ಜೀವನದಲ್ಲಿ ಯಶಸ್ವಿಯಾಗಲು ಗುರು ಮತ್ತು ಗುರಿ ಅಗತ್ಯ : ಜಗನ್ನಾಥ ಡಿ. ಶೇರಿಕಾರ

ಜೀವನದಲ್ಲಿ ಯಶಸ್ವಿಯಾಗಲು ಗುರು ಮತ್ತು ಗುರಿ ಅಗತ್ಯ : ಜಗನ್ನಾಥ ಡಿ. ಶೇರಿಕಾರ
ವೀರಾಂಜನೇಯ ಶಿಕ್ಷಣ, ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶೈಕ್ಷಣಿಕ ಸೇವೆ ಶ್ಲಾಘನೀಯ
ಚಿಂಚೋಳಿ: ಮಕ್ಕಳು ಜೀವನದಲ್ಲಿ ಯಶಸ್ಸು ಗಳಿಸಲು ಉನ್ನತವಾದ ಗುರಿ ಹಾಗೂ ಗುರುವಿನ ಮಾರ್ಗದರ್ಶನ ಬೇಕೆಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲ್ಲೂಕು ಘಟಕದ ಸಭಾಪತಿಗಳಾದ ಪತ್ರಕರ್ತರಾದ ಜಗನ್ನಾಥ ಡಿ. ಶೇರಿಕಾರ ತಿಳಿಸಿದರು.
ಅವರು ಸಂಸ್ಥೆಯ ಚಂದ್ರಮ್ಮ ನವಾಜರೆಡ್ಡಿ ಹಿರಿಯ ಪ್ರಾಥಮಿಕ ಶಾಲೆಯ 11ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ತೆಲಂಗಾಣ ಗಡಿಗೆ ಹೊಂದಿಕೊಂಡ ತಾಲ್ಲೂಕಿನ ಭಕ್ತಂಪಳ್ಳಿಯಲ್ಲಿ ವೀರಾಂಜನೇಯ ಶಿಕ್ಷಣ, ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿ ಹಿರಿಯ ಪ್ರಾಥಮಿಕ ಶಾಲೆ ತೆರೆದು ಸುಮಾರು 280 ಕ್ಕೂ ಹೆಚ್ಚು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಲ್ಲಿಸುತ್ತಿರುವ ಶೈಕ್ಷಣಿಕ ಸೇವೆಯನ್ನು ಅವರು ಶ್ಲಾಘಿಸಿದರು.
ಶಿಕ್ಷಣ ಸಂಸ್ಥೆ ಸ್ಥಾಪಿಸುವುದು ಸುಲಭದ ಕೆಲಸ ಆದರೆ ಗ್ರಾಮೀಣ ಪ್ರದೇಶ ಅದರಲ್ಲೂ ಗಡಿಭಾಗದಲ್ಲಿ ಕನ್ನಡ ಮಾಧ್ಯಮದ ಶಾಲೆ ತೆರೆದು ಮುನ್ನಡೆಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ವೆಂಕಟರೆಡ್ಡಿ ಪಾಟೀಲ ಮಾತನಾಡಿ, 28 ಮಕ್ಕಳಿಂದ ಆರಂಭವಾದ ಶಾಲೆಯಲ್ಲೀಗ 283 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಮುಂಬರುವ ವರ್ಷದಲ್ಲಿ ಪ್ರೌಢ ಶಾಲೆ ತೆರೆಯುವ ಇಂಗಿತ ವ್ಯಕ್ತಪಡಿಸಿದರು.
ಸಂಸ್ಥೆಯ ಜಂಟಿ ಕಾರ್ಯದರ್ಶಿ ರಮೇಶ ಗೌಳಿ, ಸದಸ್ಯರಾದ ಡಾ. ಹರ್ಷವರ್ಧನರೆಡ್ಡಿ, ಶಿಕ್ಷಣ ಪ್ರೇಮಿಗಳಾದ ಬಸಯ್ಯಸ್ವಾಮಿ, ಚಿಂಚೋಳಿಯ ವರ್ತಕರಾದ ಸುನೀಲ ಗೌಳಿ, ಸಿಆರ್ಪಿ ಶಿವಪುತ್ರಪ್ಪ ದೊಡ್ಮನಿ ಮಕ್ಕಳಿಗೆ ಪ್ರಶಸ್ತಿ ಪತ್ರಗಳು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ಮೆಡಲ್ಗಳನ್ನು ವಿತರಿಸಿದರು.
ಮಮತಾ ಹಡಪದ ಸ್ವಾಗತಿಸಿದರು. ಮುಖ್ಯ ಶಿಕ್ಷಕ ರೊಬೆನ್, ಜೀವನಕುಮಾರ ನಿರೂಪಿಸಿದರು. ಕೃಷ್ಣರಾಜ ಮುನ್ನೂರು ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವರು. 500ಕ್ಕೂ ಹೆಚ್ಚು ಪಾಲಕರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಶಾಲೆಯ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನನಡೆಯಿತು.