವೇ ತಮ್ಮಯ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನ್ನು ಅರಿವುದಕ್ಕೆ ಸಾಧ್ಯ
ಎಂದು ಹೇಳಿದ್ದಾರೆ. ತನ್ಮೂಲಕವೇ ಇಷ್ಟಲಿಂಗದ ಅರ್ಚನೆ ಮಾಡಿ ತನುಮನಭಾವಗಳನ್ನ ಅರ್ಪಣೆ ಮಾಡಿ ಚಿತ್ತ ಮನ ಭಾವದ ಶುದ್ಧೀಕರಣವನ್ನು
ಮಾಡಿಕೊಳ್ಳುವುದು ಅತ್ಯಗತ್ಯವಾದ ಕ್ರಿಯೆಯಾ
ಗಿದೆ ಆವಾಗ ಮಾತ್ರ ಬಯಲು ಶಿವನ ಐಕ್ಯತೆಯ ಸಾಧಿಸಲು ಸಾಧ್ಯವೆಂದು ಸ್ಪಷ್ಟವಾಗಿ ಹೇಳಿದ್ದಾರೆ.
ಸಂಕ್ಷಿಪ್ತ ಪರಿಚಯ
ಪಂಡಿತ ಪರಂಪರೆಗೆ ಸೇರಿದ ಶರಣ ಶಿವಲೆಂಕ ಮಂಚಣ್ಣರ ಮೂಲಸ್ಥಳ ಕಾಶಿ. ಅವರು ಕಲ್ಯಾಣ ಪಟ್ಟಣಕ್ಕೆ ಬಂದು ಶರಣರಾಗುತ್ತಾರೆ. ಅನುಭವ ಮಂಟಪದಲ್ಲಿನ ೭೭೦ ಅಮರ ಗಣಂಗಳ ಪೈಕಿ ಇವರೂ ಒಬ್ಬ ವಚನಕಾರ ಶರಣ. ವಚನಗಳನ್ನು "ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ" ಎಂಬ ಅಂಕಿತದಲ್ಲಿ ರಚಿಸಿದ್ದು ೧೩೨ ವಚನಗಳು ಈಗ ಲಭ್ಯವಾಗಿವೆ. ಪಂಡಿತನ ಕಾಯಕವು ಇವರದ್ದು. ಪ್ರಸಿದ್ಧ ವಚನಕಾರಶರಣರಾದ ಉರಿಲಿಂಗದೇವ ಇವರ ಶಿಷ್ಯ ಎನ್ನಲಾಗಿದೆ. ಶಿವ ಪುರಾಣಗಳಲ್ಲಿ; ಇವರು ಪರವಾದಿಗಳನ್ನು ವಾದದಲ್ಲಿ ಸೋಲಿಸಿ ಶಿವಾಧಿಕ್ಯವನ್ನು ಮೆರೆಯುತ್ತ, ಹಲವು ಕಡೆ ಸಂಚ ರಿಸಿದ ಸಂಗತಿ ಉಕ್ತವಾಗಿದೆ. ಅಷ್ಟಾವರಣ, ಷಟ ಸ್ಥಲ, ವ್ರತಾಚಾರಗಳ ನಿರೂಪಣೆ ಇವರ ವಚನಗ ಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಡಾಂಭಿಕ ಗುರುಗಳ ಟೀಕೆ, ಕಾಯಕ ದಾಸೋಹಗಳ ವಿವರ ಣೆ ಕಂಡು ಬಂದಿದೆ. ಇವರೊಬ್ಬ ಒಳ್ಳೆಯ ಚಿಂತಕ ಇವರ ಸಾಮಾಜಿಕ ವಿಡಂಬನೆಯಲ್ಲಿ ಮೊನಚಿದೆ ಎಂದು ಗುರುತಿಸಲಾಗಿದೆ.
ಅಳಗುಂಡಿ ಅಂದಾನಯ್ಯ