ಬಿಜೆಪಿ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ ಪಕ್ಷ; ಕಲಬುರಗಿಗೆ ನೈತಿಕತೆ ಬೋಧನೆ ಮಾಡುವ ಹಕ್ಕಿಲ್ಲ" – ಸಚಿವ ಶರಣಪ್ರಕಾಶ ಪಾಟೀಲ ವಾಗ್ದಾಳಿ

"ಬಿಜೆಪಿ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ ಪಕ್ಷ; ಕಲಬುರಗಿಗೆ ನೈತಿಕತೆ ಬೋಧನೆ ಮಾಡುವ ಹಕ್ಕಿಲ್ಲ" – ಸಚಿವ ಶರಣಪ್ರಕಾಶ ಪಾಟೀಲ ವಾಗ್ದಾಳಿ
ಕಲಬುರಗಿ, ಮೇ 25: ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶರಣಪ್ರಕಾಶ ಪಾಟೀಲ ಅವರು, "ಹಿಂದಿನ ಬಿಜೆಪಿ ಸರ್ಕಾರ ಬಳ್ಳಾರಿಯಲ್ಲಿ ಗಣಿಗಾರಿಕೆಯಿಂದ ಜನರ ನಂಬಿಕೆಗೆ ಮೋಸ ಮಾಡಿದ್ದು ಜನ ಮರೆತಿಲ್ಲ. ಇಂತಹ ಪಕ್ಷ ಈಗ ರಿಪಬ್ಲಿಕ್ ಆಫ್ ಕಲಬುರಗಿ ಎಂದು ಮಾತನಾಡುವುದು ನೈತಿಕತೆಯ ಕೊರತೆಯ ಸಂಕೇತ," ಎಂದು ವಾಗ್ದಾಳಿ ನಡೆಸಿದರು.
"ಬಳ್ಳಾರಿ ಜೋತೆಗೆ ನ್ಯಾಯ ಮಾಡದೇ, 'ರಿಪಬ್ಲಿಕ್ ಆಫ್ ಬಳ್ಳಾರಿ' ಎಂದು ರೂಪಿಸಿದ್ದ ಬಿಜೆಪಿ ನಾಯಕರು ಈಗ ಕಲಬುರಗಿಗೆ ಬಂದು ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಆತ್ಮಪರಿಶೀಲನೆಗೆ ದಾರಿ ಮಾಡಬೇಕು," ಎಂದು ಸಚಿವರು ಅಭಿಪ್ರಾಯಪಟ್ಟರು.
"ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಅವರನ್ನು ಕಂಡರೆ ಭಯವಾಗುತ್ತದೆ. ಅವರ ಕೆಲಸ ಮತ್ತು ಜನಸೇವೆ ನೋಡಲು ಬಿಜೆಪಿ ಸಹಿಸಲಾರದು. ಇದು ಅವರ ನಿರಂತರ ಪ್ರತಿಭಟನೆಗಳಿಂದ ಸ್ಪಷ್ಟವಾಗಿದೆ," ಎಂದು ಶರಣಪ್ರಕಾಶ ಪಾಟೀಲ ಹೇಳಿದರು.
ಛಲವಾದಿ ನಾರಾಯಣ ಸ್ವಾಮಿ ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದು, ತಕ್ಷಣವೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಕ್ರಿಯಿಸಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
"ಇಂತಹ ತೊಂದರೆಕಾರಿ ಭಾಷಣ ಮಾಡಿದ ವ್ಯಕ್ತಿಗೆ ಹೂವಿನ ಹಾರ ಹಾಕಬೇಕಾ? ಬಿಜೆಪಿ ನಾಯಕರಿಗೆ ಸತ್ಯದ ಹಾದಿಯ ಬದಲು ಪ್ರಚಾರದ ರಾಜಕಾರಣವೇ ಅಭ್ಯಾಸವಾಗಿದೆ," ಎಂದು ಸಚಿವರು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನಿಜ್ ಫಾತಿಮಾ, ಜಗದೇವ ಗುತ್ತೇದಾರ ಹಾಗೂ ಕಾಂಗ್ರೆಸ್ ನಾಯಕ ಸುಭಾಷ್ ರಾಠೋಡ ಉಪಸ್ಥಿತರಿದ್ದರು.