ದಾಸ ಸಾಹಿತ್ಯದ ಭಕ್ತಿ ರಸದೌತಣಕ್ಕೆ ಬಸವನಗುಡಿ ಸಾಕ್ಷಿ
ದಾಸ ಸಾಹಿತ್ಯದ ಭಕ್ತಿ ರಸದೌತಣಕ್ಕೆ ಬಸವನಗುಡಿ ಸಾಕ್ಷಿ
ಸಂಭ್ರಮದಿಂದ ಸಂಪನ್ನಗೊಂಡ ‘ದಾಸ ಭಜನೋತ್ಸವ–2026’ ಹಾಗೂ ರಾಜ್ಯಮಟ್ಟದ ಭಜನಾ ಸ್ಪರ್ಧೆ
ಬೆಂಗಳೂರು: ಬಸವನಗುಡಿಯ ಮಾಡೆಲ್ ಹೌಸ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಸತ್ಯಂ ಶಿವಂ ಸೇವಾ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ‘ದಾಸ ಭಜನೋತ್ಸವ–2026’ ಹಾಗೂ ರಾಜ್ಯಮಟ್ಟದ ಭಜನಾ ಸ್ಪರ್ಧೆ ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ಯಶಸ್ವಿಯಾಗಿ ನೆರವೇರಿತು.
ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿಪ್ರಧಾನ ಚಟುವಟಿಕೆಗಳು ಜರುಗಿ, ಭಕ್ತರಿಗೆ ಆಧ್ಯಾತ್ಮಿಕ ಅನುಭವದೊಂದಿಗೆ ದಾಸ ಸಾಹಿತ್ಯದ ಭಕ್ತಿ ರಸದೌತಣವನ್ನು ಉಣಬಡಿಸಿದವು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪ್ರಸಿದ್ಧ ಜ್ಯೋತಿಷಿ ಡಾ. ಪ್ರಸನ್ನಾಚಾರ್ಯ ಕಟ್ಟಿ ಅವರು, “ದಾಸ ಸಾಹಿತ್ಯ ಮತ್ತು ಭಕ್ತಿಯು ಮಾನವನ ಜೀವನದಲ್ಲಿ ಮಾನಸಿಕ ಶಾಂತಿಯನ್ನು ನೀಡುವುದರ ಜೊತೆಗೆ ಧರ್ಮದ ಮಾರ್ಗವನ್ನು ತೋರಿಸುವ ಶಕ್ತಿಯನ್ನು ಹೊಂದಿದೆ” ಎಂದು ತಿಳಿಸಿದರು.
ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ಮಾತನಾಡಿ, “ನಮ್ಮ ಸನಾತನ ಸಂಸ್ಕೃತಿ ಹಾಗೂ ದಾಸ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಉಳಿಸಿ ಬೆಳೆಸುವಲ್ಲಿ ಇಂತಹ ಭಜನೋತ್ಸವಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಶ್ರೀಮಂತ ಭಕ್ತಿ ಪರಂಪರೆ ನಿರಂತರವಾಗಿ ಜೀವಂತವಾಗಿರುತ್ತದೆ” ಎಂದು ಅಭಿಪ್ರಾಯಪಟ್ಟರು.
12 ಭಜನಾ ತಂಡಗಳಿಂದ ಭಕ್ತಿಗಾನದ ವೈಭವ
ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾಗಿದ್ದ 12 ಪ್ರಮುಖ ಭಜನಾ ತಂಡಗಳು ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ, ದಾಸ ಸಾಹಿತ್ಯದ ಸುಶ್ರಾವ್ಯ ಕೀರ್ತನೆಗಳನ್ನು ಭಕ್ತಿಭಾವದಿಂದ ಪ್ರಸ್ತುತಪಡಿಸಿದವು. ತಂಡಗಳ ಗಾಯನ ಮತ್ತು ವಾದ್ಯವೈಭವ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಇದರೊಂದಿಗೆ ವಿಷ್ಣು ಸಹಸ್ರನಾಮ ಹಾಗೂ ಲಲಿತಾ ಸಹಸ್ರನಾಮ ಪಠಣ,ನೃತ್ಯ ವೈಭವ, ಸಾಂಪ್ರದಾಯಿಕ ಕೋಲಾಟ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಕ್ಕಳ ಹಾಗೂ ಸಾರ್ವಜನಿಕರ ಗಮನ ಸೆಳೆದ ದಾಸ ವೇಷ ಮತ್ತು ಕೃಷ್ಣ ವೇಷ ಸ್ಪರ್ಧೆಗಳು ಕೂಡ ವಿಜೃಂಭಣೆಯಿಂದ ನಡೆದವು.
ಭಜನಾ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಜನಾ ಮಂಡಳಿಗಳಿಗೆ ನಗದು ಬಹುಮಾನ ಹಾಗೂ ಫಲಕಗಳನ್ನು ವಿತರಿಸಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶ್ರೀಧರ್, ಬಡಗನಾಡು ಸಂಘದ ಅಧ್ಯಕ್ಷ ಚಿದಾನಂದ ಹಾಗೂ ಗಮಕಿ ಎಂ.ಆರ್. ರುಕ್ಮಿಣಿ ಅವರು ವಿಜೇತ ತಂಡಗಳನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹನುಮೇಶ್ ಯಾವಾಗಲ್,ಕಿರಣ್ , ರಾಘವೇಂದ್ರ, ಜಯತೀರ್ಥ, ಸಂಘಟಕಿ ಡಾ. ಮಾಲಿನಿ ಸೇರಿದಂತೆ ನೂರಾರು ಭಕ್ತಾದಿಗಳು ಭಾಗವಹಿಸಿ, ದಾಸ ಸಾಹಿತ್ಯದ ಭಕ್ತಿ ಮತ್ತು ಸಂಗೀತದ ಸೊಬಗನ್ನು ಆಸ್ವಾದಿಸಿದರು.
ಒಟ್ಟಾರೆ, ,ದಾಸ ಭಜನೋತ್ಸವ–2026’ ದಾಸ ಸಾಹಿತ್ಯ, ಭಕ್ತಿ, ಸಂಗೀತ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿತು.
