ಅವಿರತ ಅಂಕಿತದ ಯೋಧ ದೇವೇಂದ್ರಪ್ಪ ಅವಂಟಿ

ಸಾಧನೆಗೂ ಸಮರ್ಪಣೆಗೆ ದರ್ಪಣವಾದ ದೇವೇಂದ್ರಪ್ಪ ಅವಂಟಿ
ಲೇಖನ -ಶರಣಗೌಡ ಪಾಟೀಲ ಪಾಳಾ
ಶ್ರೀ ದೇವೇಂದ್ರಪ್ಪ ಅವಂಟಿ ಒಬ್ಬ ವ್ಯಕ್ತಿ ತನ್ನ ಬದುಕನ್ನು ಮಾಧ್ಯಮ ಕ್ಷೇತ್ರಕ್ಕೂ, ಸಮಾಜಮುಖಿ ಸೇವೆಗೂ ಅರ್ಪಿಸಿದಾಗ, ಅವನ ಹೆಸರೇ ಒಂದು ಪಾಠವಾಗುತ್ತದೆ. ಅಂತಹ ಸರಳ ಸಜ್ಜನಿಕೆ ಸಹೃದಯಿ ಸದಾ ಕ್ರಿಯಾಶೀಲ ವ್ಯಕ್ತಿತ್ವ, ಬಡವರ ಮೇಲಿನ ಪ್ರೀತಿ ಸಮಾಜದ ಕಳಕಳಿಯನ್ನು ಹೊಂದಿರುವರು ದೇವೇಂದ್ರಪ್ಪ ಅವಂಟಿ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದ ಈ ಮಣ್ಣಿನ ಮಗ, ಪತ್ರಿಕೋದ್ಯಮದ ಲೋಕದಲ್ಲಿ ಪ್ರಾಮಾಣಿಕತೆ, ಪರಿಶ್ರಮ, ಸಾಮಾಜಿಕ ಬದ್ಧತೆ ಮತ್ತು ಶ್ರದ್ಧೆಗೀಡಾದ ನಾಮಧೇಯ. 07 ಸೆಪ್ಟೆಂಬರ್ 1968 ರಂದು ಮಲ್ಲಮ್ಮ ಮತ್ತು ಬಸಣ್ಣ ಅವಂಟಿ ದಂಪತಿಯವರ ಹಿರಿಯ ಮಗನಾಗಿ ಜನಿಸಿದರು. ಇವರು ಬಾಲ್ಯದಲ್ಲೇ ಬಡತನದ ಬಿರುಕುಗಳಲ್ಲಿ ವಿದ್ಯೆಯ ಬೆಳಕು ಹುಡುಕಿದ ಹೋರಾಟದ ಹೆಜ್ಜೆ ಗುರುತು ಇವರದು. . ಪತ್ನಿ ಪ್ರಭಾವತಿ ಅವರ ಜೀವನದ ಸಹಯಾತ್ರಿಯಾಗಿ, ಉಮಾಶಂಕರ್ ಮತ್ತು ಗಂಗಾಂಬಿಕಾ ಎಂಬ ಮುದ್ದಾದ ಮಕ್ಕಳು ಅವರ ಕುಟುಂಬದ ಗುರಿಯ ಬೆಳಕು
ವಿದ್ಯಾಭ್ಯಾಸ
ಇವರು ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಾದ ಬೆನಕನಹಳ್ಳಿಯಲ್ಲಿ ಪೂರೈಸಿ, ನಂತರ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಆಶ್ರಯದಲ್ಲಿ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣದೊಂದಿಗೆ ಸಂಸ್ಕಾರಗಳನ್ನು ಪಡೆದುಕೊಂಡರು. ನಂತರ ಕಲಬುರಗಿಯಲ್ಲಿ ಡಿಪ್ಲೋಮಾ ಇನ್ ಪ್ರಿಂಟಿಂಗ್ ಮತ್ತು ಟೆಕ್ನಾಲಜಿಯಲ್ಲಿ ತೊಡಗಿದರು.
ಪತ್ರಿಕೋದ್ಯಮಕ್ಕೆ ಅರ್ಪಿತ ಜೀವನ
1988ರಲ್ಲಿ ‘ಚಿಂತಕ’ ಪತ್ರಿಕೆಯಲ್ಲಿ ಅವರ ಪತ್ರಿಕಾ ಜೀವನ ಶುರುವಾಯಿತು. ಶೀಲಾ ತಿವಾರಿ ಸಂಪಾದಕತ್ವದ ಈ ಪತ್ರಿಕೆಯಲ್ಲಿ ಅವರು ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದರು. ನಂತರ ‘ಜೈಭೀಮ ಗದೆ’ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿ, ನಂತರ 2002ರಲ್ಲಿ 'ಉತ್ತರ ಕರ್ನಾಟಕ ಕನ್ನಡಿಗ' ಪತ್ರಿಕೆಯಲ್ಲಿ ನಾಗರಾಜ ಕಿರಣಗಿ ಅವರ ಆಹ್ವಾನಕ್ಕೆ ಸ್ಪಂದಿಸಿ ಸೇರ್ಪಡೆಗೊಂಡು ಇಂದುವರೆಗೂ ತನ್ನ ಸತ್ಯನಿಷ್ಠಾ ಕಾರ್ಯತತ್ಪರತೆ ಮೂಲಕ ಮಾಧ್ಯಮ ಲೋಕದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದಾರೆ.
ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆಗೆ ಪಥವಿಚಲನ
ಪತ್ರಿಕೋದ್ಯಮಕ್ಕೆ ಶಿಸ್ತು, ಸಮಯ ಪ್ರಜ್ಞೆ, ಉನ್ನತ ತತ್ವಚಿಂತನೆ, ನೈತಿಕತೆ, ಧೈರ್ಯ ಮತ್ತು ಸಮರ್ಪಣೆಯ ಪಾಠವನ್ನು ನೀಡಿದ ಇವರು, ಶ್ರಮದ ಬದಲು ಸುಲಭ ದಾರಿಯನ್ನು ಹುಡುಕದೆ, ನಿಷ್ಠೆಯಿಂದ ಹಲವಾರು ಸವಾಲುಗಳನ್ನು ಎದುರಿಸಿ ತನ್ನ ಕೆಲಸವನ್ನು ದೈವೀಯ ಸೇವೆಯಂತೆ ಕರೆದವರು.
ಸಮಾಜ ಸೇವೆಯ ಪಾತ್ರ
ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಕಾರ್ಯದರ್ಶಿ, ಸಿದ್ದಗಂಗಾ ನಗರ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪದಾಧಿಕಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯ ಮತ್ತು ವಿವಿಧ ಬ್ಯಾಂಕುಗಳಲ್ಲಿ ಸಂಸ್ಥಾಪಕ ಸದಸ್ಯರಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದಾರೆ.
ತರಬೇತಿಗಳು ಮತ್ತು ಪೋಷಣೆ
ವಿವಿಧ ಪತ್ರಿಕಾ ತರಬೇತಿಗಳಲ್ಲಿ ಭಾಗವಹಿಸಿ ತಮ್ಮ ಪತ್ರಿಕೋದ್ಯಮದ ಕೌಶಲ್ಯಗಳನ್ನು ಮತ್ತಷ್ಟು ಪಕ್ವಗೊಳಿಸಿಕೊಂಡಿರುವ ಇವರು, ಕಲಬುರಗಿ, ಬೀದರ, ಬೆಳಗಾವಿ, ಬೆಂಗಳೂರು ಸೇರಿದಂತೆ ಅನೇಕ ಸ್ಥಳಗಳಲ್ಲಿ ಮಾಧ್ಯಮ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡು ಮಾಧ್ಯಮ ಮೌಲ್ಯಗಳನ್ನು ಹೀರಿಕೊಂಡಿದ್ದಾರೆ.
ಸನ್ಮಾನಗಳು ಮತ್ತು ಗೌರವಗಳು
ಕಲಬುರಗಿಯ ಸುಲಫಲ ಮಠದ ಶ್ರೀಗಳಿಂದ ೨೦೦೭ರಲ್ಲಿ ಜ್ಞಾನರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ 'ವಾರದ ಸ್ಪೋಟ' ಪತ್ರಿಕೆವತಿಯಿಂದ ೨೦೦೯ರಲ್ಲಿ ರಾಷ್ಟ್ರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಕಾಶಿ ಜಗದ್ಗುರುಗಳಿಂದ
೨೦೦೯ರಲ್ಲಿ ಸುದ್ದಿ ಮಾಧ್ಯಮ ರತ್ನ ಪ್ರಶಸ್ತಿ ನೀಡಲಾಯಿತು. ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದ ಡಿವಿಜಿ ಅವರ ೧೨೫ನೇ ಜನ್ಮ ದಿನೋತ್ಸವ ಸಮಾರಂಭದ ಕಾರ್ಯಕ್ರಮದಲ್ಲಿ 'ಉತ್ತಮ ಪತ್ರಕರ್ತ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ತುಮಕೂರಿನ ಸಿದ್ದಗಂಗಾ ಮಠದ ಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಜಿಗಳಿಂದ ಸಂಘ ಸಿರಿ ಪ್ರಶಸ್ತಿ ಪ್ರದಾನ ಹಾಗೂ ಶ್ರೀಗಳಿಂದ ಆಶೀರ್ವಾದ, ಕಲಬುರಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕರುನಾಡು ಸೇವಾ ಬಂಧು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಲಬುರಗಿ ಗೆಳೆಯರ ಬಳಗದಿಂದ (ಸೇವಾ ಸ್ವರೂಪಿ) ಅಭಿನಂದನಾ ಪತ್ರ ನೀಡಿ ಸನ್ಮಾನ ವಚನೋತ್ಸವ ಪ್ರತಿಷ್ಠಾನದಿಂದ ಸನ್ಮಾನ. ಕಲಬುರಗಿಯ ಇನ್ಕಿಲಾಬ್-ಎ-ಡೆಕ್ಕನ್ ಉರ್ದು ದಿನಪತ್ರಿಕೆಯ ದಶಮಾನೋತ್ಸವ ಸಮಾರಂಭದಲ್ಲಿ ಉತ್ತಮ ಪತ್ರಕರ್ತ ಎಂದು ಪ್ರಶಸ್ತಿ ನೀಡಿ ಸನ್ಮಾನ. ಸೇಡಂನಲ್ಲಿ ಜರುಗಿದ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತಮ ಪತ್ರಕರ್ತ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
35 ವರ್ಷಗಳ ಮಾಧ್ಯಮ ಕ್ಷೇತ್ರವನ್ನು ಗುರುತಿಸಿ 2019ನೇ ಸಾಲಿನ ,ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು 13 ಮಾರ್ಚ್ 2023 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನೀಡಿ ಗೌರವಿಸಿದರು.ಹೀಗೆ ಪುರಸ್ಕಾರಗಳ ಪಟ್ಟಿಯನ್ನು ನಾವೇ ಎಣಿಸಲು ಆಗದು.
ಶ್ರೀ ದೇವೇಂದ್ರಪ್ಪ ಅವಂಟಿ ಅಂದರೆ ನಡೆಸಿದ ನಿಜವಾದ ಪತ್ರಿಕೋದ್ಯಮ, ನಡವಳಿಕೆಯಲ್ಲಿ ಸತ್ಯನಿಷ್ಠೆ, ಸಮಾಜಮುಖಿ ಮನಸ್ಸು ಮತ್ತು ಶ್ರೀ ಶಿವಕುಮಾರ ಸ್ವಾಮಿಜಿಗಳ ಅನಂತ ಶ್ರದ್ಧೆಗೆ ಪಾತ್ರನಾದ ಶಿಷ್ಯ. ಮಾಧ್ಯಮವನ್ನು ಅಸ್ತ್ರವಲ್ಲ, ಅಂತರಾತ್ಮದ ಧ್ವನಿಯೆಂದು ನಂಬಿದ ಇವರು, ಹಲವು ತಲೆಮಾರಿಗೆ ಪ್ರೇರಣೆಯಾಗಿದೆ. ಅವರು ಹೆಜ್ಜೆ ಹಾಕಿದ ನಡಿಗೆ, ಅವರ ಲೇಖನಗಳ ತೀವ್ರತೆ ಮತ್ತು ಜೀವನದ ಸರಳತೆ ಎಲ್ಲರಿಗೂ ಪಾಠ.