ಮುಕ್ತಾಯಕ್ಕ

ನಡೆದು ನಡೆದು ನಡೆಯ ಕಂಡವರು
ನುಡಿದು ನುಡಿದು ಹೇಳುತ್ತಿಹರೆ ?
ನುಡಿದು ನುಡಿದು ಹೇಳುವನ್ನಕ್ಕರ
ನಡೆದುದೆಲ್ಲಾ ಹುಸಿಯೆಂಬೆನು.
ಮಾತಿನ ಮಥನದಿಂದಾದ ಅರಿವು
ಕರಣ ಮಥನದಿಂದಾದುದಲ್ಲದೆ, ಅನುಪಮ ಸ್ವರಭೇದವಾದ ಪರಿ ಎಂತು ಹೇಳಾ?
ಇದಿರ ಗೆಲಬೇಕೆಂದು ನುಡಿದುಕೊಂಡಡೇನು,
ಮನಕ್ಕೆ ಮನವೆ ಸಾಕ್ಷಿಯಾಗಿ ನಿಃಪತಿಯಲ್ಲ ನೋಡಾ ?ಎನ್ನ ಅಜಗಣ್ಣತಂದೆ ಶಬುದಕ್ಕೆ
ಹೇಸಿ ಮುಗುದನಾದನು.
*ಮುಕ್ತಾಯಕ್ಕ*
ಬದುಕಿನ ಬಂಡಿಗೆ ಎರಡು ಗಾಲಿಗಳು ಇದ್ದಂತೆ,
ಅಪ್ಪ ಬಸವಾದಿ ಶರಣರದು ನಡೆನುಡಿ ಸಿದ್ಧಾಂತ. ಇದು ವ್ಯಕ್ತಿಯ ಅಂತರಂಗ ಮತ್ತು ಬಹಿರಂಗದ ಬದುಕು ಯಾವುದೇ ಬಡಿವಾರಗಳಿಲ್ಲದೆ ಅತ್ಯಂತ ಪರಿಶುದ್ಧವಾಗಿ ಸುಂದರವಾಗಿ ಸಹ್ಯವಾಗಿರಲು ಅಪೇಕ್ಷಿಸುವ ಹಾಗೂ ನಿರ್ದೇಶಿಸುವ ಶಿಸ್ತು ಬದ್ಧ ಬಹು ಮುಖ್ಯ ಶರಣರ ಸಿದ್ಧಾಂತವಾಗಿದೆ. ವ್ಯಕ್ತಿ ತನ್ನ ಅಂತರಂಗದ ನೆಲೆಯಲ್ಲಿ ಮಾಡಿದ ಸಾಧನೆ ಕುರಿತು ಬಹಿರಂಗದಲ್ಲಿ ತನ್ನ ಬಾಯಿಗೆ ಬಂದಂತೆ
ಬಡಾಯಿ ಕೊಚ್ಚಿಕೊಂಡರೆ ಅದನ್ನು ಶರಣರು ಒಪ್ಪುವುದಿಲ್ಲ. ಅದು ಮೂಗ ಕಂಡ ಕನಸಿನಂತೆ
ಇರಬೇಕು ಎನ್ನುವುದೇ ಶರಣರ ನಿಲುವು. ಇದನ್ನ ಬೆಂಬಲಿಸುವಂತೆ ಈ ಮೇಲಿನ ಮುಕ್ತಾಯಕ್ಕನ ವಚನ ಕಂಡುಬರುತ್ತದೆ. ಅದನ್ನು ಅನುಸಂಧಾನ ಮಾಡುವ ಮೂಲಕ ಹೆಚ್ಚಿನ ಒಳನೋಟಗಳನ್ನು ಈಗ ಪರಿಶೀಲಿಸಿ ನೋಡಿ ಕಂಡುಕೊಳ್ಳೋಣ.
*#ನಡೆದು ನಡೆದು ನಡೆಯ ಕಂಡವರು*
*ನುಡಿದು ನುಡಿದು ಹೇಳುತ್ತಿಹರೆ ?*
*ನುಡಿದು ನುಡಿದು ಹೇಳುವನ್ನಕ್ಕರ*
*ನಡೆದುದೆಲ್ಲಾ #ಹುಸಿಯೆಂಬೆನು.*
ಬದುಕಿನಲ್ಲಿ ಕೆಲವು ಜನರು ಅವರಿವರ ಸನ್ನುಡಿ ಕೇಳಿ ಸದ್ಗುಣಗಳ ತಿಳಿದು ಅವರ ಅನುಭವಗಳ ಬೆಳಕಿನಲ್ಲಿ ತಮ್ಮ ಬದುಕಿನ ಬಂಡಿಯನ್ನು ನಡೆಸಿ ತಮ್ಮ ನಡೆಯನ್ನು ಕಂಡವರು; ಅದನ್ನು ಒಂದಕ್ಕೆ
ಹತ್ತು ಮಾಡಿ ಹೇಳಿಕೊಂಡು ತಿರುಗಾಡ ಬಾರದು. ಹೀಗೆ ಬಾಯಿ ಮಾತಿನಲ್ಲಿ ತನ್ನ ನಡೆಯ ಬಡಾಯಿ ಕೊಚ್ಚಿಕೊಂಡು ಹೇಳಿದರೆ ಅದನ್ನು ಮುಕ್ತಾಯಕ್ಕ ಒಪ್ಪುವುದಿಲ್ಲ. ಹೀಗೆ ಹೇಳುತ್ತಾ ತಿರುಗುವವರು ತಮ್ಮ ನಡೆಯನ್ನು ಕಿರಿದು ಮಾಡಿ ಕೊಳ್ಳುವರು. ಅಷ್ಟೇ ಅಲ್ಲದೆ ಅವರು ನಡೆದುಕೊಂಡಿರುವುದೇ ಸುಳ್ಳು ಎನ್ನುವೆನು ಎಂದು ನೇರವಾಗಿ ಹೇಳಿತ್ತಾರೆ
ಇದರ ತಾತ್ಪರ್ಯ ಏನೆಂದರೆ; 'ಮಣ ಮಾತಿಗಿಂತ ಕಣ ಕೃತಿ ಲೇಸು' ಎನ್ನುವ ಜನಪದರ ಮಾತು ಈ ಸಂದರ್ಭದಲ್ಲಿ ಅರ್ಥ ಪಡೆದುಕೊಳ್ಳುತ್ತದೆ.
*#ಮಾತಿನ ಮಥನದಿಂದಾದ ಅರಿವು*
*ಕರಣ ಮಥನದಿಂದಾದುದಲ್ಲದೆ,* *ಅನುಪಮ ಸ್ವರಭೇದವಾದ ಪರಿ ಎಂತು #ಹೇಳಾ?*
ಮಾತಿನ ಚಕಮಕಿಯಲ್ಲಿ ಹುಟ್ಟಿದಂಥ ಕಿಡಿಯು ಬೆಳಕಾಗಲಾರದು. ಬುದ್ದಿ ಶಕ್ತಿಯ ಬಳಸಿಕೊಂಡು ಆಡಿದ ಮಾತಿನಲ್ಲಿ ಅರಿವಿನ ಮಿಂಚಿರಬಹುದು. ಆದರೆ ಈ ಮಿಂಚಿನ ಬೆಳಕಿನಲ್ಲಿ ಬದುಕಿನ ದಾರಿ ಯನ್ನ ಪೂರ್ತಿ ಸಾಗಿಸಲು ಸಾಧ್ಯವಿಲ್ಲ. ತನ್ನೊಳಗೆ
ಇರುವ ಚಿತ್ತ ಸುಚಿತ್ತವಾಗಿ ಚಿನ್ಮಯನ ಸಾಂಗತ್ಯ ಸಾಧಿಸಿದ್ರೆ ಮಾತ್ರ ಆರದ ಅರಿವಿನ ಬೆಳಕು ದಾರಿ ತೋರೀತು. ಇದನ್ನು ಸಾಧಿಸಿದವ 'ಕನಸು ಕಂಡ ಮೂಗ'ನಂತಾಗಿ ಇರುವನೆಂದು ಮುಕ್ತಾಯಕ್ಕನು ಇಲ್ಲಿ ಹೇಳುತ್ತಾರೆ.
*#ಇದಿರ ಗೆಲಬೇಕೆಂದು ನುಡಿದುಕೊಂಡಡೇನು,*
*ಮನಕ್ಕೆ ಮನವೆ ಸಾಕ್ಷಿಯಾಗಿ ನಿಃಪತಿಯಲ್ಲ ನೋಡಾ ?* *ಎನ್ನ ಅಜಗಣ್ಣತಂದೆ ಶಬುದಕ್ಕೆ*
*ಹೇಸಿ #ಮುಗುದನಾದನು.*
ತಮ್ಮ ಮುಂದಿರುವವನ ಮಾತಿಗೆ ಮಾತು ಬೆಳೆಸಿ ಆತನನ್ನು ಮಾತಿನಲ್ಲಿ ಸೋಲಿಸಿದಲ್ಲಿ ಅದರಿಂದ ಬಂದ ಪ್ರಯೋಜನ ಏನೂ ಇಲ್ಲ ಎನ್ನುವ ಶರಣೆ ಮುಕ್ತಾಯಕ್ಕ; ಮಾತಿಗೆ ಮಾತು ಮನಕ್ಕೆ ಮನವು ಸಾಕ್ಷಿ ಆದರೆ ಅದರಿಂದ ಆಧ್ಯಾತ್ಮಿಕ ಅರಿವು ಇಲ್ಲಿ ಸಾಧ್ಯವಾಗದು. ಇಂತಹ ಅಂತರಂಗದ ಆಧ್ಯಾತ್ಮ ಸಾಧ್ಯ ಆಗಬೇಕಾದರೆ; ಶಬ್ದಕ್ಕೆ (ಮಾತಿಗೆ) ಹೇಸಿ ಶಬ್ದ ಮುಗ್ಧನಾದ ಅಜಗಣ್ಣ ಯೋಗಿಯಂತೆ ಆತ ಆಗುವನು. ಆದ್ದರಿಂದ ಅಂತರಂಗದ ಅರಿವಿನ ಸಾಧನೆಯನ್ನ ಮಾಡಿದಾತ, ಅದನ್ನು ಮಾತನಾಡಿ ಹಾಳು ಮಾಡಿಕೊಳ್ಳದೇ ಅಜಗಣ್ಣನಂತೆ ಮೌನದ ಅನುಪಮ ಸಾಧನೆ ಮಾಡಿ ಸಿದ್ಧಿಯನ್ನು ಹೊಂದಿ ಮೌನವಾಗಿ ಇರಲು ಕಲಿಯಬೇಕೆಂದು ಇಲ್ಲಿ ಈ ವಚನದಲ್ಲಿ ಮುಕ್ತಾಯಕ್ಕ ಅತ್ಯಂತ ಸರಳವಾಗಿ ಅವಿರಳ ಜ್ಞಾನದ ಸತ್ಯ ಸಂಗತಿಯನ್ನ ಮನವರಿಕೆ ಮಾಡಿಕೊಟ್ಟಿರುವರು
*ಅಳಗುಂಡಿ ಅಂದಾನಯ್ಯ*