ದೆಹಲಿ ಸಂತ ಸೇವಾಲಾಲ್ ಜಯಂತಿಗೆ 5ಸಾವಿರಕ್ಕೂ ಹೆಚ್ಚು ಜನ ಭಾಗಿ ನಿರೀಕ್ಷೆ: ಡಾ.ಉಮೇಶ್ ಜಾಧವ್
ದೆಹಲಿ ಸಂತ ಸೇವಾಲಾಲ್ ಜಯಂತಿಗೆ 5ಸಾವಿರಕ್ಕೂ ಹೆಚ್ಚು ಜನ ಭಾಗಿ ನಿರೀಕ್ಷೆ: ಡಾ.ಉಮೇಶ್ ಜಾಧವ್
ಕರ್ನಾಟಕದಿಂದ ಎರಡು ವಿಶೇಷ ರೈಲು -ಕೇಂದ್ರ ರಾಜ್ಯ ಸಚಿವರ ಉಪಸ್ಥಿತಿ
ಕಲಬುರಗಿ : ಸಂತ ಶ್ರೀ ಸೇವಾಲಾಲರ 287 ನೆಯ ಜಯಂತಿ ಉತ್ಸವಕ್ಕೆ ಹಾಗೂ ಶ್ರೀ ರೂಪ ಸಿಂಗ್ ಮಹಾರಾಜ್ ಲಕ್ಕೀಶಾ ಬಂಜಾರ ಪುಣ್ಯ ತಿಥಿ ಕಾರ್ಯಕ್ರಮಕ್ಕೆ ಕರ್ನಾಟಕ ಸೇರಿದಂತೆ ದೇಶಾದ್ಯಂತದ 5 ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಂಸದರು ಹಾಗೂ ಅಖಿಲ ಭಾರತ ಬಂಜಾರ ಸೇವಾ ಸಂಘದ ಕಾರ್ಯಾಧ್ಯಕ್ಷರಾದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.
ಕರ್ನಾಟಕದಿಂದ ಈಗಾಗಲೇ ಎರಡು ವಿಶೇಷ ರೈಲು ಕಲಬುರಗಿ ಹಾಗೂ ಯಶವಂತಪುರದಿಂದ ಹೊರಟು ದೆಹಲಿಯ ಹಜರತ್ ನಿಜಾಮುದ್ದೀನ್ ಗೆ ತಲುಪಲಿದೆ. ಕರ್ನಾಟಕದಿಂದ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಈಗಾಗಲೇ ತೆರಳಿದ್ದಾರೆ ತೆಲಂಗಾಣದಿಂದ 2 ಸಾವಿರ ಜನ ಭಾಗವಹಿಸಲಿದ್ದಾರೆ. ಹೀಗೆ ದೇಶದ ವಿವಿಧ ರಾಜ್ಯಗಳಿಂದ 5ಸಾವಿರಕ್ಕೂ ಹೆಚ್ಚು ಬಂಜಾರ ಸಮುದಾಯದವರು ಭಾಗವಹಿಸುವ ರಾಜಧಾನಿ ದೆಹಲಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಯಂತಿ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಡಾ. ಜಾಧವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಯಂತಿ ಉತ್ಸವದ ಯಶಸ್ವಿಗಾಗಿ ದೆಹಲಿಯ ಗುರುನಾನಕ ಸಾಹಿ ಪ್ರಬಂಧಕ ಸಮಿತಿಯ ಪದಾಧಿಕಾರಿಗಳ ಜೊತೆ ನವ ದೆಹಲಿಯಲ್ಲಿ ಈಗಾಗಲೇ ಸಭೆ ನಡೆಸಲಾಗಿದ್ದು ನವ ದೆಹಲಿಯ ಜನಪಥ ರಸ್ತೆಯ ಡಾ. ಅಂಬೇಡ್ಕರ್ ಅಂತರಾಷ್ಟ್ರೀಯ ಸೆಂಟರ್ ನಲ್ಲಿ ಶನಿವಾರ ( ಫೆ.28) ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ ಕಾರ್ಯಕ್ರಮದಲ್ಲಿ ಆಗಮಿಸುವವರಿಗೆ ವಿಶೇಷ ವಸತಿ ಹಾಗೂ ಊಟದ ವ್ಯವಸ್ಥೆ ಕೈಗೊಳ್ಳಲಾಗಿದ್ದು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಹಾಗೂ ವಿವಿಧ ರಾಜ್ಯಗಳ ಮಂತ್ರಿಗಳು ಹಾಗೂ ಬಂಜಾರ ಸಮುದಾಯದ ನಾಯಕರು ಭಾಗವಹಿಸಲಿದ್ದಾರೆ ಎಂದು ಡಾ.ಉಮೇಶ್ ಜಾಧವ್ ಹೇಳಿದರು.
