ಕೇಂದ್ರ ಕಾರಾಗೃಹ ಜಾಮರ್ ವ್ಯಾಪ್ತಿ ಕಡಿಮೆ ಮಾಡಿ: ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಮನವಿ
ಕೇಂದ್ರ ಕಾರಾಗೃಹ ಜಾಮರ್ ವ್ಯಾಪ್ತಿ ಕಡಿಮೆ ಮಾಡಿ: ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಮನವಿ
ಕಲಬುರಗಿ, ಆ. 3: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್ನ ವ್ಯಾಪ್ತಿಯನ್ನು ತಾಂತ್ರಿಕವಾಗಿ ಮರುಪರಿಶೀಲಿಸಿ, ಸುತ್ತಮುತ್ತಲಿನ ಗ್ರಾಮಗಳ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಹಾಗೂ ಕೇಂದ್ರ ಕಾರಾಗೃಹದ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾದ ಘಟನೆಯ ಬಳಿಕ ಜೈಲಿನ ಮೊಬೈಲ್ ಜಾಮರ್ನ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದ್ದು, ಇದರಿಂದ ನಂದಿಕೂರ್, ಸೀತನೂರ್, ಪಾಣೆಗಾಂವ್, ಶಿರನೂರ್, ಖಣದಾಳ ಹಾಗೂ ಇಟಗಾ (ಕೆ) ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗ್ರಾಮಗಳಲ್ಲಿ ಮೊಬೈಲ್ ಕರೆಗಳು ಸರಿಯಾಗಿ ಸಂಪರ್ಕವಾಗುತ್ತಿಲ್ಲ. ವಾಟ್ಸ್ಆಪ್, ಫೋನ್ಪೇ, ಗೂಗಲ್ಪೇ ಸೇರಿದಂತೆ ಡಿಜಿಟಲ್ ಸೇವೆಗಳು ಸ್ಥಗಿತಗೊಂಡಿದ್ದು, ಇಂಟರ್ನೆಟ್ ಸಂಪರ್ಕದ ಕೊರತೆಯಿಂದ ವಿದ್ಯಾರ್ಥಿಗಳು, ರೈತರು, ವ್ಯಾಪಾರಸ್ಥರು, ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಮನೆಯ ಮೇಲ್ಛಾವಣಿಗೆ ತೆರಳಿ ಮಾತನಾಡಲು ಪ್ರಯತ್ನಿಸಿದರೂ ಕರೆಗಳು ಮಧ್ಯದಲ್ಲೇ ಕಡಿತಗೊಳ್ಳುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜೈಲಿನ ಭದ್ರತೆಗೆ ಯಾವುದೇ ಧಕ್ಕೆಯಾಗದಂತೆ ಜಾಮರ್ನ ವ್ಯಾಪ್ತಿಯನ್ನು ತಾಂತ್ರಿಕವಾಗಿ ಮರುಪರಿಶೀಲಿಸಿ, ಗ್ರಾಮಗಳ ಮೊಬೈಲ್ ನೆಟ್ವರ್ಕ್ಗೆ ಅಡ್ಡಿಯಾಗದ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಉಭಯ ಅಧಿಕಾರಿಗಳಿಗೆ ಮನವಿ ಮೂಲಕ ಒತ್ತಾಯಿಸಲಾಗಿದೆ. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಸಂಗಮೇಶ ನಾಗನಹಳ್ಳಿ, ರವೀಂದ್ರ ವಿಭೂತಿ, ಸಂಗಣ್ಣಗೌಡ ಸೀತನೂರ್, ಮಹದೇವಪ್ಪ ಪಾಟೀಲ, ಸೈದ್ ಪಟೇಲ್, ನಾಗಣ್ಣಗೌಡ, ಉಮೇಶ್, ಶ್ರೀಕಾಂತ್ ಶಿರನೂರ್, ಖಾದರ್ ಪಟೇಲ್, ಅಮೃತ, ಬಸವರಾಜ, ಸೈಬಣ್ಣ, ಅಮೋಗಿ, ಸಂತೋಷ, ಹಣಮಂತರಾಯ, ಸಿದ್ದುಗೌಡ ಸೀತನೂರ್ ಸೇರಿದಂತೆ ಅನೇಕ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

