ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಪತ್ರಿಕೆ ಗಳ ಪಾತ್ರ ಮಹತ್ವದ್ದು : ಡಾ. ಸದಾನಂದ ಪೆರ್ಲ

ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಪತ್ರಿಕೆ ಗಳ ಪಾತ್ರ ಮಹತ್ವದ್ದು : ಡಾ. ಸದಾನಂದ ಪೆರ್ಲ

ಸರ್ವಜ್ಞ ಕಾಲೇಜಿನಲ್ಲಿ ಪತ್ರಿಕಾ _ ವೈದ್ಯ _ ಸಿಎ ದಿನಾಚರಣೆ:

ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಪತ್ರಿಕೆ ಗಳ ಪಾತ್ರ ಮಹತ್ವದ್ದು : ಡಾ. ಸದಾನಂದ ಪೆರ್ಲ

ಕಲಬುರಗಿ: ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹಿರಿಯ ಮಾಧ್ಯಮ ತಜ್ಞರು ಹಾಗೂ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಹೇಳಿದರು.

   ಕಲಬುರಗಿಯ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ್ ಪಾಟೀಲ್ ಪದವಿಪೂರ್ವ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಜುಲೈ 1 ಮಂಗಳವಾರ ಏರ್ಪಡಿಸಿದ್ದ ವೈದ್ಯರು, ಲೆಕ್ಕಪರಿಶೋಧಕರು ಹಾಗೂ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಂತೆ ಪತ್ರಿಕಾ ರಂಗ ಕೂಡ ಸಮಾಜದ ಆಧಾರ ಸ್ತಂಭವಾಗಿ ಜಗತ್ತಿನ ವಿದ್ಯಮಾನವನ್ನು ತಿಳಿಯಲು ಮತ್ತು ಸಮಾಜದಲ್ಲಿ ನಡೆಯುತ್ತಿರುವ ತಪ್ಪು ಒಪ್ಪುಗಳನ್ನು ಸತ್ಯ ನಿಷ್ಠವಾಗಿ ಮತ್ತು ವಸ್ತುನಿಷ್ಠವಾಗಿ ಜನಮನಕ್ಕೆ ತಿಳಿಸುವ ದೊಡ್ಡ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಪತ್ರಿಕೆಗಳು ಅತ್ಯಂತ ಅಗತ್ಯ ವಾಗಿದೆ. ಸಂವಿಧಾನದ ಮೌಲ್ಯಗಳನ್ನು ಜನರಿಗೆ ಮುಟ್ಟಿಸಲು ಪತ್ರಿಕೆ ನಿರಂತರವಾಗಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ದಿನಕ್ಕೊಂದಾದರು ಪತ್ರಿಕೆಯನ್ನು ಓದಬೇಕು. ಸರ್ವಜ್ಞ ಶಿಕ್ಷಣ ಸಂಸ್ಥೆಯು ಮಾದರಿ ಶಿಕ್ಷಣ ಸಂಸ್ಥೆಯಾಗಿ ಪಾಠದೊಂದಿಗೆ ಜೀವನ ಶಿಕ್ಷಣ ಹಾಗೂ ಮೌಲ್ಯವನ್ನು ಬಿತ್ತುವ ಕೆಲಸ ಮಾಡುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಉತ್ತೇಜಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದು ಡಾ. ಪೆರ್ಲ ಹೇಳಿದರು.

   ಕಾರ್ಯಕ್ರಮದಲ್ಲಿ ದೇಶದ ಅತಿ ಕಿರಿಯ ಲೆಕ್ಕಪರಿಶೋಧಕರಾದ ಪ್ರಶಾಂತ್ ಬಿಜಾಸ್ಪುರ್ ಮಾತನಾಡಿ ಜೀವನದಲ್ಲಿ ಕಠಿಣ ಸವಾಲುಗಳು ಎದುರಾದರೂ ಧೈರ್ಯದಿಂದ ಎದುರಿಸುವ ಶಕ್ತಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಅದಕ್ಕಾಗಿ ನಿತ್ಯ ಜೀವನದಲ್ಲಿ ಯೋಗ, ವ್ಯಾಯಾಮ ಅಳವಡಿಸಿಕೊಂಡು ಒತ್ತಡ ರಹಿತ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾಲೇಜಿನ ಹಳೆ ವಿದ್ಯಾರ್ಥಿನಿ ಡಾ. ಪೂರ್ಣಿಮಾ ತಡಕಲ್ ಮಾತನಾಡಿ ಶ್ರದ್ದೆಯಿಂದ ಓದಿದರೆ ದೊಡ್ಡ ಸಾಧನೆಯನ್ನು ಮಾಡಬಹುದು. ಸರ್ವಜ್ಞ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಶಿಕ್ಷಕರು ನೀಡಿದ ಪ್ರೇರಣಾದಾಯಿ ಸಂಗತಿಗಳು ಗುರಿ ಮುಟ್ಟಲು ನೆರವಾಗಿವೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಮತ್ತೋರ್ವ ಹಳೆ ವಿದ್ಯಾರ್ಥಿ ಮಕ್ಕಳ ನರರೋಗ ತಜ್ಞರಾದ ಡಾ. ಪ್ರಸಾದ್ ಬಿಜಾಸ್ಪು ರ್ ಮಾತನಾಡಿ ಜೀವನದಲ್ಲಿ ಗುರಿ ತಲಪಲು ದಾರಿ ತೋರಿದ ಶಿಕ್ಷಕರು ಎಂದೆಂದಿಗೂ ಆದರ್ಶದ ವ್ಯಕ್ತಿಗಳು ಅವರ ಬೋಧನೆಯನ್ನು ಶ್ರದ್ಧೆಯಿಂದ ಅನುಸರಿಸಿದರೆ ಪರೀಕ್ಷೆಯಲ್ಲಿ ಹಾಗೂ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ನಂತರ ಪತ್ರಿಕಾರಂಗದ ಸಾಧನೆಗಾಗಿ ಡಾ. ಸದಾನಂದ ಪೆರ್ಲ, ವೈದ್ಯಕೀಯ ರಂಗದ ಡಾ. ಪೂರ್ಣಿಮಾ ತಡಕಲ್, ಲೆಕ್ಕಪರಿಶೋಧನಾ ಕ್ಷೇತ್ರದ ಸಿಎ ಪ್ರಶಾಂತ್ ಬಿಜಾಸ್ಪುರ್ ಮತ್ತು ಸಿಎ ಪ್ರಸಾದ್ ಬಿಜಾಸ್ಪುರ್ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚೆನ್ನಾ ರೆಡ್ಡಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯರಾದ ಪ್ರಶಾಂತ ಕುಲಕರ್ಣಿ, ವಿನುತಾ ಆರ್ .ಬಿ, ಪ್ರಭು ಗೌಡ, ಸಿದ್ದಾ ರೆಡ್ಡಿ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು. ಪ್ರಿಯಾ ಗಂಗೋತ್ರಿ ಪ್ರಾರ್ಥನೆ ಗೀತೆ ಹಾಡಿದರು. ಪ್ರಾಧ್ಯಾಪಕಿ ತ್ರಿವೇಣಿ ಭಾವಿ ಸ್ವಾಗತಿಸಿದರು. ಡಾ. ವಿದ್ಯಾವತಿ ಪಾಟೀಲ್ ನಿರೂಪಣೆ ಮಾಡಿದರು.