ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ: ಶಾಸಕ ಪ್ರಭು ಚವ್ಹಾಣ

ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ: ಶಾಸಕ ಪ್ರಭು ಚವ್ಹಾಣ
ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಟ್ಟಡ, ಶಿಕ್ಷಕರು ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಿ, ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲಿಸಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸಾರ್ವಜನಿಕರಲ್ಲಿ ಕೋರಿದರು.
ಔರಾದ(ಬಿ) ತಾಲ್ಲೂಕಿನ ಬೋರಾಳ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಜೂನ್ 5ರಂದು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಅಭಿವೃದ್ಧಿಗಳಿಗೆ ಶಿಕ್ಷಣವೇ ಆಧಾರಸ್ಥಂಬವೆಂದು ನಂಬಿರುವ ನಾನು ಶಾಸಕನಾದ ನಂತರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಪ್ರತಿ ಹಳ್ಳಿಯಲ್ಲಿ ಶಾಲೆ ನಿರ್ಮಿಸಿದ್ದು, ಅಗತ್ಯ ಸೌಕರ್ಯಗಳನ್ನು ಒದಗಿಸುತ್ತಿದ್ದೇನೆ ಎಂದು ಹೇಳಿದರು.
ಎಲ್ಲ ಕಡೆಗಳಲ್ಲಿ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದೆ. ಶಿಕ್ಷಣದ ಹೆಸರಿನಲ್ಲಿ ಬಡ ಜನರ ಸುಲಿಗೆ ನಡೆಯುತ್ತಿದೆ. ಹಣ ಪಾವತಿಸಲು ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿರುವುದು ನಾನು ಕಣ್ಣಾರೆ ನೋಡಿದ್ದೇನೆ. ಹಾಗಾಗಿ ಖಾಸಗಿ ಶಾಲೆಯವರ ಬಣ್ಣದ ಮಾತುಗಳಿಗೆ ಮರುಳಾಗಿ ಹಣ ಕಳೆದುಕೊಳ್ಳಬೇಡಿ. ಸಾಲ-ಸೂಲ ಮಾಡಿ ಜೀವನವನ್ನು ನರಕ ಮಾಡಿಕೊಳ್ಳಬೇಡಿ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಏನಾದೂ ಕೊರತೆಗಳಿದ್ದಲ್ಲಿ ನನ್ನ ಗಮನಕ್ಕೆ ತಂದು ಸರಿಪಡಿಸಿಕೊಳ್ಳಿ ಆದರೆ ಎಲ್ಲರೂ ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ದಾಖಲು ಮಾಡಿ ಎಂದು ಶಾಸಕರು ವಿನಂತಿಸಿದರು.
ಬೋರಾಳ ಗ್ರಾಮದಲ್ಲಿ ಹೊಸ ಸರ್ಕಾರಿ ಶಾಲೆ ನಿರ್ಮಿಸಬೇಕೆಂಬ ಬೇಡಿಕೆ ಬಂದ ಕೂಡಲೇ ತಕ್ಷಣ ಅನುದಾನ ಮಂಜೂರು ಮಾಡಿಸಿ ಕೆಲಸ ಆರಂಭಿಸಿದ್ದೇನೆ. ಈಗ ಉತ್ತಮ ಶಾಲೆ ನಿರ್ಮಾಣಗೊಂಡಿದೆ. ಹೊಸ ಶಾಲೆ ನಿರ್ಮಿಸುವಾಗ ಅಂದಾಜು ಪಟ್ಟಿಯಲ್ಲಿ ಕಡ್ಡಾಯವಾಗಿ ಶೌಚಾಲಯ ಸೇರಿಸುವಂತೆ ಹೇಳಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ ಹಾಗೂ ಸಸಿ ನೆಡುವ ಕಾರ್ಯಕ್ರಮ ತುರ್ತಾಗಿ ಆಗಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಾಕಷ್ಟು ಸರ್ಕಾರಿ ಶಾಲೆಗಳನ್ನು ರೆಜಿಸ್ಟ್ರೇಷನ್ ಆಗದ ಕಾರಣ ಜಮೀನು ಒತ್ತುವರಿಯಾಗುತ್ತಿದೆ. ಹಿಂದೆ ದಾನವಾಗಿ ನೀಡಿದ ಜಮೀನುಗಳನ್ನು ವಾರಸುದಾರರು ಪುನಃ ವಾಪಸ್ಸು ಪಡೆಯುತ್ತಿರುವ ಘಟನೆಗಳು ನಡೆಯುತ್ತಿವೆ. ಹಾಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಹಸೀಲ್ದಾರರು ಸಮನ್ವಯತೆಯಿಂದ ಎಲ್ಲ ಸರ್ಕಾರಿ ಶಾಲೆಗಳನ್ನು ರೆಜಿಸ್ಟ್ರೇಷನ್ ಮಾಡಲು ಕ್ರಮ ವಹಿಸಬೇಕು ಎಂದರು.
ಶಾಲೆಯ ಅಭಿವೃದ್ಧಿಗೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಶಿಕ್ಷಕರು ಮಾಡಿರುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಶಾಸಕರು, ಗ್ರಾಮದ ಹಿತದೃಷ್ಟಿಯಿಂದ ಎಲ್ಲ ವರ್ಗದ ಜನರನ್ನು ಒಳಗೊಂಡು ಒಂದು ಸಮೀತಿಯನ್ನು ರಚಿಸಬೇಕು. ಬ್ಯಾಂಕ್ ಖಾತೆಯನ್ನು ತೆರೆದು ಗ್ರಾಮಸ್ಥರಿಂದ ಹಣ ಸಂಗ್ರಹಿಸಿ ಸಂಕಷ್ಟದಲ್ಲಿದ್ದವರ ನೆರವಿಗೆ ಬಳಸಿಕೊಳ್ಳಬೇಕು. ಇದಕ್ಕೆ ನನ್ನ ಸಹಕಾರವೂ ಇರುತ್ತದೆ. ಈ ದಿಶೆಯಲ್ಲಿ ಗ್ರಾಮಸ್ಥರು ಮುಂದಾಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ರಂಗೇಶ, ಅರಣ್ಯ ಅಧಿಕಾರಿಗಳಾದ ಗಜಾನಂದ, ಮುದ್ದಸಿರ್ ಅಹ್ಮದ್, ಮುಖಂಡರಾದ ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ನಿರ್ಮಿತಿ ಕೇಂದ್ರದ ಮಹ್ಮದ್ ನಜೀರ್, ಮುಖ್ಯಗುರು ರಾಜೇಂದ್ರ, ಸರ್ಕಾರಿ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಪಂಢರಿ ಆಡೆ, ತಾಲ್ಲೂಕು ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ವಿಜಯಲಕ್ದ್ಮೀ ಪಾಟೀಲ, ಶಿವಶಂಕರ ಮಣಿಗೆಂಪೂರ, ಸಹದೇವ ಮಚಕೂರೆ, ನಿವರ್ತಿ ಪಾಟೀಲ, ಬಜರಂಗ ಪಾಂಡ್ರೆ, ಗಣಪತರಾವ ಮಚಕೂರೆ, ಪ್ರದೀಪ ಗುಬನೂರೆ, ದೇವಿದಾಸ ಪಾಂಡ್ರೆ, ಜಗನಾಥ ಮಚಕೂರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.